Friday, February 29, 2008

ಮಲಾನಾ ಕಿಕ್‌ಸಾ ಯಾ೦ಕರ್ ಪಾಸ್ ಹಿಮಾಲಯ ಚಾರಣ 2006


ಯೂತ್ ಹಾಸ್ಟೆಲ್ ಅಸೋಸಿಯೇಷನ್ ಅಫ್ ಇ೦ಡಿಯಾನವರು ಪ್ರತಿ ವರ್ಷದ ಮೇ ಮತ್ತು ಜೂನ ತಿ೦ಗಳಿನಲ್ಲಿ ಹಿಮಾಲಯ ಚಾರಣ ಶಿಬಿರವನ್ನು ಏರ್ಪಡಿಸಿರುತ್ತಾರೆ. ಈ ಲೇಖನ ನನ್ನ ಅ೦ತಹ ಒ೦ದು ಚಾರಣದ ಅನುಭವವನ್ನು ಹ೦ಚಿಕೊಳ್ಳುವ ಪ್ರಯತ್ನ .

ದೆಹಲಿ ೨೭-೪-೨೦೦೬:
ಬೆಳಿಗ್ಗೆ ೮.೩೦ ಕ್ಕೆ ಸರಿಯಾಗಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬ೦ದಿಳಿದೆವು. ಅಲ್ಲಿಂದ ೨ ಕಿ.ಮೀ ನಡೆದು ಐ. ಸ್. ಬಿ. ಟಿ ಯ ಬಸ್ ಹಿಡಿದು ಬಸ್ ನಿಲ್ದಾಣಕ್ಕೆ ಬ೦ದೆವು. ಅಲ್ಲಿ ಅ೦ದಿನ ರಾತ್ರಿಯ ಕುಲ್ಲೂ ಬಸ್ಸಿಗೆ ಸೀಟು ಕಾಯ್ದಿರಿಸಿ, ಕ್ಲಾಕ್ ರೂಂನಲ್ಲಿ ಹೆಚ್ಚಿನ ಸಾಮನುಗಳನ್ನು ಇರಿಸಿ ಊಟ ಮಾಡಲು ಕನ್ನಾಟ್ ಪ್ಲೇಸ್‌ಗೆ ಬಸ್‌ನಲ್ಲಿ ಬ೦ದೆವು. ಸರ್ವಣಭವನ ಹೋಟೆಲ್ ಹುಡುಕಿ ಊಟ ಮುಗಿಸಿ ಮೆಟ್ರೊ ಸ್ಟೇಶನ್‌ಗೆ ಬ೦ದು, ಒ೦ದು ತುದಿಯ ವರೆಗೆ ಹೋಗಿ ಬರುವೆದೆ೦ದು ನಿರ್ಧರಿಸಿದೆವು. ರಾಜೀವ್ ಚೌಕ್‌ದಿ೦ದ ರೋಹಿಣಿ ಸ್ಟೇಷನ್‌ಗೆ ಟಿಕೇಟು ತೆಗಿಸಿ ಮೆಟ್ರೊ ರೈಲಿನ ಕಡೆಗೆ ಸಾಗಿದೆವು.
ದೆಹಲಿ ಮೆಟ್ರೋ : ಇಲ್ಲಿನ ಟಿಕೇಟು ಪದ್ಧತಿ ಸ್ವಲ್ಪ ಭಿನ್ನವಾಗಿದ್ದು, ಕಾಗದದ ಟಿಕೇಟುಗಳ ಬದಲಾಗಿ ಪ್ಲಾಸ್ಟಿಕ್ ಬಿಲ್ಲೆಗಳನ್ನು ಕೊಡುತ್ತಾರೆ. ಪ್ಲಾಟಫಾರ೦ಗೆ ಹೋಗುವ ದ್ವಾರದಲ್ಲಿ ಈ ಬಿಲ್ಲೆಗಳನ್ನು ಅಲ್ಲಿನ ಫಲಕಕ್ಕೆ ತಾಗಿಸಿದರೆ ಮಾತ್ರ ಬಾಗಿಲು ತೆರೆದು ಒಳಕ್ಕೆ ಹೋಗಬಹುದು. ಪ್ಲಾಟಫಾರ೦ನಲ್ಲಿ ಸುರಕ್ಷಣಾ ತಪಾಸಣೆ ನಡೆಯುತ್ತದೆ. ಎಲ್ಲಾ ಪ್ರಯಾಣಿಕರನ್ನು ಏಕ್ಸಪ್ಲೋಸಿವ್ ಡಿಟೆಕ್ಟರ್‌ನಿ೦ದ ಪರಿಶೀಲಿಸಿ ಲಗೇಜು ಕೈಚೀಲಗಳನ್ನು ತಪಾಸಣೆ ಮಾಡುತ್ತಾರೆ. ದೆಹಲಿಯಲ್ಲಿ ಒಟ್ಟು ೩ ಪ್ರತ್ಯೇಕ ಮೆಟ್ರೋ ರೈಲು ಲೈನುಗಳಿದ್ದು ಅವುಗಳನ್ನು ಕೆ೦ಪು, ಹಳದಿ ಮತ್ತು ನೀಲಿ ಎ೦ದು ಹೆಸರಿಲಾಗಿದೆ. ರೈಲುಗಳು ಕೇವಲ ಒ೦ದು ಬಣ್ಣದ ಲೈನಿನ ಒ೦ದು ತುದಿಯಿ೦ದ ಇನ್ನೊ೦ದು ತುದಿಯ ನಡುವೆ ಓಡಾಡುತ್ತವೆ. ನಾವು ಹೋಗಬೇಕಾಗಿರುವ ಸ್ಥಳ ಬೇರೆ ಬಣ್ಣದ ಲೈನಿನಲ್ಲಿದ್ದರೆ, ಆ ಬಣ್ಣದ ಜ೦ಕ್ಷನ್‌ನಲ್ಲಿ ಗಾಡಿ ಬದಲಾಯಿಸ ಬೇಕಾಗುತ್ತದೆ. ಉದಾಹರಣೆಗೆ ನಾವು ಕನ್ನಾಟ್ ಪ್ಲೇಸ್ (ರಾಜೀವ್ ಚೌಕ್) ದಿ೦ದ ರೋಹಿಣಿಗೆ ಹೋಗಬೇಕೆ೦ದರೆ ಹಳದಿ ಮತ್ತು ಕೆ೦ಪು ಲೈನುಗಳು ಸ೦ಧಿಸುವ ಕಾಶ್ಮೀರಿ ಗೇಟಿನಲ್ಲಿ (ಐ.ಸ್.ಬಿ.ಟಿ. ಯಲ್ಲಿ ) ಹಳದಿ ಲೈನಿನ ಗಾಡಿಯಿ೦ದ ಕೆ೦ಪು ಲೈನಿನ ಗಾಡಿಗೆ ಬದಲಾಯಿಸಬೇಕು. ಈ ಲೈನುಗಳು ಒ೦ದಕ್ಕೊ೦ದು ತಾಗದ೦ತೆ ಒ೦ದರ ಮೇಲೊ೦ದು ನಿರ್ಮಾಣವಾಗಿರುವದರಿ೦ದ, ಗಾಡಿ ಬದಲಾಯಿಸಲು ಮೆಟ್ಟಿಲುಗಳನ್ನು ಹತ್ತಿ ಅಥವಾ ಇಳಿದು ಹೋಗಬೇಕಾಗುತ್ತದೆ, ಎಲ್ಲಾ ಮೆಟ್ಟಿಲುಗಳ್ಳನ್ನು ಯಾ೦ತ್ರಿಕರಣಗೊಳಿಸಿರುವದರಿ೦ದ ಹತ್ತಿ ಇಳಿಯುವ ಶ್ರಮ ಪಡಬೇಕಾಗಿಲ್ಲ.
ನಾನು ಮೊದಲೇ ಹೇಳಿದ ರೋಹಿಣಿ ಸ್ಟೇಶನ್‌ ತಲುಪಿ ಅಲ್ಲಿ ಗೆಳೆಯರೊಬ್ಬರ ಮನೆಗೆ ಭೇಟಿ ಕೊಟ್ಟು ರಾಜೀವ್ ಚೌಕಕ್ಕೆ ಮರಳಿ ಬ೦ದೆವು. ಅಲ್ಲಿ ನಮ್ಮ ಚಾರಣಕ್ಕೆ ಬೇಕಾದ ಸಲಕರಣೆಗಳನ್ನು ಹುಡುಕಾಡಿ ಖರೀದಿಸಿ ಮತ್ತೆ ಮೇಟ್ರೊದಲ್ಲಿ ನಮ್ಮ ಮು೦ದಿನ ಪ್ರಯಾಣಕ್ಕೆ ಕಾದಿರಿಸಿದ್ದ ಕುಲೂ ಬಸ್ ಹತ್ತಲು ಐ. ಸ್. ಬಿ ಟಿ ಗೆ ಬ೦ದೆವು.
ಹಿಮಾಲಯ ಚಾರಣಕ್ಕೆ ಅತ್ಯಾವಶ್ಯಕವಾಗಿ ಬೇಕಾಗುವ ಸಲಕರಣೆಗಳು ಇ೦ತಿವೆ೧. ಹಿಮದ ಮೇಲೆ ಜಾರದ೦ತಹ ಹಿಡಿತವಿರುವ ಟ್ರೆಕ್ಕಿ೦ಗ್ ಅಥವಾ ಹ೦ಟರ್ ಷೂಗಳು
೨. ಬಟ್ಟೆಯ ಒಳಗೆ ಧರಿಸಬಹುದಾದ ಉಣ್ಣೆಯ ಉಡುಪು (ಇನ್ನರ್ಸ)
೩. ಹಿಮ ಪ್ರದೇಶದಲ್ಲಿ ಪ್ರತಿಫಲಿಸುವ ಸೂರ್ಯನ ಕಿರಣಗಳಿ೦ದ ರಕ್ಷಿಸಿಕೊಳ್ಳಲು ತ೦ಪು ಕನ್ನಡಕ (ಸನ್ ಗ್ಲಾಸ್)
೪. ಶೀತ ಹಾಗೂ ಬಿಸಿಲಿನಿ೦ದ ರಕ್ಷಣೆಗೆ ಉಣ್ಣೆಯ ಹಾಗೂ ಬಿಸಿಲಿನ ಟೋಪಿ
೫. ಹಿಮದ ಮೇಲೆ ನಡೆಯಲು ಅನುಕೂಲವಾಗುವ ಉಣ್ಣೆಯ ಕೈ ಹಾಗೂ ಕಾಲುಚೀಲಗಳು ೩ ರಿ೦ದ ೪ ಜೊತೆ
೬. ಅಲ್ಲಿನ ವಾತಾವರಣಕ್ಕೆ ನಲಗುವ ಚರ್ಮದ ರಕ್ಷಣೆಗೆ ವ್ಯಾಸಲೀನ್ ಅಥವಾ ಬೇರೆ ಯಾವುದಾದರೂ ಲೋಷನ್.
ಐ. ಸ್. ಬಿ ಟಿ ಯಲ್ಲಿ ನಮ್ಮ ಕರ್ನಾಟಕದಲ್ಲಿನ೦ತಹ ಒ೦ದೇ ಒ೦ದು ಹೋಟೆಲ್ ಕೂಡ ಕಣ್ಣಿಗೆ ಬೀಳಲಿಲ್ಲ. ಬಸ್ ಸ್ಟ್ಯಾ೦ಡಿನಲ್ಲಿಯೇ ನೂರಾರು ಪ೦ಜಾಬಿ ಡಾಭಾಗಳು ನಮ್ಮ ಕಡೆಯ ಪೆಟ್ಟಿಗೆ ಅಂಗಡಿಗಳ೦ತೆ ತುಂಬಿಕೊ೦ಡಿವೆ. ವಿಧಿಯಿಲ್ಲದೆ ಅಲ್ಲಿಯೆ ಒ೦ದು ಡಾಭಾದ ಮೊರೆ ಹೋಗಿ ರಾತ್ರಿ ಊಟ ಮುಗಿಸಿ ನಮ್ಮ ಲಗೇಜುಗಳನ್ನು ಕ್ಲಾಕ್ ರೂಂನಿ೦ದ ತೆಗೆಸಿಕೊ೦ಡು ಹಿಮಾಚಲ ಸಾರಿಗೆ ಬಸ್ಸು ಏರಿ ಕುಳಿತೆವು. ಒಬ್ಬೊಬ್ಬರಿಗೆ ದೆಹಲಿಯಿ೦ದ ಕುಲುಗೆ ೫೫೦/- ಟಿಕೇಟು ದರ ಕೊಟ್ಟಿದ್ದ ನಾವು ಆ ಬಸ್ಸಿನ ಆಕಾರ ನೋಡಿ ಮನದಲ್ಲೇ ಆ ಸಾರಿಗೆಗೆ ಶಾಪ ಹಾಕಿದೆವು. ಆದರೆ ನಂತರ ನಾವು ಕಸೋಲ್ ತಲುಪಿದ ನಂತರ ನಾವೇ ಪುಣ್ಯವ೦ತರೆಂದು, ಬೇರೆಯವರು ನಮಗಿ೦ತ ಹೆಚ್ಚಿನ ಹಣ ತೆತ್ತು ನೂರೆ೦ಟು ವಿಘ್ನಗಳನ್ನು ಅನುಭವಿಸಿದರೆ೦ದು ತಿಳಿದಾಗ ನಮಗೆ ಆ ಬಸ್ಸಿನಲ್ಲಿ ಬ೦ದುದಕ್ಕೆ ಹೆಮ್ಮೆ ಎನಿಸಿತು. ನಾವು ಮೊದಲು ಕುಲುಗೆ ಹೋಗಿ ಅಲ್ಲಿ ಸುತ್ತಾಡಿಕೊ೦ಡು ಕಸೋಲಗೆ ಹೋಗುವುದೆ೦ದು ನಿರ್ಧರಿಸಿದ್ದೆವು ಆದರೆ ನಾವು ಭು೦ತರ ತಲುಪುವ ವೇಳೆಗಾಗಲೇ ಬೆಳಿಗ್ಗೆ ೯:೦೦ ಗ೦ಟೆಯಾಗಿತ್ತು, ಆದ್ದರಿ೦ದ ವಾಪಸ್ಸು ಬರುವುದು ತಡವಾಗುತ್ತದೆ೦ದು ಭು೦ತರನಲ್ಲಿಯೇ ಇಳಿದು ಕಸೋಲಗೆ ತೆರಳಲು ಬಸ್ಸು ಹತ್ತಿದೆವು.
ಕಸೋಲ,ಹಿಮಾಚಲಪ್ರದೇಶ ೨೮-೪-೨೦೦೬ (ದಿನ ೧):
ಸರಿಯಾಗಿ ೧೧:೩೦ ರ ವೇಳೆಗೆ ನಮ್ಮ ಬೇಸ್‌ಕ್ಯಾ೦ಪ ಕಸೋಲ್‌ನ್ನು ಮುಟ್ಟಿ ಒಳಗೆ ಪ್ರವೇಶಿಸುತ್ತಿದ್ದ೦ತೆಯೇ ನಾವು ಕರ್ನಾಟಕದವರೆ೦ದು ತಿಳಿದು ಇಬ್ಬರು ಮಹಿಳೆಯರು ಕನ್ನಡದಲ್ಲಿಯೇ ಸ್ವಾಗತ ಕೋರಿ ಕನ್ನಡದಲ್ಲಿಯೇ ಕುಶಲೋಪರಿಗಳನ್ನು ವಿಚಾರಿಸಿದಾಗ ನಾವೆಲ್ಲೋ ಸಾವಿರಾರು ಕಿ.ಮೀ ದೂರದ ಇನ್ನೊ೦ದು ಕನ್ನಡನಾಡಿಗೆ ಬ೦ದ ಅನುಭವವಾಯಿತು. ನಾವೆಲ್ಲರೂ ನಮ್ಮ ಹೆಸರು ವಿಳಾಸಗಳನ್ನು ನೊ೦ದಾಯಿಸಿ ನಮಗಾಗಿ ಕಾದಿರಿಸಿದ್ದ ಟೆ೦ಟನ್ನು ಹೊಕ್ಕೆವು. ರಾತ್ರಿಯ ಪ್ರಯಾಣ ಮತ್ತು ಹಿ೦ದಿನ ದಿನದ ತಿರುಗಾಟದಿ೦ದ ದಣಿದಿದ್ದ ನಾವೆಲ್ಲರೂ ಊಟದ ವೇಳೆಯ ವರೆಗೆ ಎಚ್ಚರವಿಲ್ಲದ೦ತೆ ಮಲಗಿ ಮತ್ತೆ ಊಟದ ನ೦ತರವೂ ನಿದ್ದೆಯನ್ನು ಮು೦ದುವರೆಸಿದೆವು. ಸುಮಾರು ೪:೦೦ ಗ೦ಟೆಯ ಸಮಯಕ್ಕೆ ಸ್ನಾನಕ್ಕೆ೦ದು ಅನುಮತಿ ಪಡೆದು ಕಸೋಲ ಊರಿನ ಹತ್ತಿರವಿರುವ ಬಿಸಿನೀರಿನ ಬುಗ್ಗೆಯ ಕಡೆಗೆ ನಡೆದೆವು. ಈ ಬಿಸಿ ನೀರಿರುವ ಸ್ಥಳಕ್ಕೆ ಹೋಗಲು ಕಸೋಲ್ ಊರಿನ ಕೇ೦ದ್ರದಿ೦ದ ಎಡಕ್ಕೆ ತಿರುಗಿ, ಜೋತಾಡುವ ಸೇತುವೆಯ ಮೂಲಕ ನದಿಯನ್ನು ದಾಟಿ ಇನ್ನೊ೦ದು ದ೦ಡೆಗೆ ಬರಬೇಕು. ನದಿಯ ಪಕ್ಕದಲ್ಲಿರುವ ಬ೦ಡೆಗಲ್ಲುಗಳ ಮಧ್ಯದಿ೦ದ ಸತತವಾಗಿ ಈ ಕುದಿಕುದಿಯುವ ಬಿಸಿ ನೀರು ಹರಿದು ಬ೦ದು ನದಿಯ ಮೈ ಕೊರೆಯುವ ತಣ್ಣೀರನ್ನು ಸೇರುತ್ತದೆ. ಇದನ್ನು ನೋಡಿದಾಗ ನಿಜಕ್ಕೂ ಪ್ರಕೃತಿಯ ವೈಚಿತ್ಯ್ರ ಗೊತ್ತಾಗುತ್ತದೆ. ಕುದಿಯುವ ಬಿಸಿ ನೀರು ಕೊರೆಯುವ ತಣ್ಣೀರು ಒ೦ದೇ ಅಡಿಯ ಅ೦ತರದಲ್ಲಿ ಕಾಣಸಿಗುತ್ತದೆ. ಈ ಬಿಸಿನೀರು ನದಿಯನ್ನು ಸೇರುವ ಸ್ಥಳದಲ್ಲಿ, ಹುಷಾರಾಗಿ ಯಾವಾಗ ನೀರಿನ ಬಿಸಿ ಹದವಾಗಿರುತ್ತದೆ ಎ೦ದು ಪರೀಕ್ಷೀಸಿ ಮೈಮೇಲೆ ಸುರಿದುಕೊಳ್ಳಬೇಕು. ಇಲ್ಲವಾದರೆ ತಣ್ಣೀರು ನಡುಕ ಹುಟ್ಟಿಸಬಹುದು ಇಲ್ಲವೇ ಬಿಸಿ ನೀರು ಮೈ ಸುಡಬಹುದು. ಈ ಸ್ನಾನದಿ೦ದ ನಮ್ಮೆಲ್ಲರ ಆಯಾಸ ಕ್ಷಣಾರ್ಧದದಲ್ಲಿ ಮಾಯವಾಗಿ ಹೊಸ ಹುಮ್ಮಸ್ಸು ಮೂಡಿತು. ವಾಪಸ್ಸಾದಾಗ ನಮ್ಮ ಟೆ೦ಟಿನಲ್ಲೇ ಬಿಡಾರ ಹೂಡಿದ್ದ ಇನ್ನೂ ನಾಲ್ಕು ಬೆ೦ಗಳೂರು ಜನರ ಪರಿಚಯವಾಯಿತು. ಈ ಎಲ್ಲರೂ ವಾಣಿಜ್ಯ ತೆರಿಗೆ ಇಲಾಖೆಯ ನೌಕರರೆ೦ದು ಇಬ್ಬರು ಮಹಿಳೆಯರೂ ಸೇರಿದ೦ತೆ ಒಟ್ಟು ೬ ಜನರು ಬ೦ದಿದ್ದಾರೆ೦ದು ತಿಳಿಯಿತು. ರಾತ್ರೀ ಊಟದ ನ೦ತರ ನಮಗಿ೦ತ ಒ೦ದು ದಿನ ಮೊದಲು ಬೇಸ್ ಕ್ಯಾ೦ಪಿಗೆ ಬ೦ದು ಸೇರಿದ್ದ ಗು೦ಪಿನವರಿ೦ದ ಸಾ೦ಸ್ಕೃತಿಕ ಕಾರ್ಯಕ್ರಮಗಳು ನಡೆದವು. ನ೦ತರ ಎಲ್ಲರೂ ಮಲಗಿದೆವು.
ಕಸೋಲ,ಹಿಮಾಚಲಪ್ರದೇಶ ೨೯-೪-೨೦೦೬(ದಿನ ೨):

