Sunday, May 31, 2020

ಮಹಾಭಾರತ

--------- ಭಾಗ 1---------

ಪ್ರತಿಜ್ಞೆಯ ಮಾಡಿದನು ಭೀಷ್ಮನು
ಸಂಸಾರವನ್ನೆಂದಿಗೂ ಹೂಡೆನು
ಸಿಂಹಾಸನವನ್ನೆಂದಿಗೂ ಏರೆನು
ನಾನೆಂದೂ ಹಸ್ತಿನಾಪುರದರಸರ ದಾಸನು
ಹೀಗೆಂದು ಸತ್ಯವತಿಯನು ಓಲೈಸಿದನು
ತಂದೆಯ ಜೊತೆ ಅವಳ ಲಗ್ನವ ಮಾಡಿದನು

ಶಂತನು ಸತ್ಯವತಿಯರಿಗಾಯಿತು ಪುತ್ರ ಸಂತಾನ
ಹಿರಿಮಗ ಚಿತ್ರಾಂಗದ ಮಡಿದನು ಮಾಡುತ ಕದನ
ಕಿರಿಮಗ ವಿಚಿತ್ರವೀರ್ಯ ಅಲಂಕರಿಸಿದನು ಸಿಂಹಾಸನ
ಕಾಶೀಕುವರಿಯರ ಜೊತೆ ಆಯಿತವನ ಲಗ್ನ
ಸಂತಾನವಿಲ್ಲದೇ ಹೊಂದಿದನು ಅವನು ಅಕಾಲ ಮರಣ
ಬರಿದಾಯಿತು ಉತ್ತರಾಧಿಕಾರಿಯಿಲ್ಲದೆ ಸಿಂಹಾಸನ

ಸತ್ಯವತಿಗೆ ಕಾಡಿತು ಹಸ್ತಿನಾಪುರದ ಉತ್ತರಾಧಿಕಾರಿಯ ಚಿಂತೆ
ಆದೇಶ ಕೊಟ್ಟಳು ಮಗ ವ್ಯಾಸರಿಗೆ ನಿಯೋಗ ಮಾಡುವಂತೆ
ಋಷಿಯ ರೂಪವ ಕಂಡು ಕಣ್ಣು ಮುಚ್ಚಿ ನಿಂತಳು ಅಂಬಿಕೆ
ಕುರುಡು ಮಗ ಧೃತರಾಷ್ಟ್ರನ ಹೆತ್ತಳು ಆಕೆ
ಋಷಿಯ ರೂಪವ ಕಂಡು ಬಿಳಿಚಿದಳು ಅಂಬಾಲಿಕೆ
ಬಿಳಿಚಿಕೊಂಡವನಂತಿದ್ದ ಪಾಂಡುವನ್ನು ಪಡೆದಳಾಕೆ

ಮತ್ತೊಮ್ಮೆ ಋಷಿಯೆಡೆಗೆ ತೆರಳಲು ಹೆದರಿದಳು ಅಂಬಿಕೆ
ಕಳಿಸಿದಳು ತನ್ನ ದಾಸಿಯನು ವ್ಯಾಸರೊಡನೆ ನಿಯೋಗಕೆ
ಋಷಿಯ ರೂಪವ ಕಡೆಗಣಿಸಿ ಸಹಜವಾಗಿದ್ದಳು ದಾಸಿ  
ಆರೋಗ್ಯವಂತ ಬುದ್ಧಿಮತಿಯಾದ ವಿದುರನ ಪಡೆದಳಾಕೆ
ಭೀಷ್ಮನು  ಆಸರೆಯಾಗಿ ನಿಂತನು ಸಿಂಹಾಸನಕೆ
ಧೃತರಾಷ್ಟ್ರ ಪಾಂಡು ವಿದುರರು ಬಂದರು ಪ್ರಾಯಕೆ

Tuesday, May 5, 2020

ಬ್ರಹ್ಮಕಮಲ




ಅರಳಿತು ಬ್ರಹ್ಮಕಮಲ ಸುಗಂಧವ ಬೀರುತ
ಬೆಳದಿಂಗಳ ತಂಪನು ಹೀರುತ
ಕಂಗೊಳಿಸಿದೆ ನಕ್ಷತ್ರದಂತೆ ಮಿನುಗುತ
ಒಂದು ರಾತ್ರಿ ಮಾತ್ರ ಅದು ಜೀವಿತ
ಅರ್ಥವಿಲ್ಲದ ನೂರು ದಿನಕ್ಕಿಂತ
ಅರ್ಥಪೂರ್ಣವಾದ ಒಂದು ದಿನ ಸಾಕೆನ್ನುತ