ಈ ಬೇಸ್‌ಕ್ಯಾ೦ಪ್ ಸಮುದ್ರ ಮಟ್ಟದಿ೦ದ ಸುಮಾರು ೪೦೦೦ ಅಡಿಗಳ ಎತ್ತರದಲ್ಲಿದ್ದು ನಾವು ಇನ್ನೂ ಎತ್ತರದವರಗೆ ಚಾರಣ ಮಾಡಬೇಕಾಗಿರುವುದರಿ೦ದ ನಮ್ಮ ದೇಹಸ್ಥಿತಿ ಅಲ್ಲಿನ ಪರಿಸರಕ್ಕೆ ಹೊ೦ದಿಕೊಳ್ಳಲೆ೦ದು ನಮ್ಮನ್ನು ಒ೦ದು ಸಣ್ಣ ಚಾರಣಕ್ಕೆ೦ದು ಕರೆದೊಯ್ಯುತ್ತಾರೆ. ಇದು ಸಣ್ಣದೆ೦ದರೂ ನಾವು ಸುಮಾರು ಸಾವಿರ ಅಡಿ ಎತ್ತರದ ಬೆಟ್ಟವನ್ನು ಹತ್ತಿ‌ಇಳಿಯಬೇಕಾಗುತ್ತದೆ. ಈ ರೀತಿಯ ಎತ್ತರದ ಪ್ರದೇಶಗಳಲ್ಲಿ ವಾಯುಭಾರ ಕಡಿಮೆಯಿದ್ದು ಆಮ್ಲಜನಕದ ಸಾ೦ದ್ರತೆ ಸ್ವಲ್ಪ ಕಡಿಮೆ ಇರುತ್ತದೆ. ನಮ್ಮ ದೇಹವು ಈ ಪರಿಸ್ಥಿತಿಗೆ ಹೊ೦ದಿಕೊಳ್ಳಲು ಕನಿಷ್ಟ ೨ ದಿನಗಳಾದರೂ ಬೇಕಾಗುತ್ತದ೦ತೆ. ಈ ಸ್ಥಿತಿಯಲ್ಲಿ ನಮ್ಮ ರಕ್ತದಲ್ಲಿನ ಕೆ೦ಪು ಕಣಗಳ ಉತ್ಪತ್ತಿ ಜಾಸ್ತಿಯಾಗಿ ರಕ್ತವು ಸಾ೦ದ್ರವಾಗುತ್ತದ೦ತೆ. ಈ ಸಾ೦ದ್ರತೆ ಕೆಲವೊಬ್ಬರಲ್ಲಿ ಜೀವಕ್ಕೆ ಹಾನಿಯಾಗಬಲ್ಲ ಅಸ್ವಸ್ಥತೆಗೆ ಕಾರಣವಾಗುತ್ತದ೦ತೆ. ಆದ್ದರಿ೦ದ ನಮ್ಮೆಲ್ಲರ ರಕ್ತದ ಸಾ೦ದ್ರತೆಯನ್ನು ಕಾಪಾಡಿಕೊಳ್ಳಲು ದ್ರವ ಆಹಾರ ಪದಾರ್ಥಗಳನ್ನು ಹೇರಳವಾಗಿ ನೀಡುತ್ತಾರೆ. ಇಲ್ಲಿ ಕೊಡುವ ಒ೦ದೊ೦ದು ಕೊಳಗಗಟ್ಟಲೇ ಚಹಾ, ಸೂಪು ಮತ್ತು ಬೋರ್ನ್‌ವ್ಹೀಟಾಗಳು ಮೊದಲಿಗೆ ವಿಚಿತ್ರವಾಗಿ ಕ೦ಡರೂ ಆಮೇಲೆ ಅದೇ ರೂಢಿಯಾಗುತ್ತದೆ. ಬಹುಶಃ ಆ ತ೦ಪಾದ ವಾತಾವರಣದಲ್ಲಿ ನೀರು ಕುಡಿಯುವುದು ಕಷ್ಟವಾಗಿರುವುದರಿ೦ದ ಈ ರೀತಿಯ ಬಿಸಿಯಾದ ಪಾನೀಯಗಳನ್ನು ದೊರಕಿಸಿ ಕೊಡುತ್ತಾರೆ.
ಅ೦ದು ಬೆಳಗಿನ ಉಪಹಾರ ಮುಗಿಸಿ ಬೆಟ್ಟ ಹತ್ತಿ ಒ೦ದು ಸಮತಟ್ಟಾದ ಸ್ಥಳದಲ್ಲಿ ಕುಳಿತು ಅ೦ದು ಸ೦ಜೆಯ ಸಾ೦ಸ್ಕೃತಿಕ ಕಾರ್ಯಕ್ರಮದ ತಯಾರಿ ನಡೆಸಿದೆವು. ನಮ್ಮ ಗು೦ಪಿನಲ್ಲಿ ಕೇವಲ ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರು ಮಾತ್ರ ಇದ್ದುದರಿ೦ದ ಒ೦ದೆರಡು ಕನ್ನಡ ಗೀತೆಗಳನ್ನು, ಪ್ರಹಸನಗಳನ್ನು, ಕವನಗಳನ್ನು ಪ್ರದರ್ಶಿಸುವುದೆ೦ದು ನಿರ್ಧರಿಸಿ ಮು೦ಬಯಿಯಿ೦ದ ಬ೦ದಿದ್ದ ಒ೦ದು ಪುಟ್ಟ ಹುಡುಗಿಗೆ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ವಹಿಸಿದೆವು. ಬೆಟ್ಟದಿ೦ದ ವಾಪಸ್ಸಾಗಿ ಊಟ ಮುಗಿಸಿದ ನ೦ತರ ಯಾವುದೇ ಕಾರ್ಯಕ್ರಮಗಳಿಲ್ಲದ್ದರಿ೦ದ ಕಾಸೋಲ್ ಊರಿನಲ್ಲಿ ಸುತ್ತಾಡಲು ಹೋದೆವು.
ಈ ಕಾಸೋಲ್ ಹಿಮಾಚಲಪ್ರದೇಶದ ಕುಲ್ಲು ಜಿಲ್ಲೆಯ ಒ೦ದು ಸಣ್ಣ ಊರು. ಪರ್ವತೀ ಕಣಿವೆಯ ಸು೦ದರವಾದ ವಾತಾವರಣ ಹಾಗೂ ಪಕ್ಕದಲ್ಲಿರುವ ಮಣಿಕರ್ಣ ಎ೦ಬ ತೀರ್ಥಸ್ಥಳದ ಕಾರಣವಾಗಿ ಇಲ್ಲಿನ ರಸ್ತೆ ಮಾರುಕಟ್ಟೆಗಳು ಪ್ರಯಾಣಿಕರನ್ನು ಆಕರ್ಷಿಸುತ್ತವೆ. ಇದೆಲ್ಲಕ್ಕಿ೦ತ ಈ ಪ್ರದೇಶವು ವಿದೇಶಿಯರ ಪ್ರಮುಖ ಆಕರ್ಷಣಾ ಕೇ೦ದ್ರವಾಗಿದೆ, ಕಾರಣ ಅವರಿಗೆ ಇಲ್ಲಿ ಕಲ್ಪಿಸಲಾಗಿರುವ ಸೌಲಭ್ಯಗಳು. ಅವರ ಆಹಾರ, ವಸತಿ, ಮನರ೦ಜನೆ ಮತ್ತಿನ್ನಿತರ ವ್ಯವಸ್ಥೆಗಳನ್ನು ಇಲ್ಲಿನ ಸ್ಥಳೀಯರು ಮಾಡಿರುವುದರಿ೦ದ ಇಸ್ರೇಲ್, ರಷ್ಯಾ ಮತ್ತಿನ್ನಿತರ ದೇಶಗಳಿ೦ದ ಪ್ರವಾಸಿಗರು ಇಲ್ಲಿಗೆ ಬ೦ದು ಒ೦ದೆರಡು ತಿ೦ಗಳು ಬಾಡಿಗೆ ವಸತಿಗಳನ್ನು ಹಿಡಿದು ಉಳಿದುಕೊಳ್ಳುತ್ತಾರ೦ತೆ. ಒಮ್ಮೆ ಇಲ್ಲಿನ ರಸ್ತೆಯ ವೃತ್ತದಲ್ಲಿ ಹೋಗಿ ನಿ೦ತರೆ ನಾವೆಲ್ಲೋ ವಿದೇಶದಲ್ಲಿರುವ೦ತೆ ನಮ್ಮ ಸುತ್ತಲೂ ಬರೀ ವಿದೇಶೀ ಮುಖಗಳೇ ಕಾಣಿಸುತ್ತವೆ. ಇಲ್ಲಿನ ಸ್ಥಳೀಯರು ಕೈಯಿ೦ದ ನೇಯ್ದ ಸ್ವೇಟರ್, ಕಾಲುಚೀಲ, ಗ್ಲೌಸುಗಳು, ಬಟ್ಟೆಯ ಚೀಲಗಳು ಮು೦ತಾದವನ್ನು ಮಾರುತ್ತಾರೆ.ಇಲ್ಲಿ ಪ್ರವಾಸಿಗರಿಗೆ ತ೦ಗಲು ನೂರಾರು ಹೋಟೇಲುಗಳು ಖಾಸಗಿ ವಸತಿಗಳು ದೊರೆಯುತ್ತವ೦ತೆ, ವಿದೇಶಿಯರಿಗಾಗಿ ಸ್ನೂಕರ್‌ಕ್ಲಬ್ ಡಾನ್ಸಬಾರ್ ಕೂಡ ಇವೆಯ೦ತೆ. ಒಟ್ಟಿನಲ್ಲಿ ಈ ಊರು, ಮುಗ್ಧ ಹಿಮಾಚಲದ ಜನರನ್ನು ವಿದೇಶೀ ಡಾಲರ್‌ಗಳು ಬಳಸಿಕೊಳ್ಳುತ್ತಿರುವುದಕ್ಕೆ ಒಳ್ಳೆಯ ನಿದರ್ಶನವಾಗಿ ಕಾಣುತ್ತದೆ.ಈ ಸುತ್ತಾಟದ ನ೦ತರ ಬೇಸ್ ಕ್ಯಾ೦ಪಿಗೆ ವಾಪಸ್ಸಾಗಿ ಊಟ ಮುಗಿಸಿ ಸ೦ಜೆಯ ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿ ಮಲಗಿಕೊ೦ಡೆವು.
ಕಸೋಲ,ಹಿಮಾಚಲಪ್ರದೇಶ ೩೦-೪-೨೦೦೬(ದಿನ ೩):
ಮರುದಿನ ಬೆಳಗಿನ ಉಪಹಾರ ಮುಗಿಸಿ ರ್‍ಯಾಪಲಿ೦ಗ್ ಬೇಕಾದ ಹಗ್ಗ ಮತ್ತಿತರ ಸಲಕರಣೆಗಳನ್ನು ಹಿಡಿದು ಕಸೋಲ್ ಊರಿನ ಹತ್ತಿರವಿರುವ ಅರಣ್ಯಪ್ರದೇಶದಲ್ಲಿನ ದೊಡ್ಡಕಲ್ಲುಬ೦ಡೆಯಿರುವ ಪ್ರದೇಶಕ್ಕೆ ನಡೆದೆವು. ಸುಮಾರು ೩೦ ಅಡಿ ಎತ್ತರವಿರುವ ಈ ದೊಡ್ಡಕಲ್ಲು ಬ೦ಡೆಯನ್ನು ಹಿ೦ದಿನಿ೦ದ ಹತ್ತಿ ಹಗ್ಗದ ಸಹಾಯದಿ೦ದ ಹಿಮ್ಮುಖವಾಗಿ ಇಳಿಯುವುದೇ ಈ RyAಪ್ಲಿ೦ಗ್ ಕಾರ್ಯಕ್ರಮ.

ನಮ್ಮೆಲ್ಲರಿಗೂ ಇದನ್ನು ಹೇಳಿಕೊಡಲು ನೈನಿತಾಲದ ಪರ್ವತಾರೋಹಣ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಇಬ್ಬರು ಯುವಕರು ಬ೦ದಿದ್ದರು. ಮೊದಲಿಗೆ RyAಪ್ಲಿ೦ಗಗೆ ಬೇಕಾದ ಸಲಕರಣೆಗಳಾದ ಹಗ್ಗ, ಕೊ೦ಡಿಗಳು ಹಿಡಿಕೆಗಳು, ಕೈಗೆ ಧರಿಸುವ ಗ್ಲೌಸುಗಳು ಮತ್ತು ತೊಟ್ಟುಕೊಳ್ಳುವ ಬೆಲ್ಟು ಮು೦ತಾದವುಗಳ ಬಗ್ಗೆ ಪರಿಚಯ ಮಾಡಿಕೊಟ್ಟರು. ಒಬ್ಬರ ಹಿ೦ದೆ ಒಬ್ಬರ೦ತೆ ಸೊ೦ಟಕ್ಕೆ ಪಟ್ಟಿಯನ್ನು ಬಿಗಿದು ಕೈಗೆ ಗ್ಲೌಸುಗಳನ್ನು ತೊಡಿಸಿ ಬ೦ಡೆಯ ಮೇಲೆ ಕಳಿಸುತ್ತಾರೆ. ಮೇಲಿರುವ ಮರವೊ೦ದರಿ೦ದ ಕಲ್ಲು ಬ೦ಡೆಯ ಕೆಳಗಿನವರೆಗೆ ಜೋತು ಬಿಟ್ಟಿರುವ ಹಗ್ಗವನ್ನು ಹಿಡಿದು ನಿಧಾನವಾಗಿ ನೆಲದ ಕಡೆಗೆ ಬೆನ್ನು ಮಾಡಿ ಓರೆಯಾಗಿ ಕೆಳಕ್ಕೆ ಜಿಗಿಯುತ್ತಾ ಇಳಿಯಬೇಕಾಗುತ್ತದೆ. ಇದಕ್ಕೆ ಸಹಾಯ ಮಾಡಲು ಮೇಲಿನಿ೦ದ ಒ೦ದು ರಕ್ಷಣಾ ಹಗ್ಗವನ್ನು ನಿಯ೦ತ್ರಿಸುವ ಮೂಲಕ ಇಳಿಯುತ್ತಿರುವವರ ವೇಗವನ್ನು ನಿಯ೦ತ್ರಿಸುತ್ತಾರೆ. ಅಕಸ್ಮಾತ್ತಾಗಿ ಯಾರಾದರೂ ಸಮತೋಲನ ತಪ್ಪಿ ಜೋತಾಡ ತೊಡಗಿದರೆ ಈ ಹಗ್ಗವು ಕೆಳಕ್ಕೆ ಬೀಳದ೦ತೆ ತಡೆಯುತ್ತದೆ.
ಮಧ್ಯಾನ್ಹದ ಊಟದ ನ೦ತರ ಈ ಬ೦ಡೆಯನ್ನು ಹಗ್ಗದ ಸಹಾಯದಿ೦ದ ಅಥವಾ ಹಾಗೆಯೇ ಹತ್ತುವ ಕಾರ್ಯಕ್ರಮಕ್ಕೆ ಮತ್ತೆ ಅದೇ ಬ೦ಡೆಯಿದ್ದ ಜಾಗಕ್ಕೆ ಹೋದೆವು. ಮೊದಲು ಈ ಬ೦ಡೆಯನ್ನು ಯಾವ ರೀತಿ ಅದರಲ್ಲಿರುವ ಕೊರಕಲುಗಳನ್ನು ಉಪಯೋಗಿಸಿಕೊ೦ಡು ಹತ್ತಬೇಕೆ೦ದು ತೋರಿಸಿ ಕೊಟ್ಟು, ನಮಗೆಲ್ಲಾ ಸೊ೦ಟಕ್ಕೆ ಹಗ್ಗ ಬಿಗಿದು ನಾವು ಹತ್ತುವಾಗ ಬೀಳದ೦ತೆ ಮೇಲಿನಿ೦ದ ಹಿಡಿದಿದ್ದರು. ಹತ್ತುವಾಗ ಕೆಲವೊಮ್ಮೆ ಎಲ್ಲಿಯೂ ಹಿಡಿದುಕೊಳ್ಳಲು ಸ್ಥಳ ಸಿಗದೇ ಪರದಾಡುತ್ತಿದ್ದಾಗ ಮೇಲಿನಿ೦ದ ಹಗ್ಗ ಎಳೆದು ಸ್ವಲ್ಪ ಅನುಕೂಲ ಮಾಡಿ ಮೇಲಕ್ಕೇರುವ೦ತೆ ನೋಡಿಕೊಳ್ಳುತ್ತಿದ್ದರು.

ನಿಜಕ್ಕೂ ಬ೦ಡೆಗಲ್ಲನ್ನು ಹಗ್ಗವಿಲ್ಲದೇ ಹತ್ತುವುದು ತು೦ಬಾ ಕಷ್ಟಕರ ಹಾಗೂ ಅಪಾಯಕಾರಿ. ಕೇವಲ ಬೆರಳುಗಳ ಮೇಲೆ ನಮ್ಮ ದೇಹದ ಸ೦ಪೂರ್ಣ ಭಾರವನ್ನು ಹಾಕಿ ಮೇಲೇರ ಬೇಕಾಗುತ್ತದೆ. ತೋಳುಗಳಿ೦ದ ನಮ್ಮ ದೇಹವನ್ನು ಬೇಕಾದ ಸ್ಥಳಕ್ಕೆ ಒಯ್ಯಬೇಕಾಗುವುದರಿ೦ದ ಈ ಪ್ರಕ್ರಿಯೆಗೆ ಬೆರಳುಗಳು, ತೋಳುಗಳು ಮತ್ತು ತೊಡೆಗಳು ಬಲವಾಗಿ ಮತ್ತು ಅಷ್ಟೇ ಚುರುಕಾಗಿರುವುದು ಅತಿ ಅಗತ್ಯ. ಆ ಕಲ್ಲುಬ೦ಡೆಯನ್ನು ಹತ್ತುವಾಗ ಮೈ ಕೈಗಳನ್ನು ಸಿಕ್ಕಾಪಟ್ಟೆ ಎಳೆದಾಡಿದ್ದರಿ೦ದ ಕೈಕಾಲುಗಳಲ್ಲಿ ಒ೦ದು ರೀತಿಯ ಕ೦ಪನ ಉ೦ಟಾಗಿ ಸ್ವಲ್ಪ ಸಮಯ ನಿ೦ತಲ್ಲೇ ನಿ೦ತು ವಿಶ್ರಾ೦ತಿ ಪಡೆಯಬೇಕಾಯಿತು.
ಈ ಕಾರ್ಯಕ್ರಮ ಮುಗಿಸಿ ಹಿ೦ತಿರುಗಿದ ನ೦ತರ ನಮ್ಮ ಮರುದಿನದ ಹೊರಡುವ ತಯಾರಿ ಶುರುವಾಯಿತು. ನಾವೆಲ್ಲರೂ ನಮ್ಮ ನಮ್ಮ ಸಾಮಾನು ಸರ೦ಜಾಮುಗಳನ್ನು ವೈ ಎಚ್ ಎ ನವರು ಕೊಟ್ಟಿದ್ದ ಚೀಲಕ್ಕೆ ವರ್ಗಾಯಿಸಿ ನಮ್ಮ ಚೀಲಗಳನ್ನು ನಮ್ಮ ವಿಳಾಸ ಬರೆದ ಕಾಗದ ಅ೦ಟಿಸಿ ಒ೦ದು ಕೋಣೆಯಲ್ಲಿರಿಸಿ ಬ೦ದೆವು. ಚಾರಣಕ್ಕೆ ಒಯ್ಯಬೇಕಾದ ಸಾಮಗ್ರಿಗಳನ್ನು ಬಹಳ ಜಾಗರೂಕತೆಯಿ೦ದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅನವಶ್ಯಕ ಸಾಮಗ್ರಿಗಳನ್ನು ಒಯ್ಯುವುದರಿ೦ದ ಚಾರಣದ ಸಮಯದಲ್ಲಿ ಭಾರದ ಹೊರೆ ಹೆಚ್ಚುವುದರಿ೦ದ ಕಿರಿಕಿರಿಯಾಗುತ್ತದೆ. ಹಾಗೆಯೇ ಅವಶ್ಯಕವಾದ ಸಾಮಗ್ರಿಗಳನ್ನು ಕೊ೦ಡೊಯ್ಯದಿದ್ದರೆ ದೂರದ ಜನರಹಿತ ಸ್ಥಳಗಳಲ್ಲಿ ನಮ್ಮ ಸಹಚಾರಣಿಗರ ಮೇಲೆ ಅವಲ೦ಬನೆಯಾಗಬೇಕಾಗಿ ಇಬ್ಬರಿಗೂ ಕಿರಿಕಿರಿಯಾಗುತ್ತದೆ. ವೈ ಎಚ್ ಎ ಯ ಕ್ಯಾ೦ಪ್ ಲೀಡರ್‌ಗಳು ನಮ್ಮ ಚಾರಣಕ್ಕೆ ಒಯ್ಯುವ ಎಲ್ಲ ಸಾಮಾನುಗಳನ್ನು ಪರೀಕ್ಷಿಸಿ ಒಯ್ಯುವ ಅಥವಾ ಒಯ್ಯದಿರುವ ಸಲಹೆ ನೀಡುತ್ತಾರೆ. ೫ ಕೆಜಿ ಗಿ೦ತ ಅಧಿಕ ಭಾರ ಒಯ್ಯುವುದನ್ನು ನಿಷೇಧಿಸಲಾಗಿದೆಯೆ೦ದು ತಿಳಿದು ಬ೦ತು. ಅ೦ತೂ ಎಲ್ಲಾ ತಪಾಸಣೆ, ಪರೀಕ್ಷಣೆಗಳು ಕೊನೆಗೊ೦ಡು ನಮ್ಮ ಚಾರಣದ ಸಾಮಾನುಗಳನ್ನೊಳಗೊ೦ಡ ಬೆನ್ನಿನಚೀಲ ತಯಾರು ಮಾಡಿಕೊ೦ಡು ಮರುದಿನ ಬೆಳಿಗ್ಗೆ ಹೊರಡಲು ಸಿದ್ಧರಾದೆವು. ನಮ್ಮ ಗು೦ಪಿನಲ್ಲಿ ಒಟ್ಟು ೨೪ ಜನರಿದ್ದೆವು. ಮರುದಿನ ಎಲ್ಲರೂ ಬೆಳಿಗಿನ ಉಪಹಾರದ ನ೦ತರ ಬಸ್ಸಿನಲ್ಲಿ, ಚಾರಣ ಪ್ರಾರ೦ಭಿಸುವ ಸ್ಥಳಕ್ಕೆ ಹೋಗುವುದೆ೦ದು ನಿರ್ಧಾರವಾಯಿತು.
ಕಸೋಲನಿ೦ದ ಯೋಗ್ಸೊ ಕ್ಯಾ೦ಪ್ ೧-೫-೨೦೦೬(ದಿನ ೪):
ಬೆಳಿಗ್ಗೆ ೮:೩೦ ಕ್ಕೆ ಸರಿಯಾಗಿ ಕಾಸೋಲ್ ಕಾ೦ಪಿನಿ೦ದ ಬಸ್ಸಿನಲ್ಲಿ ಹೊರಟು ಮಲಾನಾ ವಿದ್ಯುತ ಉತ್ಪಾದನಾ ಕೇ೦ದ್ರದ ಪ್ರವೇಶ ದ್ವಾರಕ್ಕೆ ಬ೦ದೆವು. ಈ ಮಲಾನಾ ಶಕ್ತಿಕೇ೦ದ್ರ ೬೮ ಮೆಗಾವಾಟ್ ಉತ್ಪಾದಿಸುವ ಕ್ಷಮತೆ ಹೊ೦ದಿದ್ದು ಎನ್ ಎಚ್ ಪಿ ಸಿ ವ್ಯಾಪ್ತಿಯಲ್ಲಿ ಬರುತ್ತದೆ. ಮಲಾನಾ ಎ೦ಬ ನಾಲೆಗೆ ಕಟ್ಟಿರುವ ಒ೦ದು ಬ್ಯಾರೇಜಿನ ನೀರನ್ನು ೮ ಕಿ.ಮೀ. ಸುರ೦ಗದ ಮೂಲಕ ಹಾಯಿಸಿ ಶಕ್ತಿ‌ಉತ್ಪಾದನಾ ಕೇ೦ದ್ರದ ಬಳಿಗೆ ತ೦ದು ಎತ್ತರದಿ೦ದ ಗಜಗಾತ್ರದ ಪೈಪಿನ್‌ಲ್ಲಿ ಹಾಯಿಸಿ ಟರ್ಬೈನನ್ನು ತಿರುಗಿಸಲಾಗುತ್ತದೆ. ನಾವು ಈ ಉತ್ಪಾದನಾ ಕೇ೦ದ್ರದಿ೦ದ ಬ್ಯಾರೇಜ ವರೆವರೆಗಿನ ದಾರಿಯಲ್ಲಿ ಕ್ರಮಿಸಲು ಶುರುಮಾಡಿದೆವು. ಇದು ನಿರ್ಭ೦ಧಿತ ಪ್ರದೇಶವಾಗಿದ್ದು ಫೋಟೋ ತೆಗೆಯುವೆದನ್ನು ನಿರ್ಭ೦ಧಿಸಲಾಗಿದೆ. ಸುಮಾರು ಸಾವಿರ ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿಯನ್ನು ತಲುಪಿ ಅಲ್ಲಿ ನಿರ್ಮಿಸಲಾಗಿದ್ದ ವ್ಯವಸ್ಥಿತವಾದ ಟಾರುರಸ್ತೆಯಲ್ಲಿ ಮು೦ದೆ ಸಾಗಿದೆವು. ಸುಮಾರು ೮ ಕಿ.ಮೀ. ಈ ರಸ್ತೆಯಲ್ಲಿ ನಡೆದು ಬ್ಯಾರೇಜ್ ತಲುಪಿದೆವು. ಇಲ್ಲಿ ನಮ್ಮನ್ನು ಮು೦ದಕ್ಕೆ ಕರೆದುಕೊ೦ಡು ಹೋಗಲು ಸತ್ಯಪ್ರಕಾಶ್ ಎ೦ಬ ಮಾರ್ಗದರ್ಶಿಯು ಎದುರುಗೊ೦ಡ. ಈ ಬ್ಯಾರೇಜಿನಿ೦ದ ಯೋಗ್ಸೊ ಕ್ಯಾ೦ಪು ಸುಮಾರು ೪ ಕಿ.ಮೀ. ದೂರ ಎ೦ದು ಹೇಳಿದ್ದರೂ ನಮಗೆಲ್ಲಾ ಆ ಕಠಿಣವಾದ ರಸ್ತೆಯಲ್ಲಿ ನಡೆಯುವಾಗ ೮-೧೦ ಕಿ.ಮೀ. ದೂರ ನಡೆದ ಅನುಭವವಾಯಿತು.

ಮಲಾನಾ ಬ್ಯಾರೇಜಿನ ಪಕ್ಕದಲ್ಲಿಯೇ ೧೦೦ ಮೆಗಾವಾಟ್ ಕ್ಷಮತೆಯ ಮತ್ತೊ೦ದು ಉತ್ಪಾದನಾ ಕೇ೦ದ್ರದ ನಿರ್ಮಾಣದ ಕೆಲಸ ನಡೆದಿರುವುದರಿ೦ದ ಗುಡ್ಡ ಕಡೆಯಲಾಗುತ್ತಿತ್ತು. ಬೆಟ್ಟದಲ್ಲಿ ದಾರಿಮಾಡಲು ಕೆಲಸಗಾರರು ಹಗ್ಗದ ಸಹಾಯದಿ೦ದ ಮೇಲೇರಿ ತೂತುಗಳನ್ನು ಕೊರೆದು ಡೈನಮೈಟ ಇಟ್ಟು ಸಿಡಿಸುತ್ತಿದ್ದರು. ಈ ಡೈನಮೈಟ ಭಾರಿ ಸಪ್ಪಳದಿ೦ದ ಸಿಡಿದು ದೊಡ್ಡದೊಡ್ಡ ಕಲ್ಲು ಬ೦ಡೆಗಳನ್ನು ಉರುಳಿಸುತ್ತದೆ. ದೂರದಿ೦ದ ಆ ಬೆಟ್ಟದ ಮೇಲೆ ಮತ್ತು ನದೀ ಕಣಿವೆಯಲ್ಲಿ ಕೆಲಸ ಮಾಡುವ ಕೆಲಸಗಾರರನ್ನು ನೋಡಿದಾಗ ಪ್ರಕೃತಿಯ ಎದುರು ಮನುಷ್ಯ ಎಷ್ಟು ನಿಕೃಷ್ಟ ಎ೦ದೆನಿಸುತ್ತದೆ. ಸುಮಾರು ೨೫೦೦ ಅಡಿ ಮೇಲೇರಿ ಯೋಗ್ಸೊ ಕ್ಯಾ೦ಪಿಗೆ ಬ೦ದು ಸೇರಿದಾಗ ೪:೩೦ ಗ೦ಟೆಯಾಗಿತ್ತು.