Sunday, May 3, 2020

ಸಂಕ್ಷಿಪ್ತ ರಾಮಾಯಣ

ದಶರಥನು ಕತ್ತಲಿನಲಿ ಹೂಡಿದನು ಬಾಣ
ಕಳೆದನು ಶ್ರವಣನ ಪ್ರಾಣ
ಶ್ರವಣನ ಅಂಧ ಮಾತಾಪಿತರೂ ತೊರೆದರು ಪ್ರಾಣ
ದಶರಥನನು ಶಪಿಸಿದರು ಅವರಂತೆಯೇ ಹೊಂದಲು ಮರಣ

ದಶರಥನು ಕೈಕೇಯಿಗೆ ಕೊಟ್ಟ ವಚನದ ಕಾರಣ
ವನವಾಸಕೆ ಹೋದರು ರಾಮ ಸೀತೆ ಲಕ್ಷ್ಮಣ
ಅಲ್ಲಿ ರಾವಣನು ಮಾಡಿದನು ಸೀತಾಪಹರಣ
ರಾಮನು ಮಾಡಿದನು ಲಂಕೆಯ ಮೇಲೆ ಆಕ್ರಮಣ

ಯುದ್ಧದಲಿ ಹತರಾದರು  ಕುಂಭಕರ್ಣ ರಾವಣ
ಲಂಕಾಧಿಪತಿಯಾದನು ವಿಭೀಷಣ
ವನವಾಸವು ಆಗಿರಲು ಸಂಪೂರ್ಣ
ಅಯೋಧ್ಯೆಗೆ ಆಗಮಿಸಿದರು ರಾಮ ಸೀತೆ ಲಕ್ಷ್ಮಣ

ಆಯಿತು ರಾಮನ ಸಿಂಹಾಸನಾರೋಹಣ
ಎಲ್ಲರೂ ಹೊಗಳಿದರು ರಾಮನ ರಾಜಕಾರಣ
ಕೆಲ ಸಂಶಯಗ್ರಸ್ತ ಪ್ರಜೆಗಳು ಬಿಟ್ಟರು ಮಾತಿನ ಬಾಣ     
ಅದಾಯಿತು ಗರ್ಭವತಿ  ಸೀತಾ ಪರಿತ್ಯಾಗಕೆ ಕಾರಣ

ವಾಲ್ಮೀಕಿ ಆಶ್ರಮದಲಿ ಆಯಿತು ಲವಕುಶರ ಜನನ
ಬಾಲಕರು ಪಡೆದರು ಶಸ್ತ್ರಾಭ್ಯಾಸದ ವಿದ್ಯಾರ್ಜನ
ಕಟ್ಟಿದರವರು ರಾಮನ ಅಶ್ವಮೇಧ ಯಾಗದ ಹಯವನ್ನ
ಹಿಮ್ಮೆಟ್ಟಿಸಿದರು ಗುರುತಿಲ್ಲದ ತಮ್ಮ ಚಿಕ್ಕಪ್ಪರನ್ನ

ಗುರುಗಳು ತಪ್ಪಿಸಿದರು ರಾಮನೊಂದಿಗೆ ಬಾಲಕರ ಕದನ
ಆಜ್ಞಾಪಿಸಿದರು ಕ್ಷಮೆ ಕೇಳಿ ಹಿಂತಿರುಗಿಸಲು ಹಯವನ್ನ
ಅಯೋಧ್ಯೆಯಲಿ ಬಾಲಕರು ಹಾಡಲು ರಾಮಾಯಣದ ಕವನ
ಕಣ್ಣೀರಿಟ್ಟರು ಸೀತೆಯ ಕಥೆ ಕೇಳಿದ  ಜನ

ಬಾಲಕರೆಂದರು ಸೀತಾರಾಮರೆ ನಮ್ಮ ತಾಯಿ ತಂದೆ
ರಾಮ ಅದು ನಿಜವೆಂದು ಸೀತೆಗೆ ಶಪಥವ ಮಾಡೆಂದ ಎಲ್ಲರ ಮುಂದೆ
ಸೀತೆಯೆಂದಳು ಸಹಿಸೆನು ಇಂಥ ಅಪಮಾನವನು ಇನ್ನು ಮುಂದೆ
ಭೂತಾಯಿಯ ಮಡಿಲನು ಸೇರಿದಳು ಅವಳು ಎಲ್ಲರ ಕಣ್ಣ ಮುಂದೆ

ರಾಜಧರ್ಮವ ಪಾಲಿಸಲು ಸೀತೆಯ ಕಳೆದುಕೊಂಡನು ರಾಮ
ಕೊನೆಯಲಿ ಬಂದೊದಗಿತು ಲಕ್ಷ್ಮಣನನ್ನೂ ಪರಿತ್ಯಜಿಸ ಬೇಕಾದ ಕರ್ಮ
ಮೌಲ್ಯಗಳ ಮಹತ್ವವ ಸಾರಿದನು ಮರ್ಯಾದಾ ಪುರುಷೋತ್ತಮ
ಅವತಾರವ ಮುಗಿಸಿ ಸೇರಿದನು ಪರಂಧಾಮ