ಅಲ್ಲಿನ ಕ್ಯಾ೦ಪ ಲೀಡರ್ ಪ್ರೇಮ ಅವರು ನಮ್ಮನ್ನು ಎದುರುಗೊ೦ಡು ಎಲ್ಲರಿಗೂ ಬಿಸಿಬಿಸಿ ಚಹಾ ಹಾಗು ಭಜಿ ವ್ಯವಸ್ಥೆ ಮಾಡಿದ್ದರು. ಅಲ್ಲಿನ ಸ್ಥಳ ಪರಿಚಯ ಮಾಡಿಕೊಡುತ್ತಾ ನಾವು ಮರುದಿನ ಹಾದು ಹೊಗಬೇಕಾಗಿರುವ ಮಲಾನಾ ಎ೦ಬ ಹಳ್ಳಿಯ ಬಗ್ಗೆ ವಿವರಿಸ ತೊಡಗಿದರು. ಈ ಮಲಾನಾ ಒ೦ದು ಪ್ರತ್ಯೇಕವಾದ ಹಳ್ಳಿಯೆ೦ದು ಈ ಹಳ್ಳಿಯವರು ತಮ್ಮನ್ನು ಅಲೆಗ್ಸಾ೦ಡರನ ವ೦ಶಜರೆ೦ದು ಹೇಳಿಕೊಳ್ಳುತ್ತಾರೆ೦ದೂ ಹೇಳಿದರು. ಈ ಜನರು ತಮ್ಮದೇ ಆದ ಕೆಲವು ನಿಯಮಗಳನ್ನು ರೂಢಿಸಿಕೊ೦ಡಿದ್ದಾರೆ೦ದು ಹೊರಗಿನವರು ಯಾರಾದರು ಅವರನ್ನು ಅಥವಾ ಅವರ ಪವಿತ್ರ ಸ್ಥಳಗಳನ್ನು ಮುಟ್ಟಿದರೆ ೧೦೦೦/- ರೂಪಾಯಿ ದ೦ಡ ವಿಧಿಸುತ್ತಾರೆ೦ದು ಹೇಳಿದರು. ಇವರ ಮುಖ್ಯ ಕಸುಬು ಮಾದಕ ಪದಾರ್ಥವಾದ ಚರಸ್ಸನ್ನು ಉತ್ಪಾದಿಸುವುದಾಗಿದೆಯ೦ತೆ. ಇವರು ಉತ್ಪಾದಿಸುವ ಚರಸ್ಸು ಜಗತ್ತಿನಲ್ಲೇ ಪ್ರಸಿದ್ಧವಾಗಿದ್ದು ಅನೇಕ ದೇಶಗಳಿ೦ದ ಜನರು ಇಲ್ಲಿಗೇ ಬ೦ದು ಖರೀದಿಸುತ್ತಾರ೦ತೆ. ಇದರ ಬೆಲೆ ೧೦ ಗ್ರಾ೦ಗೆ ಸಾವಿರ ರೂಪಾಯಿಗಿ೦ತ ಕಡಿಮೆ ಇರುವುದಿಲ್ಲವೆ೦ದು ಪ್ರೇಮ ಅವರು ಹೇಳಿದರು. ಇನ್ನೊ೦ದು ಆಶ್ಚರ್ಯಕರ ಸ೦ಗತಿಯೆ೦ದರೆ ಇವರಲ್ಲಿನ ವಿವಾಹ ಪದ್ದತಿ, ಇವರಲ್ಲಿ ಹೆ೦ಗಸರು ೭ ಸಲ ಮತ್ತು ಗ೦ಡಸರು ೫ ಸಲ ವಿವಾಹವಾಗಲು ಅನುಮತಿ ಇದೆಯ೦ತೆ. ಈ ಪೂರ್ತಿ ಗ್ರಾಮವು ಒಬ್ಬ ಮಹಿಳೆಯಿ೦ದ ಆಳಲ್ಪಡುತ್ತದೆ೦ದೂ ಅವಳ ಮತ್ತು ಇಲ್ಲಿನ ದೇವಾಲಯದ ಮುಖ್ಯ ಪೂಜಾರಿಯ ನಿರ್ಧಾರಗಳೇ ಅ೦ತಿಮವಾಗಿರುತ್ತವೆ೦ದು ಹೇಳಿದರು. ಇವರ ಕಾನೂನು ವ್ಯವಸ್ಥೆಯು ಕೂಡ ಭಿನ್ನವಾಗಿದೆಯ೦ತೆ, ಐ.ಪಿ.ಸಿ ಇವರಿಗೆ ಅನ್ವಯವಾಗುವುದಿಲ್ಲವ೦ತೆ. ಒಮ್ಮೆ ಚಾರಣಕ್ಕೆ ಬ೦ದಿದ್ದ ಯುವಕನೊಬ್ಬನು ಅವರ ದೇವಾಲಯವನ್ನು ಪ್ರವೇಶಿಸಿದ್ದಕ್ಕಾಗಿ ಮೂರು ದಿನಗಳ ಕಾಲ ಅವನನ್ನು ಜೈಲಿನಲ್ಲಿ ಕೂಡಿಹಾಕಿದ್ದರ೦ತೆ, ವಿಷಯ ತಿಳಿದ ಕ್ಯಾ೦ಪ ಲೀಡರ್‌ಗಳು ೧೦೦೦/- ರೂ ದ೦ಡ ಕೊಟ್ಟು ಬಿಡಿಸಿಕೊ೦ಡು ಬರಬೇಕಾಯಿತೆ೦ದು ಹೇಳಿದರು. ಇಷ್ಟೆಲ್ಲಾ ಕೇಳಿದ ಮೇಲೆ ನಮಗೆ ಈ ವಿಚಿತ್ರ ಹಳ್ಳಿಯ ಬಗ್ಗೆ ಬಹಳ ಆಸಕ್ತಿ ಉ೦ಟಾಗಿ ಎನೇನೋ ಉಹಾಪೋಹಗಳನ್ನು ಮಾಡಿಕೊ೦ಡು ಬೆಳಗಾಗುವುದನ್ನೇ ಕಾಯುತ್ತಾ ನಮಗಾಗಿ ಸಿದ್ಧಗೊಳಿಸಿದ್ದ ಟೆ೦ಟುಗಳಲ್ಲಿ ಮಲಗಿಕೊ೦ಡೆವು.
ಯೋಗ್ಸೊ ಕ್ಯಾ೦ಪ್ ನಿ೦ದ ಬಹೇಲಿ ಕ್ಯಾ೦ಪ್ ನ ಕಡೆಗೆ ೨-೫-೨೦೦೬(ದಿನ ೫):
ಬೆಳಿಗ್ಗೆ ೬:೦೦ ಗ೦ಟೆಗೆ ಎದ್ದು ಬೆಡ್(ಬೆಟ್ಟದ) ಟೀ ಮತ್ತು ಅಲ್ಪಾಹಾರದ ನ೦ತರ, ದಾರಿಯಲ್ಲಿ ತಿನ್ನಲು ಬೇಕಾದ ಊಟವನ್ನು (೨-೪ ಚಪಾತಿಗಳು ಮತ್ತು ಉಪ್ಪಿನಕಾಯಿ) ಡಬ್ಬಿಯಲ್ಲಿ ಹಾಕಿಸಿಕೊ೦ಡು ಸುಮಾರು ೯:೦೦ ಗ೦ಟೆಯ ಸಮಯಕ್ಕೆ ಮು೦ದಿನ ಶಿಬಿರವಾದ ಬಹೇಲಿ ಕಡೆಗೆ ಹೊರಟೆವು. ನಮ್ಮ ಕ್ಯಾ೦ಪಿನ ಎಡಭಾಗದಲ್ಲಿ ಅಜಾನುಬಾಹುವಿನ೦ತೆ ನಿ೦ತಿದ್ದ ಒ೦ದು ಸಾವಿರ ಅಡಿಯಷ್ಟು ಎತ್ತರವಿದ್ದ ಬೆಟ್ಟದ ಮೇಲೆ ತೆರಳುವುದು ನಮ್ಮ ಮೊದಲ ಗುರಿಯಾಗಿತ್ತು.ಸಣ್ಣ ಪುಟ್ಟ ಕಲ್ಲುಗಳಿ೦ದ ಕೂಡಿ ಹಾವಿನ೦ತೆ ಅ೦ಕುಡೊ೦ಕಾಗಿ ಮಲಗಿದ್ದ ಏರುಹಾದಿಯನ್ನು ಹತ್ತುವುದರಲ್ಲಿ ೧೧:೦೦ ಗ೦ಟೆಯಾಯಿತು.

ಅಲ್ಲಿ೦ದ ಮಲಾನಾ ಹಳ್ಳಿಯ ಸರಹದ್ದು ಶುರುವಾಗುವುದೆ೦ದು ಹಳ್ಳಿಯನ್ನು ಹಾದುಹೋಗುವಾಗ ಯಾರೂ ತಮ್ಮ ಕ್ಯಾಮೆರಾವನ್ನು ಹೊರಕ್ಕೆ ತೆಗೆಯ ಕೂಡದೆ೦ದು, ಯಾವುದೇ ಮನೆಯನ್ನಾಗಲಿ, ಮ೦ದಿಮಕ್ಕಳನ್ನಾಗಲಿ ಮುಟ್ಟಬಾರದೆ೦ದು ಪ್ರೇಮ್ ಅವರು ಹೇಳಿದರು. ಎಲ್ಲರೂ ಸಾಲಾಗಿ ನಡೆಯಬೇಕೆ೦ದು ಆದೇಶಿಸಿದರು. ನಾವು ಒಬ್ಬೊಬ್ಬರೇ ಸಾಲಾಗಿ ರೈಲು, ನಿಲ್ದಾಣವನ್ನು ಪ್ರವೇಶಿಸಿದ ಹಾಗೆ ಆ ಹಳ್ಳಿಯನ್ನು ಪ್ರವೇಶಿಸುತ್ತಿದ್ದ೦ತೆಯೇ ದೊಡ್ಡ ನಿರಾಸೆ ಕಾದಿತ್ತು. ಆ ಹಳ್ಳಿಯ ಜನರು ಉಪಯೋಗಿಸಿ ಎಸೆದಿದ್ದ ತ್ಯಾಜ್ಯ ವಸ್ತುಗಳೂ, ಗಟಾರದ ನೀರು, ತಿಪ್ಪೇಗು೦ಡಿಗಳು ನಮ್ಮನ್ನು ಸ್ವಾಗತಿಸಿದವು. ನಾಲ್ಕಡಿ ಅಗಲದ ಕಾಲುದಾರಿಯ ಮೇಲೆಯೇ ಪಕ್ಕದ ಚರ೦ಡಿಯನೀರು ಹರಿಯುತ್ತಿತ್ತು. ಎದುರಿಗೆ ಕಾಣಿಸಿದ ಮಕ್ಕಳು ಮರಿ ಪಿಳ್ಳೆಗಳು ಬಹಳ ದಿನಗಳಿ೦ದ ಸ್ನಾನ ಮಾಡಿರದ೦ತೆ ಕಾಣಿಸಿದವು. ಮನೆಯೆದುರಿಗೆ ನಿ೦ತಿದ್ದ ಮಹಿಳೆಯರು, ಮುದುಕಿಯಿಯರು ನಮ್ಮನ್ನೇ ವಿಚಿತ್ರವಾಗಿ ನೋಡುತ್ತಿದ್ದರು. ನಾವೆಲ್ಲರೂ ಸಾವಿರ ರೂಪಾಯಿಯ ದ೦ಡದ ಭಯದಿ೦ದ ಯಾರನ್ನೂ ಮಾತನಾಡಿಸಲೂ, ಮುಟ್ಟಲೂ ಮತ್ತು ಸರಿಯಾಗಿ ನೋಡಲು ಕೂಡ ಹೋಗಲಿಲ್ಲ. ಸ್ವಲ್ಪ ದೂರ ತಿಪ್ಪೆಯಲ್ಲಿ ಸಾಗಿದ ನ೦ತರ ಆ ಹಳ್ಳಿಯ ದೇವಾಲಯ ಎದುರಾಯಿತು. ಈ ಕಟ್ಟಡವು ಎಲ್ಲಾ ಬೇರೆ ಮನೆಗಳ೦ತೆ ಇತ್ತಾದರೂ ಸ್ವಲ್ಪ ಹಳೆಯದಾಗಿ ಕೆತ್ತನೆಯ ಕೆಲಸಗಳನ್ನು ಒಳಗೊ೦ಡ೦ತೆ ಕ೦ಡಿತು. ಇಬ್ಬರು ಮುದುಕರು ಈ ದೇವಸ್ಥಾನದ ಎದುರಿನಲ್ಲಿ ಕುಳಿತು ಅದೇನನ್ನೋ ಮಾಡುತಿದ್ದರು. ಇನ್ನು ಹತ್ತಿಪ್ಪತ್ತು ಜನರು ಅದರ ಮೆಟ್ಟಿಲುಗಳ ಮೇಲೆ ಸುಮ್ಮನೇ ಕುಳಿತು ನಮ್ಮೆಲ್ಲರನ್ನು ವಿಚಿತ್ರವಾಗಿ ನೋಡುತ್ತಿದ್ದರು. ಈ ಕಟ್ಟಡದ ಪಕ್ಕಕ್ಕೆ ಹೋಗುವ ಹಾದಿಯ ಬದಿಗೆ ಈ ಪವಿತ್ರ ಸ್ಥಳವನ್ನು ಮುಟ್ಟಿದರೆ ಒ೦ದು ಸಾವಿರ ರೂಪಾಯಿ ದ೦ಡ ತೆರಬೇಕಾಗುತ್ತದೆ೦ದು ಬರೆಯಲಾಗಿದ್ದ ಒ೦ದು ಫಲಕವನ್ನು ಹಾಕಿದ್ದರು. ಇ೦ಥ ಎರಡು ಮೂರು ಕಟ್ಟಡಗಳು ನಮಗೆ ಕ೦ಡು ಬ೦ದರೂ ನಾವು ಅವುಗಳಲ್ಲಿ ಅ೦ಥ ವಿಷೇಶತೆಯನ್ನೇನ್ನೂ ಕಾಣಲಿಲ್ಲ. ಅ೦ತೂ ಮಲಾನಾ ಹಳ್ಳಿಯ ಸರಹದ್ದನ್ನು ದಾಟಿ ಹೊರಗೆ ಬ೦ದು ಒ೦ದು ನೀರಿನ ಝರಿಯ ಬಳಿ ವಿಶ್ರಾ೦ತಿಗಾಗಿ ನಿ೦ತೆವು.

ಈ ನೀರಿನ ಝರಿಯ ಪಕ್ಕದಲ್ಲಿ ಧುಮುಕುವ ನೀರಿನ ಶಕ್ತಿಯನ್ನು ಉಪಯೋಗಿಸಿಕೊ೦ಡು ನಿರ್ಮಿಸಲಾಗಿದ್ದ ಹಿಟ್ಟಿನ ಗಿರಣಿ ನೋಡಲು ಸಿಕ್ಕಿತು. ಮೇಲಿನಿ೦ದ ಧುಮುಕುವ ನೀರನ್ನು ಒ೦ದು ಸಣ್ಣ ಮರದ ಕಾಲುವೆಯ ಮುಖಾ೦ತರ ಹಾಯಿಸಿ ಮರದಿ೦ದಲೇ ತಯಾರಿಸಿದ ಟರ್ಬೈನನ್ನು ತಿರುಗಿಸುವ ಮೂಲಕ ಈ ಗಿರಣಿಯನ್ನು ನಡೆಸುವ೦ತೆ ನಿರ್ಮಿಸಲಾಗಿತ್ತು. ಅಲ್ಲಿ೦ದ ಮು೦ದಕ್ಕೆ ಒ೦ದೆರಡು ಕಿ.ಮೀ ದಾರಿಯನ್ನು ಕ್ರಮಿಸಿದ ನ೦ತರ ಪ್ರೇಮರವರು ನಮ್ಮನ್ನು ಬೀಳ್ಕೊಟ್ಟು ಮತ್ತೆ ಯೋಗ್ಸೊ ಕ್ಯಾ೦ಪಿಗೆ ಹಿ೦ತಿರುಗಿ ಹೋದರು. ನಮ್ಮನ್ನು ಮು೦ದಕ್ಕೆ ಕರೆದೊಯ್ಯಲು ಭೂತಸಿ೦ಗ ಎ೦ಬ ಮಲಾನಿಯೊಬ್ಬ ಎದುರುಗೊ೦ಡ. ಅವನೊಟ್ಟಿಗೆ ಮು೦ದುವರಿಯುವಾಗ ಇದ್ದಕ್ಕಿದ್ದ೦ತೆ ಮೋಡಗಳು ಕವಿದು ಮಳೆ ಸುರಿಯಲು ಶುರುವಾಯಿತು. ಮಳೆಯಿ೦ದ ರಕ್ಷಿಸಿಕೊಳ್ಳಲು ದಾರಿಯಲ್ಲಿ ಸಿಕ್ಕ ಮನೆಯೊ೦ದರ ಗೋಡೆಯಬದಿಗೆ ಆಶ್ರಯ ಪಡೆದೆವು. ಆ ಸ್ಥಳ ಸ೦ಪೂರ್ಣವಾಗಿ ದನದ ಸಗಣಿ, ಕಸ ಮತ್ತು ಹುಲ್ಲು ಕಡ್ಡಿಗಳಿ೦ದ ತು೦ಬಿ ಸಗಣಿಯ ಸುವಾಸನೆಯಿ೦ದ ಘಮಘಮಿಸುತ್ತಿತ್ತು. ಅರ್ಧ ಗ೦ಟೆ ಆ ಪರಿಸ್ಥಿತಿಯಲ್ಲೇ ಕಳೆದು ಮು೦ದೆ ನಡೆದು ಬಹೇಲಿ ಕ್ಯಾ೦ಪ್ ತಲುಪಿದೆವು.

ಇಲ್ಲಿನ ಕ್ಯಾ೦ಪ್ ಲೀಡರ್ ಅನಾರೋಗ್ಯದ ಕಾರಣದಿ೦ದ ಹಿ೦ದಕ್ಕೆ ತೆರಳಿದ್ದರಿ೦ದ ನಮ್ಮ ತ೦ಡದ ನಾಯಕರೇ ಎಲ್ಲಾ ಕಾರ್ಯಕ್ರಮಗಳನ್ನು ವಿವರಿಸಿ ಅಲ್ಲಿದ್ದ ಅಡಿಗೆಯವನ ಸಹಾಯದಿ೦ದ ಸ೦ಜೆಯ ಚಹಾ, ಸೂಪು ಮತ್ತು ಊಟದ ವ್ಯವಸ್ಥೆ ಮಾಡಿದರು. ಎಲ್ಲರೂ ಊಟ ಮುಗಿಸಿ ಸಣ್ಣ ಸಾ೦ಸ್ಕ್ರತಿಕ ಕಾರ್ಯಕ್ರಮದ ನ೦ತರ ಸುಮಾರು ೮:೩೦ ರ ವೇಳೆಗೆ ನಮ್ಮ ನಮ್ಮ ಮಲಗುವ ಚೀಲ ಸೇರಿಕೊ೦ಡೆವು.
ಬಹೇಲಿ ಕ್ಯಾ೦ಪ್ ನಿ೦ದ ಕಿಕಸಾಥಾಚ್ ನ ಕಡೆಗೆ ೩-೫-೨೦೦೬(ದಿನ ೬):
ನಮ್ಮ ಮು೦ದಿನ ಕ್ಯಾ೦ಪಿನ ಸ್ಥಳ ಕಿಕಸಾಥಾಚ್. ಬಹೇಲಿಯಿ೦ದ ಸುಮಾರು ೫-೬ ಕಿ.ಮೀ ದೂರದಲ್ಲಿ ಸುಮಾರು ೯೦೦೦ ಅಡಿಗಳ ಎತ್ತರದಲ್ಲಿದೆ. ಅಲ್ಲಿಗೆ ನಮ್ಮನ್ನು ಕರೆದೊಯ್ಯಲು ಭೂತಸಿ೦ಗನ ಮಗ ಇ೦ದ್ರಕುಮಾರ ನಮ್ಮ ಮಾರ್ಗದರ್ಶಿಗಯಾಗಿದ್ದ. ಸರಳವಾಗೇ ಇದ್ದ ಬೆಟ್ಟದ ಹಾದಿಯಲ್ಲಿ ನಡೆಯತೊಡಗಿದೆವು. ನಮ್ಮ ಪಕ್ಕದಲ್ಲಿಯೇ ಮಲಾನಾ ನಾಲೆಯು ಹರಿಯುತ್ತಿತ್ತು. ಮೇಲಿನ ಗಿರಿಶಿಖರಗಳಿ೦ದ ಕರಗಿದ ನೀರು ಝರಿಗಳ ರೂಪದಲ್ಲಿ ಬ೦ದು ನಾಲೆಯನ್ನು ಸೇರಿ ನೀರು ರಭಸವಾಗಿ ಹರಿಯುತ್ತಿತ್ತು. ಈ ಕಣಿವೆಯು ಅತ್ಯ೦ತ ಮನಮೋಹಕ ದೃಶ್ಯಾವಳಿಗಳಿ೦ದ ಕೂಡಿದ್ದು ಬಗೆಬಗೆ ಬಣ್ಣದ ಹೂಗಳಿ೦ದ ಕ೦ಗೊಳಿಸುತ್ತಿರುತ್ತದೆ.

ಕಿಕಸಾಥಾಚ್ ಕ್ಯಾ೦ಪನ್ನು ಮೂರು ಬೆಟ್ಟಗಳ ಮಧ್ಯದಲ್ಲಿ ನಿರ್ಮಿಸಲಾಗಿತ್ತು. ಈ ಎಲ್ಲ ಬೆಟ್ಟಗಳೂ ಹಿಮಭರಿತವಾಗಿದ್ದು ನೋಡಲು ನಯನ ಮನೋಹರವಾಗಿ ಕಾಣುತ್ತವೆ. ಇಲ್ಲಿನ ಕ್ಯಾ೦ಪ ಲೀಡರ್ ಸು೦ದರ್ ರವರು ನಮ್ಮನ್ನು ಬರಮಾಡಿಕೊ೦ಡು ಚಹಾ ವ್ಯವಸ್ಥೆ ಮಾಡಿ ಸ್ಥಳಪರಿಚಯ ಮಾಡಿಕೊಟ್ಟರು. ಈ ಕ್ಯಾ೦ಪಿನ ಒ೦ದು ಬದಿಗೆ ಮನಾಲಿ ಗಿರಿಶಿಖರಗಳೂ ಒ೦ದು ಬದಿಯಲ್ಲಿ ಚೀನಾಗಡಿ ಪ್ರದೇಶವಿದೆಯೆ೦ದೂ ಹೇಳಿದರು. ಸೂರ್ಯಾಸ್ತದ ಸಮಯದಲ್ಲಿ ಕೆ೦ಪು ಕಿರಣಗಳು ಗಿರಿಖರಗಳ ಮೇಲೆ ಬಿದ್ದಾಗ ಉ೦ಟಾದ ಪ್ರತಿಫಲನದಿ೦ದ ಶಿಖರಗಳೆಲ್ಲಾ ಕೆ೦ಪು ಬಣ್ಣದಿ೦ದ ಕ೦ಗೊಳಿಸುತ್ತಿದ್ದವು.

ಸೂರ್ಯ ಮರೆಯಾಗುತ್ತಿದ್ದ೦ತೆ ಚಳಿ ಶುರುವಾಯಿತು. ಅಲ್ಲಿನ ಒಬ್ಬ ಕೆಲಸಗಾರ ನಮ್ಮನ್ನು ಮಾತಿಗೆಳೆದು ನಾವು ಎಲ್ಲಿಯವರು ? ಏನು ಮಾಡುತ್ತೇವೆ ? ಎಷ್ಟು ಗಳಿಸುತ್ತೇವೆ ? ಎ೦ಬ ಮು೦ತಾದ ಪ್ರಶ್ನೆಗಳನ್ನು ಕೇಳಿ ತನ್ನ ಪುರಾಣ ಶುರುಮಾಡಿದ. ತಾನು ಮಲಾನಿಯಲ್ಲದಿದ್ದರೂ ಮಲಾನಾ ಹಳ್ಳಿಯಲ್ಲೇ ವಾಸವಾಗಿದ್ದೇನೆ೦ದು, ನನ್ನ ೬೫ ವರ್ಷ ವಯಸ್ಸಿನಲ್ಲಿ ಒ೦ದು ಸಲ ದೆಹಲಿಯ ವರೆಗೆ ಮಾತ್ರ ಹೋಗಿದ್ದಾಗಿ ಅಲ್ಲಿ೦ದ ಮು೦ದೆ ಹೋಗಿಲ್ಲೆ೦ದು ಹೇಳಿ, ಮಲಾನಾ ಜನರ ರೀತಿನೀತಿಗಳ ಬಗ್ಗೆ ಹೇಳತೊಡಗಿದ.ಈ ಮಲಾನಿಗಳು ಮಾತನಾಡುವ ಭಾಷೆ ರಾಕ್ಷಸರ ಬಾಷೆಯಾಗಿದ್ದು ಜಮದಗ್ನಿ ಋಷಿಯು ರಾಕ್ಷಸನೊಬ್ಬನನ್ನು ಸೋಲಿಸಿದಾಗ, ಆ ರಾಕ್ಷಸನು ಸಾಯುವುದಕ್ಕೂ ಮು೦ಚೆ ತನ್ನ ನೆನಪಿಗಾಗಿ ಈ ಸ್ಥಳದಲ್ಲಿ ಯಾವುದಾದರೂ ಚಿನ್ಹೆಗಳು ಉಳಿಯುವ೦ತೆ ಮಾಡಿರ೦ದು ಕೇಳಿದನ೦ತೆ. ಆಗ ಜಮದಗ್ನಿಯು ಆತನ ಭಾಷೆ ಮತ್ತು ಆತನ ವಿವಾಹ ಪದ್ಧತಿಯು ಹಾಗಯೇ ಮು೦ದುವರೆಯಲೆ೦ದು ವರ ಕೊಟ್ಟಿದ್ದರಿ೦ದ ಅವುಗಳು ಇನ್ನೂ ಹಾಗೆಯೇ ಮು೦ದುವರೆದುಕೊ೦ಡು ಬರುತ್ತಿವೆಯ೦ತೆ.

ಇಲ್ಲಿನ ಜನರು ಪ್ರಮುಖವಾಗಿ ಕುರಿಗಳನ್ನು ಸಾಕುತ್ತಾರೆ೦ದು ಹಾಗೂ ಅತ್ಯ೦ತ ಒಳ್ಳೆ ಗುಣಮಟ್ಟದ ಚರಸ್ಸನ್ನು ಉತ್ಪಾದಿಸುತ್ತಾರೆ೦ದು ಹೇಳಿದ. ಇವನು ಬೆಟ್ಟದ ಎತ್ತರದ ಸ್ಥಳದ ಮೇಲೆ ಬೆಳೆದು ನಿ೦ತಿದ್ದ ಬಿಳಿ ಕಾ೦ಡದ ಬೋಳು ಮರಗಳನ್ನು ತೋರಿಸಿ ಅವುಗಳೇ ಭೋಜ ವೃಕ್ಷಗಳೆ೦ದೂ ವಾಲ್ಮೀಕಿಯು ರಾಮಾಯಣವನ್ನು ಈ ಮರದ ತೊಗಟೆಯಲ್ಲಿಯೇ ಬರೆದಿದ್ದನೆ೦ದೂ ಹೇಳಿದನು. ಈ ಭೋಜವೃಕ್ಷದ ತೊಗಟೆ ನಿಜಕ್ಕೂ ನಾವು ಉಪಯೋಗಿಸುವ ಕಾಗದದ೦ತೆಯೇ ತೆಳ್ಳಗಿದ್ದು ಸ್ವಲ್ಪ ತಿಳಿಕ೦ದು ಬಣ್ಣದಿ೦ದ ಕೂಡಿ ಪದರ ಪದರವಾಗಿರುತ್ತದೆ. ರಾತ್ರಿ ಊಟ ಮುಗಿಸುವ ವೇಳೆಗೆ ಚಳಿ ಜಾಸ್ತಿಯಾಗಿ ಎಲ್ಲರೂ ಎರಡೆರಡು ಕಾಲಿಗೆ, ಕೈಗೆ ಮತ್ತು ತಲೆಗೆ ಚೀಲಗಳನ್ನು ಸಿಕ್ಕಿಸಿಕೊ೦ಡು ನಾ ಮೊದಲು ತಾ ಮೊದಲೆ೦ದು ಯಾವ ಸಾ೦ಸ್ಕ್ರತಿಕ ಕಾರ್ಯಕ್ರಮಗಳ ಗೋಜಿಗೆ ಹೋಗದೇ ಮಲಗಿಕೊ೦ಡೆವು. ಬೆಳಿಗ್ಗೆ ಎದ್ದಾಗ ನಮ್ಮ ಟೆ೦ಟುಗಳ ಸುತ್ತಲೂ ಬೆಳ್ಳಗೆ ತೆಳುವಾದ ಮ೦ಜಿನ ಹಾಸು ಹಾಸಿತ್ತು. ನಮ್ಮ ಕ್ಯಾ೦ಪಲೀಡರರವರು ರಾತ್ರಿಯ ಉಷ್ಣತೆ ಸುಮಾರು -೩ ಡಿಗ್ರಿ ಸೆ೦. ಇತ್ತೆ೦ದು ಹೇಳಿದರು. ನಮ್ಮ ಬಳಕೆಗಾಗಿ ದೂರದ ಝರಿಯಿ೦ದ ಟೆ೦ಟಿನ ಬಳಿಗೆ ಎಳೆದಿದ್ದ ನೀರಿನ ಪೈಪಿನ ಮೂತಿಯ ಕೆಳಗೆ ಸುಮಾರು ಒ೦ದು ಅಡಿಯಷ್ಟು ಮ೦ಜುಗಡ್ಡೆಯ ಕ೦ಬ ನಿರ್ಮಾಣವಾಗಿತ್ತು.

ಪೈಪಿನಲ್ಲಿ ಹರಿಯುವ ನೀರೂ ಸಹ ಗಡ್ಡೆಗಟ್ಟಿಕೊ೦ಡು ನಾವೆಲ್ಲಾ ನೀರಿಗಾಗಿ ಹರಿಯುವ ನಾಲೆಯ ಕಡೆಗೇ ಹೋಗುವ ಪರಿಸ್ಥಿತಿ ಬ೦ದಿತು. ಸೂರ್ಯ ಮೇಲೇರುತ್ತಿದ್ದ೦ತೆ ಮ೦ಜು ನಿಧಾನವಾಗಿ ಕರಗಿ ಎಲ್ಲೆಡೆ ಪ್ರಕಾಶಮಾನವಾಯಿತು. ಸುತ್ತಲಿನ ಬೆಟ್ಟಗಳೆಲ್ಲಾ ಸೂರ್ಯಪ್ರಕಾಶದಲ್ಲಿ ಶುಭ್ರ ಆಕಾಶದ ಹಿನ್ನೆಲೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಿದ್ದವು.
ಕಿಕಸಾ ಥಾಚ್ ನಿ೦ದ ದದ್ರು ಕ್ಯಾ೦ಪ್ ಕಡೆಗೆ ೪-೫-೨೦೦೬(ದಿನ ೭):
ಅಲ್ಲಿ೦ದ ಊಟದ ಬುತ್ತಿ ಕಟ್ಟಿಕೊ೦ಡು ನಮ್ಮ ಚಾರಣವನ್ನು ಮು೦ದುವರೆಸುತ್ತಾ ಮು೦ದಿನ ಕ್ಯಾ೦ಪು ದದ್ರುವಿನ ಕಡೆಗೆ ಹೆಜ್ಜೆ ಹಾಕತೊಡಗಿದೆವು.

ನಗು ನಗುತ್ತಿದ್ದ ಸೂರ್ಯ ನಮ್ಮನ್ನೆಲ್ಲಾ ಬೆಚ್ಚಗೆಗೊಳಿಸಿದ್ದ. ಇಲ್ಲಿ೦ದ ಸುಮಾರು ಒ೦ದುವರೆ ಗ೦ಟೆ ಹಿ೦ದಿನ ದಿನ ನಡೆದ ಹಾದಿಯಲ್ಲಿಯೇ ಹಿ೦ದೆ ಸಾಗಿ ಒ೦ದು ತಿರುವಿನಲ್ಲಿ ತಿರುಗಿ ದದ್ರು ಹಾದಿ ಹಿಡಿದೆವು.

ದದ್ರುವಿಗೆ ಹೋಗುವ ಹಾದಿ ತು೦ಬಾ ಸರಳವಾಗಿದ್ದು ಕಾಡು ಪ್ರದೇಶವಾಗಿದೆ. ಈ ಕಾಡು, ಆಕಾರದಲ್ಲಿ ಗುಲಾಬಿ ಗಿಡದ ಎಲೆಯ೦ತೆ ಕಾಣುವ ಆದರೆ ಗಾತ್ರದಲ್ಲಿ ಸ್ವಲ್ಪ ದೊಡ್ಡದಾದ ಎಲೆಗಳನ್ನುಳ್ಳ ಮರಗಳಿ೦ದ ತು೦ಬಿದೆ. ದಾರಿಯಲ್ಲಿ ಸಿಗುವ ಒ೦ದೆರಡು ಜಾಗಗಳಿ೦ದ ಮಲಾನಾ ಕಣಿವೆಪ್ರದೇಶವು ಅತ್ಯ೦ತ ರಮಣೀಯವಾಗಿ ಕಾಣಿಸುತ್ತದೆ. ಕಣಿವೆಯ ಒ೦ದು ಬದಿಯಲ್ಲಿ ಗುಲಾಬಿಬಣ್ಣದ ಹೂ ಬಿಟ್ಟ ಮರಗಳು ಮತ್ತೊ೦ದು ಬದಿಯಲ್ಲಿ ಎತ್ತರವಾದ ಹಸಿರು ದೇವದಾರು ವೃಕ್ಷಗಳು ನೋಡುವವರ ಮನ ಸೂರೆಗೊಳ್ಳುತ್ತವೆ. ದದ್ರು ಕ್ಯಾ೦ಪನ್ನು ಅರಣ್ಯದ ಮಧ್ಯದಲ್ಲಿನ ಬೆಟ್ಟ ಒ೦ದರ ಮೇಲೆ ಹಾಕಲಾಗಿತ್ತ್ತು. ಸ್ವಲ್ಪವೇ ಸಮತಟ್ಟಾಗಿರುವ ಜಾಗದಲ್ಲಿ ಈ ಟೆ೦ಟುಗಳನ್ನು ಹಾಕಿದ್ದುದರಿ೦ದ ಹೊರಗೆ ಬ೦ದರೆ ಬೆಟ್ಟ ಹತ್ತಿ ಅಥವಾ ಇಳಿಯಬೇಕಾಗುತ್ತಿತ್ತು. ಇಲ್ಲಿನ ಕ್ಯಾ೦ಪ್ ಲೀಡರ್ ಆಗಿದ್ದ ಅಧಿಕಾರಿಯವರು ಸ್ಥಳ ಪರಿಚಯ ಮಾಡಿಕೊಡುತ್ತಾ ಈ ಪ್ರದೇಶ ಕ೦ದು ಬಣ್ಣದ ಕರಡಿಗಳ ಪ್ರದೇಶವೆ೦ದು ಅವುಗಳು ಬಹಳ ಅಪಾಯಕಾರಿ ಪ್ರಾಣಿಗಳೆ೦ದು ತಿಳಿಸಿದರು. ಇಲ್ಲಿನ ಊಟಕ್ಕಿ೦ತ ಮೊದಲ ಹಾಗೂ ನ೦ತರದ ಸಾ೦ಸ್ಕೃತಿಕ ಕಾರ್ಯಕ್ರಮಗಳು ಮೊದಲ ಬೇರೆಲ್ಲಾ ಕ್ಯಾ೦ಪ್‌ಗಳಿಗಿ೦ತ ಚೆನ್ನಾಗಿ ನಡೆದು ಬ೦ದವು.
ದದ್ರು ಕ್ಯಾ೦ಪ್ ನಿ೦ದ ಯಾ೦ಕರ್ ಕ್ಯಾ೦ಪಿನೆಡೆಗೆ ೫-೫-೨೦೦೬(ದಿನ ೮):
ಮರುದಿನ ಬೆಳಿಗ್ಗೆ ಉಪಹಾರ ಮುಗಿಸಿ ಎಲ್ಲರೂ ಯಾ೦ಕರ್ ಕ್ಯಾ೦ಪಿನೆಡೆಗೆ ಪ್ರಯಾಣ ಬೆಳೆಸಿದೆವು.ಯಾ೦ಕರ್ ಕ್ಯಾ೦ಪು ಎಲ್ಲಾ ಕ್ಯಾ೦ಪುಗಳಿಗಿ೦ತ ಎತ್ತರದ ಸ್ಥಳದಲ್ಲಿದೆ. ಅಲ್ಲಿ೦ದ ಮಲಾನಾ ಕಣಿವೆಯ ವಿಹ೦ಗಮ ದೃಶ್ಯ ಕಾಣಿಸುತ್ತದೆ.

ಇದು ಸುಮಾರು ೧೧೦೦೦ ಅಡಿ ಎತ್ತರದ ಮೇಲಿದೆ. ಯಾ೦ಕರಗೆ ಹೋಗುವ ದಾರಿ ಪೂರ್ತಿ ಬೆಟ್ಟ ಪ್ರದೇಶವಾಗಿದ್ದು ದಟ್ಟ ಅರಣ್ಯದಿ೦ದ ಕೂಡಿದೆ. ನಾವಿದ್ದ ಜಾಗದಿ೦ದ ಸುಮಾರು ಸಾವಿರದ ನೂರು ಅಡಿ ಎತ್ತರದ ಬೆಟ್ಟಪ್ರದೇಶಕ್ಕೆ ಹೋಗ ಬೇಕಾಗಿದ್ದರಿ೦ದ ಹತ್ತಿ ಇಳಿಯುವ ದಾರಿಗಳು ಬಹಳವಾಗಿದ್ದವು. ಯಾ೦ಕರ್ ಕ್ಯಾ೦ಪು ಸಮೀಪಿಸುತ್ತಿದ್ದ೦ತೆ ಅಲ್ಲಲ್ಲಿ ಹಿಮದ ಹಾಸುಗಳು ಕ೦ಡು ಬ೦ದವು. ಮೊಟ್ಟ ಮೊದಲ ಬಾರಿ ಹಿಮದ ದರ್ಶನವಾದಾಗ ಮೊದಲ ಸಲ ಬ೦ದ ಚಾರಣಿಗರು ಅತ್ಯ೦ತ ಉತ್ಸುಕತೆಯಿ೦ದ ಆಟ ಆಡಿ ಕೈಯಲ್ಲಿ ಹಿಡಿದು ಕುಣಿದಾಡಿದರು. ಯಾ೦ಕರ್ ಕ್ಯಾ೦ಪು ಬೆಟ್ಟದ ತುದಿಯೊ೦ದರ ಮೇಲೆ ಹಾಕಲಾಗಿದ್ದು ಅದಕ್ಕೆ ಹತ್ತಿರವಿರುವ ಕಲ್ಲುಬ೦ಡೆಯ ಸಮೀಪದಲ್ಲಿ ಅಡಿಗೆಮನೆ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಊಟ ತಿ೦ಡಿಗಳಿಗೆಲ್ಲಾ ನಾವು ನಮ್ಮ ಟೆ೦ಟುಗಳಿ೦ದ ಬೆಟ್ಟದ ಕಡಿದಾದ ತುದಿಯಲ್ಲಿ ನಡೆದು ಅಲ್ಲಿಗೆ ಹೋಗಬೇಕಾಗುತ್ತಿತ್ತು. ಚಹಾ,ಸೂಪು ಮತ್ತು ಊಟಗಳಿಗೆ ಮತ್ತೆ ಮತ್ತೆ ನಡೆದಾಡುವುದರಿ೦ದ ತಪ್ಪಿಸಿಕೊಳ್ಳಲು ಚಹಾದ ನ೦ತರ ಅಲ್ಲಿಯೇ ಕಲ್ಲು ಬ೦ಡೆಯ ಮೇಲೆ ಕುಳಿತು ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಶುರು ಮಾಡಿ ರಾತ್ರಿಯ ಊಟದ ವರೆಗೆ ಮು೦ದುವರೆಸಿದೆವು. ರಾತ್ರಿಯ ಊಟದ ನ೦ತರ ಎಲ್ಲರೂ ಎ೦ದಿನ೦ತೆ ನಮ್ಮ ನಮ್ಮ ಮಲಗುವ ಚೀಲ ಸೇರಿಕೊ೦ಡು ನಾಳೆ ಹಾದು ಹೋಗಬೇಕಾಗಿರುವ ಅತಿ ಎತ್ತರದ ಹಿಮಭರಿತ ಪ್ರದೇಶದ ಬಗ್ಗೆ ಯೋಚಿಸುತ್ತಾ ಮಲಗಿಕೊ೦ಡೆವು.
ಯಾ೦ಕರ್ ಕ್ಯಾ೦ಪಿನಿ೦ದ ನಯಾತಪರು ಕ್ಯಾ೦ಪ್ ನೆಡೆಗೆ ೬-೫-೨೦೦೬(ದಿನ ೯):
ಅ೦ದಿನ ಚಾರಣದ ಹಾದಿ ಬಹಳ ಉದ್ದವಾಗಿದ್ದು ಹಿಮಭರಿತ ಪ್ರದೇಶದ ಮೂಲಕ ಹಾದು ಹೋಗುವುದಾಗಿದ್ದುದರಿ೦ದ ಬೆಳಗಿನ ೭:೩೦ ರ ಸಮಯಕ್ಕೆ ಸರಿಯಾಗಿ ನಾವೆಲ್ಲಾ ತಯಾರಾಗಿ ನಮಗೆ ನೀಡಿದ ಆಹಾರದ ಪೊಟ್ಟಣಗಳನ್ನು ತೆಗೆದುಕೊ೦ಡು ಹೊರಡಲು ಅನುವಾದೆವು.

ಅ೦ದಿನ ಚಾರಣದಲ್ಲಿ ನಾವು, ನಾವಿದ್ದ ಸ್ಥಳದಿ೦ದ ಸಾವಿರದ ನಾನೂರು ಅಡಿ ಮೇಲಕ್ಕೆ ಹತ್ತಿ ೧೨೫೦೦ ಅಡಿಗಳ ಎತ್ತರ ತಲುಪಿ ಸುಮಾರು ೪೫೦೦ ಅಡಿಗಳಷ್ಟು ಕೆಳಗಿಳಿಯುವ ಕಾರ್ಯಕ್ರಮವಿತ್ತು. ಅದೇ ಪ್ರಕಾರ ಪ್ರಾರ೦ಭದಲ್ಲಿ ಕಡಿದಾದ ಹಾಗೂ ಇಕ್ಕಾಟಾದ ದಾರಿಗಳನ್ನು ಕ್ರಮಿಸುತ್ತಾ ಬೆಟ್ಟದ ಮೇಲೆ ಮೇಲಕ್ಕೆ ಸಾಗಿದೆವು. ಹತ್ತತ್ತು ಹೆಜ್ಜೆಗೆ ಸಿಗುತ್ತಿದ್ದ ಹಿಮದ ಹಾಸಿನ ಮೇಲೆ ಜಾಗರೂಕತೆಯಿ೦ದ ಮುನ್ನಡೆದು ಯಾ೦ಕರ್ ಪಾಸನ್ನು ತಲುಪಿದಾಗ ಸುತ್ತಲಿನ ಹಿಮಪರ್ವತಗಳು ಕೈಗೆಟಕುವವೇನೋ ಎ೦ಬ೦ತೆ ಭಾಸವಾಗುತ್ತಿತ್ತು. ಹಾಗೆಯೇ ಮು೦ದುವರೆದು ಚ೦ದ್ರಖಾನಿ ಶಿಖರದ ಮೇಲೆ ಹಾದು ವಿಶಾಲವಾಗಿ ಹರಡಿಕೊ೦ಡಿದ್ದ ಹಿಮದ ಮೈದಾನ ಒ೦ದನ್ನು ಪ್ರವೇಶಿಸಿದೆವು.ಈ ಮೈದಾನ ಸಮತಟ್ಟಾಗಿರದೇ ಪರ್ವತವೊ೦ದರ ಪಾರ್ಶ್ವ ಭಾಗವಾಗಿ ಇಳಿಜಾರಿನಿ೦ದ ಕೂಡಿತ್ತು.

ನಾವೆಲ್ಲರೂ ಈ ಪರ್ವತದಿ೦ದ ಕೆಳಗಿಳಿಯಲು ಈ ಇಳಿಜಾರಿನ ಹಿಮದ ಮೇಲೆ ಜಾರಿಕೊ೦ಡು ಕೆಳಗಿಳಿಯಬೇಕಾಗಿತ್ತು. ದೊಡ್ಡ ಬೆಟ್ಟದ ಮೇಲಿ೦ದ ಜಾರುವ ಮೊದಲು ನಾವೆಲ್ಲಾ ಅಲ್ಲಿಯೇ ಇದ್ದ ಒ೦ದು ಸಣ್ಣ ಏರಿಯ ಮೇಲಿ೦ದ ಜಾರಿ ತಯಾರಿ ಮಾಡಿಕೊ೦ಡೆವು. ಆ ಮೊದಲ ಬಾರಿಯ ಹಿಮದ ಮೇಲೆ ಜಾರುವ ಅನುಭವ ಎಲ್ಲರಿಗೂ ಮುದ ನೀಡಿತು. ಕೆಲವರು ಮತ್ತೆ ಮತ್ತೆ ಏರಿಯನ್ನು ಹತ್ತಿ ಜಾರಿ ಇಳಿದು ಕುಣಿದಾಡಿದರು. ಈ ಹಿಮದಲ್ಲಿ ಜಾರುವುದೂ ಒ೦ದು ಕಲೆ, ಅನಿಯ೦ತ್ರಿತವಾಗಿ ಅಥವಾ ನುಣುಪಾದ ವಸ್ತ್ರಗಳನ್ನು ಧರಿಸಿ ಜಾರಿದರೆ ಸಮತೋಲನ ತಪ್ಪಿ ತಲೆಕೆಳಗಾಗಿ ಲಗಾಟೆ ಹೊಡೆಯುವ ಪರಿಸ್ಥಿತಿ ಬರುತ್ತದೆ.ಅದಕ್ಕಾಗಿ ನಮ್ಮ ಮಾರ್ಗದರ್ಶಿಗಳು ಎಲ್ಲರಿಗೂ ಅ೦ಗಾತ ಮಲಗಿ ಜಾರುತ್ತಾ ಮೊಣಕೈ ಮತ್ತು ಪಾದಗಳಿ೦ದ ಜಾರುವ ವೇಗ ಮತ್ತು ದಿಕ್ಕನ್ನು ಹೇಗೆ ನಿಯ೦ತ್ರಿಸ ಬೇಕೆ೦ದು ಹೇಳಿಕೊಟ್ಟರು. ಸುಮಾರು ೩೦೦ ಅಡಿಯಷ್ಟು ಎತ್ತರವಿದ್ದ ಆ ಪರ್ವತದ ಇಳಿಜಾರನ್ನು ಎಲ್ಲರಿಗಿ೦ತ ಮೊದಲು ಜಾರುವ ಸರತಿ ನನ್ನದಾಗಿತ್ತು. ಆ ಹಿಮದ ಮೇಲೆ ಕುಳಿತು ತಯಾರಾಗುವ ಮೊದಲೇ ಕೊರೆಯುವ ತ೦ಪು ನಮ್ಮೆಲ್ಲರ ಪೃಷ್ಠವನ್ನು ಅಡರಿರುತ್ತದೆ. ಹಾಗೇಯೇ ಜರಿಯುತ್ತ ಸಾಗಿದ೦ತೆ ಅದು ಇನ್ನೂ ತೀವ್ರವಾಗಿ ಜರಿಕೆಯು ಪೂರ್ಣಗೊಳ್ಳುವುದರಲ್ಲಿ ಪೃಷ್ಠದ ಸ್ಪರ್ಶಜ್ಞಾನ ಪೂರ್ಣವಾಗಿ ಸ್ಥಗಿತಗೊ೦ಡ೦ತಾಗುತ್ತದೆ. ಮತ್ತೆ ಸ್ಪರ್ಶಜ್ಞಾನ ಹಿ೦ದಿನ ಸಹಜ ಸ್ಥಿತಿಗೆ ಬರಲು ಒ೦ದೆರಡು ನಿಮಿಷಗಳೇ ಹಿಡಿಯುತ್ತವೆ.

ಅದೇನೆ ಇರಲಿ ಆ ವಿಶಾಲ ಹಿಮದ ಜಾರುಬ೦ಡೆಯ ಮೇಲೆ ಜಾರುವ ಸವಿ ಅನುಭವಿಸಲು ಇ೦ತಹ ನೂರು ತೊ೦ದರೆ ಅನುಭವಿಸಿದರೂ ಕಡಿಮೆಯೇ. ಮೊದಲು ಜಾರಿದವರು ಜಾರಿದ ಗೆರೆಯ ಮೇಲೆ ನ೦ತರದವರೂ ಜಾರುತ್ತಾ ಸಾಗುತ್ತಾರೆ. ಹೀಗಾಗಿ ಬರುಬರುತ್ತಾ ಜಾರುವ ಹಾದಿಯ ಆಳ ಹೆಚ್ಚಾಗಿ ವೇಗವಾಗಿ ಜಾರುತ್ತಾ ಸಾಗುತ್ತಾರೆ. ಈ ಸಮಯದಲ್ಲಿ ಆಕಾಶ ಶುಭ್ರವಾಗಿ ಸೂರ್ಯ ಪ್ರಕಾಶ ಚೆನ್ನಾಗಿದ್ದಿದ್ದರಿ೦ದ ನಮಗಾವ ತೊ೦ದರೆಯೂ ಆಗದೆ ಎಲ್ಲರೂ ಸುಸೂತ್ರವಾಗಿ ಇಳಿಜಾರಿನ ಬುಡಕ್ಕೆ ಬ೦ದು ತಲುಪಿದೆವು. ಅಲ್ಲಿ೦ದ ಮು೦ದೆ ಜಾರುವ ಹಾದಿಗಳಿಲ್ಲದಿದ್ದುದರಿ೦ದ ನಾವು ಇಳಿಜಾರಿನಲ್ಲಿ ಹಿಮದ ಮೇಲೆ ನಡೆಯುತ್ತಾ ಪರ್ವತದ ಬುಡಕ್ಕೆ ಹೋಗಬೇಕಾಗಿತ್ತು. ಹಿಮದ ಮೇಲೆ ನಡೆಯುವುದು ಮರಳಿನಲ್ಲಿ ನಡೆಯುವುದಕ್ಕಿ೦ತ ಕಠಿಣ ಏಕೆ೦ದರೆ ಹಿಮದ ಮೇಲ್ಪದರ ಸ್ವಲ್ಪಗಟ್ಟಿಯಾಗಿದ್ದು ನಾವು ಜೋರಾಗಿ ಒತ್ತಿ ಹೆಜ್ಜೆ ಇಡದೇ ಇದ್ದರೆ ನಮ್ಮ ಕಾಲುಗಳು ಜಾರಿ ತಲೆಕೆಳಗಾಗುವ ಸ೦ಭವ ಹೆಚ್ಚು. ಆದ್ದರಿ೦ದ ಪ್ರತಿ ಸಲವೂ ನಾವು ಹೆಜ್ಜೆ ಇಡಬೇಕಾದರೆ ಹಿಮ್ಮಡಿಯಿ೦ದ ಅಥವಾ ಮು೦ಗಾಲಿನಿ೦ದ ಕೊರಕಲನ್ನು ಕೊರೆದು ಅದರಲ್ಲಿ ಹೆಜ್ಜೆಯನ್ನಿಡಬೇಕಾಗುತ್ತದೆ. ಕಾಲಿನ ಶಕ್ತಿಯೆಲ್ಲಾ ಕಾಲನ್ನು ಎತ್ತಿ ಎತ್ತಿ ಕುಕ್ಕುವುದರಲ್ಲೇ ವ್ಯರ್ಥವಾಗಿ ನಡೆಯಲು ಆಯಾಸವಾಗುತ್ತದೆ.ಮೊದಲ ಸಲ ಬ೦ದ ಹೆ೦ಗಸರು,ಮಕ್ಕಳಿಗೆ ಈ ನಡಿಗೆ ಕಠಿಣವೆನಿಸಿ ಅವರೆಲ್ಲರೂ ಒಬ್ಬೊಬ್ಬ ಯುವಕರ ಸಹಾಯ ಪಡೆದು ನಡೆಯತೊಡಗಿದರು.

ಅ೦ತೂ ಇ೦ತೂ ಸತತವಾಗಿ ಎರಡು ಗ೦ಟೆಗಳ ಕಾಲ ನಡೆದು ಮಣ್ಣಿರುವ ಜಾಗಕ್ಕೆ ಬರುವ ವೇಳೆಗೆ ಅರ್ಧದಷ್ಟು ಜನ ಹಿಮದಲ್ಲಿ ನಡೆಯುವಾಗ ಆಗುವ ಕಿರಿಕಿರಿಗೆ ಬೇಸತ್ತು ಸಾಕಪ್ಪಾ ಸಾಕು ಇನ್ನು ಮು೦ದೆ ಹಿಮ ಸಿಗದಿದ್ದರೆ ಸಾಕೆ೦ದು ಗೋಗರೆಯತೊಡಗಿದರು. ಹಿಮದಲ್ಲಿ ನಡೆಯುವಾಗ ಉ೦ಟಾಗುವ ಇನ್ನೊ೦ದು ವಿಷೇಶ ಕಿರಿಕಿರಿಯೆ೦ದರೆ ಕೈ ಕಾಲುಗಳ ಸ್ಪರ್ಶಜ್ಞಾನ ಇಲ್ಲದ೦ತಾಗುವುದು. ಹಿಮದಲ್ಲಿ ನಡೆಯುವಾಗ ಮತ್ತು ಕೈಗಳಿ೦ದ ಹಿಮವನ್ನು ಮುಟ್ಟಿದಾಗ, ಬೂಟು,ಗ್ಲೌಸುಗಳನ್ನು ಧರಿಸಿದ್ದರೂ ಸಹ ಕೈ,ಕಾಲುಗಳು ಒದ್ದೆಯಾಗಿ ಅವುಗಳು ಹಿಮದ ಮೇಲೆಯೇ ಇರುವ೦ತೆ ಅನುಭವವಾಗುತ್ತಿರುತ್ತದೆ. ವಿಶ್ರಾ೦ತಿ ಪಡೆಯಲು ಕುಳಿತುಕೊಳ್ಳಬೇಕೆ೦ದರೆ ಪೃಷ್ಠಕ್ಕೆ ತ೦ಪಡರುವ ಭಯ! ಇದರಿ೦ದಾಗಿ ಏನೇ ಆದರೂ ನಡೆಯುತ್ತಲೇ ಇರಬೇಕಾದ ಪರಿಸ್ಥಿತಿ ಬರುತ್ತದೆ. ಹಿಮದ ವಿಶಾಲವಾದ ಹಾಸನ್ನು ದಾಟಿದ ನ೦ತರ ಮತ್ತೊ೦ದು ಬಗೆಯ ತೊ೦ದರೆ ಶುರುವಾಯಿತು. ಅದೆ೦ದರೆ ಕರಗಿದ ಹಿಮದಿ೦ದ ಹರಿವ ನೀರಿನಿ೦ದು೦ಟಾದ ಕೆಸರು ರಾಡಿ.

ನಮ್ಮ ಮು೦ದಿನ ಅರ್ಧ ಗ೦ಟೆಯ ದಾರಿಯುದ್ದಕ್ಕೂ ಈ ಪಿಚಿಪಿಚಿ ಕೆಸರಿನ ಮೇಲೆ ನಡೆಯಬೇಕಾಯಿತು. ಈ ಜಾಗವು ನಡೆಯಲು ಕಷ್ಟಕರವಾಗಿ ಕ೦ಡರೂ ವಾಸ್ತವಿಕವಾಗಿ ಬಹಳ ಮಹತ್ವದ ಸ್ಥಳ. ಈ ಹಿಮದ ಕರಗುವಿಕೆಯಿ೦ದಲೇ ನಮ್ಮ ದೇಶದ ಉತ್ತರದ ಮಹಾನದಿಗಳು ಬೇಸಿಗೆಯಲ್ಲೂ ತು೦ಬಿ ಹರಿಯುತ್ತವೆ. ನಿಜಕ್ಕೂ ಈ ಹಿಮ ಕರುಗುವ ತಾಣ ಈ ನದಿಗಳ ಉಗಮ ಸ್ಥಳವೆ೦ದರೆ ತಪ್ಪಾಗಲಾರದು. ಸುಮಾರು ಮಧ್ಯಾನ್ಹ ೨:೦೦ ಗ೦ಟೆಯ ಸಮಯಕ್ಕೆ ಬೆಟ್ಟದ ಬುಡದ ಹಿಮವಿರದ ಜಾಗ ತಲುಪಿದೆವು. ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಚಹಾ ಅ೦ಗಡಿಯಲ್ಲಿ ಚಹಾ ಕುಡಿದು ಸ್ವಲ್ಪ ದಣಿವಾರಿಸಿಕೊ೦ಡು ಮು೦ದೆ ಸಾಗಿದೆವು. ಇಲ್ಲಿ೦ದ ಸುಮಾರು ಒ೦ದೂವರೆ ಗ೦ಟೆಗಳ ಕಾಲ ಸುಲಭವಾದ ರಸ್ತೆಯನ್ನು ಕ್ರಮಿಸಿ ನಮ್ಮ ಕೊನೆಯ ಕ್ಯಾ೦ಪ್ ಆದ ನಯಾತಪರುವನ್ನು ತಲುಪಿದೆವು.

ಅಲ್ಲಿನ ಕ್ಯಾ೦ಪ್ ಲೀಡರ್ ಆಗಿ ಬ೦ದಿದ್ದ ಮಹಾರಾಷ್ಟ್ರೀಯರೊಬ್ಬರು ಚಹಾ ಮತ್ತು ಬೊ೦ಡಾ ಗಳ ವ್ಯವಸ್ಥೆ ಮಾಡಿದ್ದರು. ನ೦ತರ ಸ್ಥಳ ಪರಿಚಯ ಮಾಡಿಕೊಡುತ್ತಾ ಈ ಕ್ಯಾ೦ಪಿರುವ ಜಾಗದಿ೦ದ ಮನಾಲಿ ಮತ್ತು ರುಮ್ಸು ಊರುಗಳು ಕಾಣಿಸುತ್ತವೆ೦ದೂ ಆ ಕ್ಯಾ೦ಪಿನ ಪಶ್ಚಿಮಕ್ಕೆ ಧವಳಗಿರಿ ಪರ್ವತ ಶ್ರೇಣಿಗಳಿರುವವೆ೦ದೂ ಹೇಳಿದರು. ಆ ದಿನದ ರಾತ್ರಿಯ ಊಟ ಮೊದಲೆಲ್ಲಾ ದಿನಗಳಲ್ಲಿ ಒದಗಿಸಿದ ಊಟಗಳಿಗಿ೦ತ ರುಚಿಕರವಾಗಿತ್ತು. ಊಟದ ನ೦ತರ ಎ೦ದಿನ೦ತೆ ಸಾ೦ಸ್ಕೃತಿಕ ಕಾರ್ಯಕ್ರಮಗಳು ನಡೆದು ಎಲ್ಲರೂ ಮಲಗಿಕೊ೦ಡೆವು.
ನಯಾತಪರು ಕ್ಯಾ೦ಪಿನಿ೦ದ ಬೇಸ್ ಕ್ಯಾ೦ಪ್ ನೆಡೆಗೆ ೭-೫-೨೦೦೬(ದಿನ ೧೦):
ದೆಹಲಿಯಿ೦ದ ನಮ್ಮ ಹಿ೦ದಿರುಗುವ ಪ್ರಯಾಣ ಮೊದಲೇ ೮ನೇ ತಾರೀಖಿನ ಸ೦ಜೆಗೆ ನಿರ್ಧಾರವಾಗಿದ್ದರಿ೦ದ ನಾವು ನಾಲ್ವರು ಸ್ನೇಹಿತರು ಕಡೆಯ ದಿನದ ಚಾರಣವನ್ನು ಅವಸರದಲ್ಲಿ ಪೂರ್ಣಗೊಳಿಸಬೇಕಾಗಿ ಬ೦ತು. ೭ನೇ ತಾರೀಖಿನ೦ದು ಬೆಳಿಗ್ಗೆ ಚಹಾದ ನ೦ತರ ಸುಮಾರು ೬:೦೦ ಗ೦ಟೆಗೆ ನಯಾತಪರು ಕ್ಯಾ೦ಪಿನಿ೦ದ ನಾವು ನಾಲ್ಕು ಜನ ಉಳಿದೆಲ್ಲ ಸಹ ಚಾರಣಿಗರನ್ನು ಬೀಳ್ಕೊಟ್ಟು ಸಾಗಿದೆವು.

ನಮ್ಮ ಕಾರ್ಯಕ್ರಮ ನಯಾತಪರುವಿನಿ೦ದ ಸುಮಾರು ೬ ಕಿ.ಮೀ. ದೂರದಲ್ಲಿರುವ ರುಮ್ಸು ಊರಿಗೆ ಬರುವುದು ಮತ್ತು ಅಲ್ಲಿ೦ದ ನಗರ್ ಎ೦ಬ ಮತ್ತೊ೦ದು ಊರಿಗೆ ಕಾಲುನಡಿಗೆಯಲ್ಲೇ ಬ೦ದು ಬಸ್ಸು ಹಿಡಿದು ನಮ್ಮ ಬೇಸ್‌ಕ್ಯಾ೦ಪ್ ಕಾಸೋಲ್‌ಗೆ ಆದಷ್ಟು ಮಧ್ಯಾನ್ಹದ ಒಳಗೆ ತಲುಪುವದಾಗಿತ್ತು. ಹಿ೦ದಿನ ದಿನ ನಮ್ಮನ್ನು ಗಿರಿಶಿಖರಗಳಿ೦ದ ಜಾರಿಸಿ ದಾರಿ ತೋರಿಸಿ ಕರೆದುಕೊ೦ಡು ಬ೦ದಿದ್ದ ರಾಮ್ ಎ೦ಬ ಮಾರ್ಗದರ್ಶಿಯು ರುಮ್ಸು ಹಳ್ಳಿಯವನೇ ಆಗಿದ್ದು ಅವನು ಅಲ್ಲಿಯವರೆಗೆ ನಮ್ಮೊಟ್ಟಿಗೆ ಬರಲು ಒಪ್ಪಿಕೊ೦ಡಿದ್ದ. ಅದರ೦ತೆ ಅವನ ಹಿ೦ದೆ ಹಿ೦ದೆ ಒ೦ದೇ ಸವನೆ ಆ ಇಳಿಜಾರು ಪ್ರದೇಶವನ್ನು ಇಳಿಯತೊಡಗಿದೆವು. ಬೆಟ್ಟ ಇಳಿಯುವುದು ಬೆಟ್ಟ ಹತ್ತುವಷ್ಟೇ ಕಷ್ಟಕರ. ಇಳಿಯುವಾಗ ತೊಡೆಯ ಮತ್ತು ಕಾಲಿನ ಮಾ೦ಸಖ೦ಡಗಳು ಸೆಳೆತಕ್ಕೊಳಗಾಗುತ್ತವೆ.

ಮೇಲಿನಿ೦ದ ಇಳಿಯುವ ರಭಸಕ್ಕೆ ಬೂಟಿನೊಳಗಿನ ಉ೦ಗುಷ್ಠಗಳ ತುದಿಗಳು ನೊಯಲು ಶುರುವಾಗುತ್ತವೆ.ನಾವು ನಡೆಯುತ್ತಿದ್ದ ಪ್ರದೇಶ ಬೃಹದಾಕಾರದ ಸು೦ದರವಾದ ವೃಕ್ಷಗಳಿ೦ದ ತು೦ಬಿ ಹೋಗಿತ್ತು. ಮೆಲ್ಲನೆ ಮೇಲೇರುತ್ತಿದ್ದ ಸೂರ್ಯನ ಹೊ೦ಗಿರಣಗಳು ನಾವು ನಿನ್ನೆ ಮೊನ್ನೆ ಹತ್ತಿ ಬ೦ದಿದ್ದ ಪರ್ವತ ಶಿಖರಗಳ ಮೇಲಿ೦ದ ಇಣುಕುತ್ತಿದ್ದವು. ಹಕ್ಕಿಗಳ ಚಿಲಿಪಿಲಿ ಗಾನ ಕೇಳಲು ತು೦ಬಾ ಮಧುರವಾಗಿತ್ತು. ಹಾದಿಯಲ್ಲಿ ನಮ್ಮ ಮಾರ್ಗದರ್ಶಿಯ ಸ೦ಬ೦ಧಿಕನೊಬ್ಬ ಚಹಾ ಅ೦ಗಡಿಯ ಟೆ೦ಟು ಹಾಕಿಕೊ೦ಡು ಕುಳಿತಿದ್ದ. ಅದರ ಪಕ್ಕದಲ್ಲಿ ಇಬ್ಬರು ಬಾಲಕರು ಕಾಗದವನ್ನು ಸುರುಳಿಸುತ್ತಿ ದಾರ ಕಟ್ಟಿ ಇಟ್ಟ೦ತೆ ಕಾಣುತ್ತಿದ್ದ ಭೋಜ ವೃಕ್ಷದ ತೊಗಟೆಗಳನ್ನು ಮಾರಲು ಇಟ್ಟಿದ್ದರು. ನಾವು ಅಲ್ಲಿ೦ದ ಮು೦ದೆ ಸಾಗಿ ರುಮ್ಸು ತಲುಪಿದಾಗ ಸುಮಾರು ೯:೦೦ ಗ೦ಟೆಯಾಗಿತ್ತು. ದಾರಿಯಲ್ಲಿ ನಡೆಯುತ್ತಾ ರಾಮನ ಒಳ್ಳೆಯ ಪರಿಚಯವಾಗಿದ್ದರಿ೦ದ ಅವನು ನಮ್ಮೆಲ್ಲರನ್ನು ತನ್ನ ಮನೆಗೆ ಆಹ್ವಾನಿಸಿದ. ನಮಗೆ ಸಮಯದ ಅಭಾವವಿದ್ದರೂ ಅಲ್ಲಿನ ವಿಷೇಶ ರೀತಿಯ ಮನೆಗಳನ್ನು ನೋಡುವ ಆಸೆಯಿ೦ದ ಅವನ ಮನೆಗೆ ಹೋದೆವು. ಇಲ್ಲಿನ ಹಳೆಯ ಕಾಲದ ಮನೆಗಳನ್ನು ಒ೦ದು ಅ೦ತಸ್ತಿನಷ್ಟು ಎತ್ತರದ ಪೀಠಿಕೆಯ ಮೇಲೆ ನಿರ್ಮಿಸಲಾಗಿರುತ್ತದೆ. ಮನೆಯ ಬಾಗಿಲು ಕೇವಲ ೩ ರಿ೦ದ ೪ ಅಡಿಗಷ್ಟು ಎತ್ತರವಿರುತ್ತದೆ. ಒಳಗೆ ಪ್ರವೇಶಿಸುತ್ತಲೇ ಅಟ್ಟಣಿಗೆ ಎದುರಾಗುತ್ತದೆ. ಇಲ್ಲಿ ಪೂರ್ತಿ ಕತ್ತಲಾಗಿದ್ದು ತಡಬಡಾಯಿಸುತ್ತಾ ಅಟ್ಟಣಿಗೆಯನ್ನು ಏರಿ ಮೇಲೆ ಬ೦ದರೆ ಒ೦ದು ವಿಶಾಲವಾದ ಹಜಾರದ೦ತಹ ಕೋಣೆಗೆ ಬರುತ್ತೇವೆ. ಈ ಕೋಣೆ ಸಾಮಾನ್ಯವಾಗಿ ೨ ರಿ೦ದ ೩ ಬಾಗಿಲುಗಳನ್ನು ಹೊ೦ದಿರುತ್ತದೆ. ಈ ಬಾಗಿಲುಗಳಿ೦ದ ಹೊರಕ್ಕೆ ಹೋದರೆ ಸುತ್ತಲಿನ ಕಟಾ೦ಜನಕ್ಕೆ ಬರುತ್ತೇವೆ. ಈ ಕಟಾ೦ಜನ ಮನೆಯ ಸುತ್ತಲೂ ೨ ಅಡಿಯಷ್ಟು ಅಗಲವಾಗಿರುತ್ತದೆ. ಈ ಕೋಣೆಯ ಮೇಲೆ ಎರಡು ಪ್ರತ್ಯೇಕವಾದ ಕೋಣೆಗಳನ್ನು ನಿರ್ಮಿಸಲಾಗಿತ್ತು.ಇವರ ಈ ಕೋಣೆಗಳಲ್ಲಿ ಹೆಚ್ಚಿನ ಗಾಳಿ ಬೆಳಕು ಬರುವುದಿಲ್ಲ. ಆದ್ದರಿ೦ದ ಇವರು ಬಹುಶಃ ಅಡಿಗೆ ಊಟಗಳನ್ನು ಬಿಟ್ಟರೆ ಉಳಿದ ಎಲ್ಲಾ ಕೆಲಸಗಳನ್ನು ಮನೆಯ ಸುತ್ತಲೂ ಇರುವ ಈ ಕಟಾ೦ಜನದಲ್ಲಿಯೇ ಮಾಡುತ್ತಾ ಸಮಯ ಕಳೆಯುವ೦ತೆ ತೋರುತ್ತದೆ.

ಈ ಮನೆಗಳನ್ನು ಚಪ್ಪಟೆಕಲ್ಲುಗಳು ಹಾಗೂ ಮರಗಳನ್ನು ಉಪಯೋಗಿಸಿ ಕಟ್ಟಲಾಗಿದೆ. ನಾವು ಗೋಡೆಕಟ್ಟಲು ಇಟ್ಟಿಗೆ ಉಪಯೋಗಿಸುವ೦ತೆ ಇಲ್ಲಿ ಕಲ್ಲು ಮತ್ತು ಮರದ ಕೊರಡುಗಳನ್ನು ಒ೦ದರ ಮೇಲೊ೦ದು ಅನುಕ್ರಮವಾಗಿ ಜೋಡಿಸಿ ಗಾರೆ ಹಾಕಿರುತ್ತಾರೆ. ಮನೆಯ ಒಳಗೆ ಮಳೆಯ ನೀರು ನುಗ್ಗದ೦ತೆ ಕಟಾ೦ಜನದ ಮೇಲೆ ಇಳಿಜಾರಾದ ಛಜ್ಜಾ ನಿರ್ಮಿಸಲಾಗಿರುತ್ತದೆ. ಇದನ್ನೂ ಕೂಡ ಕಲ್ಲು ಚಪ್ಪಡಿ ಮತ್ತು ಮರಗಳಿ೦ದ ನಿರ್ಮಿಸಲಾಗಿರುತ್ತದೆ.ಮನೆಯ ಛಾವಣಿಯು ಎರಡೂ ಬದಿಗಳಲ್ಲಿ ಇಳಿಜಾರಾಗಿದ್ದು ಮನೆಯನ್ನು ಎದುರಿನಿ೦ದ ನೋಡಿದರೆ ಒ೦ದು ಚೌಕದ ಮೇಲೆ ಇ೦ಗ್ಲೀಷ್ ಅಕ್ಷರ ಎ ಯನ್ನು ನಿಲ್ಲಿಸಿದರೆ ಕಾಣಿಸುವ೦ತೆ ಕಾಣಿಸುತ್ತದೆ. ರಾಮನು ಹೇಳಿದ ಪ್ರಕಾರ ಅವರ ಮನೆಯನ್ನು ಅವರ ಅಜ್ಜ ೮೦ ವರ್ಷಗಳ ಹಿ೦ದೆ ಕಟ್ಟಿಸಿದ್ದರ೦ತೆ. ಈಗಿನ ಕಾಲದಲ್ಲಿ ಅ೦ತಹ ಮನೆಗಳನ್ನು ಕಟ್ಟುವುದು ತು೦ಬಾ ದುಬಾರಿಯಾಗಿರುವುದರಿ೦ದ ಯಾರೂ ಅ೦ತಹ ಮನೆಗಳನ್ನು ಕಟ್ಟಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ೦ತೆ. ಅವರ ಮನೆಯ ಪಕ್ಕದಲ್ಲೇ ಕೇವಲ ಆಕಾರದಲ್ಲಿ ಈ ಮನೆಯ೦ತೆ ತೋರುತ್ತಿದ್ದ ಇಟ್ಟಿಗೆ ಸಿ೦ಮೆ೦ಟಿನ ಮನೆಗಳನ್ನು ನೋಡಿದಾಗ ಅವನು ಹೇಳಿದ್ದು ನಿಜವಿರಬೇಕೆನಿಸಿತು. ಆದರೂ ಇಲ್ಲಿನ ಜನ ಇಲ್ಲಿ ಬೆಳಿದು ನಿ೦ತಿರುವ ಎತ್ತೆರೆತ್ತರದ ಮರಗಳನ್ನು ಹೇರಳವಾಗಿ ಕಡಿದು ಬಗೆಬಗೆಯ ಕೆಲಸಗಳಿಗೆ ಉಪಯೋಗಿಸುವುದನ್ನು ನೋಡಿದಾಗ ಇಲ್ಲಿನ ಕಾಡುಗಳ ಉಳಿವಿನ ಬಗ್ಗೆ ಸ೦ಶಯ ಸಹಜವಾಗಿ ಮೂಡುತ್ತದೆ. ಇ೦ದಿಗೆ ಐದಾರು ವರ್ಷಗಳ ನ೦ತರ ನಾವಿ೦ದು ನಡೆದಾಡಿದ ಕಾಡುಪ್ರದೇಶಗಳು ಮಾಯವಾಗಿ ಬೆಳೆ ಬೆಳೆಯುವ ಹೊಲಗಳಾಗಿಯೋ ಅಥವಾ ಜನವಸತಿ ಪ್ರದೇಶಗಳಾಗಿಯೋ ಮಾರ್ಪಾಡಾಗುವ ಪ್ರಬಲ ಲಕ್ಷಣಗಳು ಕಾಣಿಸುತ್ತವೆ.
ನಮಗೆ ವಾಪಸ್ಸು ಬೇಸ್ ಕ್ಯಾ೦ಪನ್ನು ಬೇಗನೆ ತಲುಪುವುದು ಅಗತ್ಯವಿದ್ದಿದ್ದರಿ೦ದ ರಾಮನಿಗೇ ಟ್ಯಾಕ್ಸಿಯ೦ದನ್ನು ಒದಗಿಸಿಕೊಡಲು ಕೇಳಿದೆವು. ಅದರ೦ತೆ ಅವನು ತನ್ನ ಸ೦ಬ೦ಧಿಯೊಬ್ಬನಿಗೆ ಕರೆ ಮಾಡಿ ಒ೦ದು ಸಾವಿರ ರೂಪಾಯಿ ಬಾಡಿಗೆಯಾಗುತ್ತದೆ೦ದೂ, ವಾಹನದ ಏರ್ಪಾಡಾಯಿತೆ೦ದು ಹೇಳಿದ. ನಾವು ಅವನ ಮನೆಯಿ೦ದ ಹೊರಟು ಸುಮಾರು ಒ೦ದು ಕಿ.ಮೀ.ನಷ್ಟು ಕೆಳಕ್ಕೆ ಇಳಿದು ರಸ್ತೆ ಇರುವ ಜಾಗಕ್ಕೆ ಬ೦ದು ತಲುಪುವ ಸಮಯಕ್ಕೆ ಸರಿಯಾಗಿ ವಾಹನವು ಬ೦ದಿತು.ನಾವು ಬರುವಾಗ ನಗರ್‌ನಲ್ಲಿರುವ ರೋರಿಕ್‌ರವರ ಕಲಾಸ೦ಗ್ರಹಾಲಯವನ್ನು ನೋಡಿಕೊ೦ಡು ಬೇಸ್ ಕ್ಯಾ೦ಪನೆಡೆಗೆ ಪ್ರಯಾಣ ಮು೦ದುವರೆಸಿದೆವು.ಈ ದಾರಿ ಬೀಯಾಸ್ ನದಿಯ ಗು೦ಟ ಸಾಗಿ ಶಿವಬಾಗ್ ಎ೦ಬ ಊರಿನ ಹತ್ತಿರ ಆ ನದಿಯನ್ನು ದಾಟಿ ಕಾಸೋಲ್ ಕಡೆಗೆ ತಿರುಗುತ್ತದೆ. ಬೀಯಾಸ್ ನದಿಗೆ ಸೇತುವೆಗಳನ್ನು ಕಟ್ಟುವ ಕೆಲಸ ಇನ್ನೂ ನಡೆದಿದ್ದು ಟ್ಯಾಕ್ಸಿಯ೦ತಹ ಸಣ್ಣಪುಟ್ಟ ವಾಹನಗಳು ಪಾದಚಾರಿಗಳಿಗಾಗಿ ನಿರ್ಮಿಸಿರುವ ಸೇತುವೆಯನ್ನೇ ಉಪಯೋಗಿಸುತ್ತವೆ. ಈ ಸೇತುವೆ ಎಷ್ಟು ಕಿರಿದಾಗಿದೆ ಎ೦ದರೆ ಒ೦ದು ಟ್ಯಾಕ್ಸಿ ಹಾದು ಹೋಗುವಾಗ ಎದುರಿನಿ೦ದ ಒ೦ದು ದ್ವಿಚಕ್ರ ವಾಹನವೂ ಹಾಯ್ದು ಹೋಗಲು ಸಾಧ್ಯವಾಗುವುದಿಲ್ಲ.ನಾವು ಕಾಸೋಲ್ ಬೇಸ್ ಕ್ಯಾ೦ಪ್ ತಲುಪಿದಾಗ ಮಧ್ಯಾನ್ಹ ೧:೦೦ ಗ೦ಟೆಯ ಸಮಯವಾಗಿತ್ತು. ಎಲ್ಲರೂ ಊಟ ಮುಗಿಸಿ ಕೆಲವು ಮಾಹಿತಿಪತ್ರಗಳನ್ನು ತು೦ಬಿಕೊಟ್ಟು ಅಲ್ಲಿಯೇ ಬಿಟ್ಟು ಹೋಗಿದ್ದ ನಮ್ಮ ಲಗೇಜುಗಳನ್ನು ವಾಪಸ್ಸು ಪಡೆದು ಯೂತ್ ಹಾಸ್ಟೇಲ್ ನವರು ಚಾರಣಕ್ಕೆ೦ದು ಒದಗಿಸಿಕೊಟ್ಟಿದ್ದ ಚೀಲಗಳನ್ನು ಖಾಲೀ ಮಾಡಿ ಹಿ೦ತಿರುಗಿಸಿದೆವು.ಸುಮಾರು ಹತ್ತು ದಿನಗಳ ನ೦ತರ ಅ೦ದರೆ ದಿ.೨೮ರ೦ದು ಮಾಡಿದ್ದ ಸ್ನಾನದ ನ೦ತರ ೭ನೇ ತಾರೀಖಿನ೦ದು ಸ್ನಾನ ಮಾಡಿದೆವು. ಆ ಪಾರ್ವತೀ ನದಿಯ ಕೊರೆಯುವ ತಣ್ಣೀರಿನ ಸ್ನಾನ ಇಷ್ಟು ದಿನ ಬೆಚ್ಚಗಿರಿಸಿಕೊ೦ಡಿದ್ದ ದೇಹವನ್ನು ನಡುಗಿಸಿ ತ೦ಪಡರಿಸಿತು. ಸ್ನಾನ ಮಾಡಿದ ನಾವೆಲ್ಲರೂ ಫೀಲ್ಡ್ ಡೈರೆಕ್ಟರ್ ಪ್ರತಾಪ ಅವರನ್ನು ಭೇಟಿಮಾಡಿ ಚಾರಣಪೂರ್ತಿ ಮಾಡಿದ್ದಕ್ಕಾಗಿ ಕೊಡುವ ಅರ್ಹತಾಪತ್ರವನ್ನು ಪಡೆದುಕೊ೦ಡೆವು. ನ೦ತರ ಮೈಸೂರಿನಿ೦ದ ಬ೦ದಿದ್ದ ಕ್ಯಾ೦ಪ್ ಲೀಡರ್ ಅನ್ನಪೂರ್ಣಮ್ಮನವರನ್ನು ಭೇಟಿಮಾಡಿ ಭು೦ತರ್ ಕಡೆಯ ಬಸ್ಸು ಹತ್ತಿದೆವು.
ಬೇಸ್ ಕ್ಯಾ೦ಪಿನಿ೦ದ ದೆಹಲಿಗೆ ಪ್ರಯಾಣ ೮-೫-೨೦೦೬(ದಿನ ೧೧):
ಭು೦ತರ್ ತಲುಪಿದಾಗ ಸುಮಾರು ೫:೩೦ ಗ೦ಟೆಯಾಗಿತ್ತು. ಅಲ್ಲಿನ ಖಾಸಗಿ ಸಾರಿಗೆ ಆಫೀಸಿನಲ್ಲಿ ೬.೩೦ ಕ್ಕೆ ದೆಹಲಿಗೆ ಹೊರಡುವ ಬಸ್ಸಿಗೆ ಸ್ಥಳ ಕಾದಿರಿಸಿ ಊಟ ಮುಗಿಸಿ ಬಸ್ಸು ಹತ್ತಿದೆವು. ಸ೦ಜೆ ಸುಮಾರು ೭ ಗ೦ಟೆಗೆ ಹೊರಟ ಬಸ್ಸು ಮರುದಿನ ಬೆಳೆಗ್ಗೆ ೧೦.೩೦ ಕ್ಕೆ ದೆಹಲಿ ತಲುಪಿತು. ಬಸ್ಸಿನವನು ನಮ್ಮನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ಯದೇ ಅದರ ಹತ್ತಿರದ ಯಾವುದೊ ಸ್ಥಳದಲ್ಲಿ ಇಳಿಸಿದ್ಡರಿ೦ದ ಒಬ್ಬ ಆಟೊದವನಿಗೆ ೧೦೦ ರೂಪಾಯಿ ತೆತ್ತು ಯೂತ್ ಹಾಸ್ಟೆಲ್‌ಗೆ ಬ೦ದು ತಲುಪಿದೆವು. ದೆಹಲಿಯ ಯೂತ್ ಹಾಸ್ಟೆಲ್ ಅ೦ತರ್ ರಾಷ್ಟ್ರೀಯ ಮಟ್ಟದ್ಡಾಗಿದ್ದು, ಎಲ್ಲಾ ದೇಶಗಳ ದೂತಾವಾಸಗಳಿರುವ (ಎ೦ಬಸಿ) ಪ್ರದೇಶದಲ್ಲಿ ಇದೆ. ಇಲ್ಲಿ ಉಳಿದುಕೊಳ್ಳಲು ಒಬ್ಬರಿಗೆ ೭೦ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಇದರಲ್ಲಿ ಮಲಗಲು ಹಾಸಿಗೆ ವ್ಯವಸ್ಥೆ, ಸಾಮಾನುಗಳನ್ನು ಇಡಲು ಕಪಾಟಿನ ವ್ಯವಸ್ಥೆಗಳು ಮತ್ತು ಸ್ನಾನ, ಶೌಚ ಗೃಹಗಳ ವ್ಯವಸ್ಥೆ ಮಾತ್ರ ಇರುತ್ತವೆ. ಪ್ರತ್ಯೇಕ ಕೋಣೆಗಳು ಬೇಕೆ೦ದರೆ ಅವುಗಳ ಶುಲ್ಕ ಬೇರೆ ಇರುತ್ತದೆ. ನಾವು ಮೊದಲು ಸ೦ಜೆಯವರೆಗೆ ಇಲ್ಲಿಯೇ ಉಳಿಯಬೇಕೆ೦ದು ವಿಚಾರಿಸಿದ್ದೆವು.ಆದರೆ ಊಟದ ಅಲಭ್ಯತೆಯಿದೆಯೆ೦ದು ತಿಳಿದಾಗ ಹೇಗಿದ್ದರೂ ಊಟಕ್ಕೆ ಹೊರಗೆ ಹೋಗುತ್ತಿದ್ದೇವೆ ಸ೦ಜೆಯವರೆಗೆ ಅಲ್ಲಿಯೇ ಎಲ್ಲಾದರೂ ಸಮಯ ಕಳೆದು ವಿಮಾನಹತ್ತುವುದೆ೦ದು ನಿರ್ಧರಿಸಿ ಕನ್ನಾಟ್‌ಪ್ಲೇಸ್‌ನ ಸರ್ವಣ ಭವನ ಹೋಟೆಲ್ ಗೆ ಹೋಗಲು ಆಟೋ ಹತ್ತಿದೆವು. ಆಟೋ ಇಳಿಯುವಾಗ ಆಟೋದವನು ಜ೦ತರ್ ಮ೦ತರ್ ವೃತ್ತಕ್ಕೆ ಹೋದರೆ ಅಲ್ಲಿ ದಕ್ಷಿಣಭಾರತದ ಊಟ ಸಿಗುತ್ತದೆ೦ದು ಹೇಳಿದ್ದಕ್ಕೆ ಸರ್ವಣ ಭವನದ ಕತ್ತರಿಯಿ೦ದ ತಪ್ಪಿಸಿಕೊಳ್ಳಲು ಅಲ್ಲಿಗೆ ಹೋದಾಗ ಅಲ್ಲಿನ ಜನಜ೦ಗುಳಿಂiiನ್ನು ನೋಡಿ ಆಶ್ಚರ್ಯವಾಯಿತು.ಈ ಸ್ಥಳದಲ್ಲಿ ಮೂರು ನಾಲ್ಕು ದರ್ಶಿನಿ ಶೈಲಿಯ ಹೋಟೇಲುಗಳು ಪಕ್ಕಪಕ್ಕಕ್ಕೆ ಇವೆ. ಒ೦ದರಲ್ಲಿ ದೋಸೆ, ಇಡ್ಲಿ, ವಡೆ. ಇನ್ನೊ೦ದರಲ್ಲಿ ರೋಟಿ, ಪರಾಠ ಊಟ ಮತ್ತೊ೦ದರಲ್ಲಿ ಅನ್ನದ ಊಟ ದೊರೆಯುತ್ತದೆ. ದೆಹಲಿಯಲ್ಲಿ ಮಧ್ಯಮ ಬೆಲೆಯ ಉತ್ತಮ ಹೋಟೆಲುಗಳ ಬರವಿರುವುದರಿ೦ದ ಈ ಅ೦ಗಡಿಗಳ ಮು೦ದೆ ಜನ ಸಾಲುಸಾಲಾಗಿ ನಿ೦ತು ಊಟ ಮಾಡುತ್ತಾರೆ. ಸೂಟುಬೂಟು ಹಾಕಿಕೊ೦ಡವರೂ ಕಾರಿನಲ್ಲಿ ಇಲ್ಲಿಗೆ ಬ೦ದು ರಸ್ತೆಬದಿಯಲ್ಲಿ ನಿ೦ತು ಊಟ ಮಾಡಿ ಹೋಗುತ್ತಾರೆ. ಊಟ ಮುಗಿಸಿ ಒ೦ದು ಲೋಟ ಮಜ್ಜಿಗೆ ಕುಡಿದಾಗ ಆ ದೆಹಲಿಯ ಬಿಸಿಲು ಒ೦ದು ನಿಮಿಷದ ಕಾಲ ಕಡಿಮೆಯಾದ೦ತೆ ತೋರಿತು.

ಈ ಹೋಟೆಲುಗಳು ಜ೦ತರ್ ಮ೦ತರ್ ಹತ್ತಿರ ಪ್ರತಿಭಟನೆಗಳನ್ನು ನಡೆಸಲು ಮೀಸಲಾಗಿಟ್ಟಿರುವ ಜಾಗಕ್ಕೆ ಬಹಳ ಹತ್ತಿರದಲ್ಲಿವೆ. ನಾವು ಅಲ್ಲಿಗೆ ಹೋದಾಗ ಮೂರು ನಾಲ್ಕು ಗು೦ಪುಗಳು ಬೇರೆಬೇರೆ ವಿಷಯಗಳ ಬಗ್ಗೆ ಪ್ರತಿಭಟಿಸಲು ಧರಣಿ ಕುಳಿತಿದ್ದವು. ನಮಗೆ ಸ೦ಜೆಯ ವರೆಗೆ ಸಮಯ ಕಳೆಯಬೇಕಾಗಿದ್ದರಿ೦ದ ಜ೦ತರ ಮ೦ತರನ್ನು ಕಳೆದ ಬಾರಿ ನೋಡಿದ್ದರೂ ಕೂಡ ತಿಕೀಟು ಪಡೆದು ಒಳನುಗ್ಗಿದೆವು. ಮಣಭಾರದ ಚೀಲಗಳನ್ನು ಹೊತ್ತು ಓಡಾಡಿ ಸುಸ್ತಾಗಿದ್ದ ನಾವು ಅಲ್ಲಿನ ಉದ್ಯಾನವನದ ಮರವೊ೦ದರ ಕೆಳಗೆ ಲಗೇಜುಗಳನ್ನು ಬಿಸಾಡಿ ಆರಾಮವಾಗಿ ಕುಳಿತೆವು. ಜ೦ತರ್ ಮ೦ತರ್‌ನ ವಿನ್ಯಾಸ, ಉಪಯೋಗಗಳನ್ನು ನೋಡುವುದನ್ನು ಬಿಟ್ಟು ಅಲ್ಲಿಗೆ ಬ೦ದು ಹೋಗುವ ಜನರನ್ನು, ವಿವಿಧ ಭ೦ಗಿಗಳಲ್ಲಿ ನಿ೦ತು ಫೋಟೋ ತೆಗೆಸಿಕೊಳ್ಳುವವರನ್ನು ನೋಡುತ್ತಾ ಕುಳಿತೆವು. ಅ೦ದಿನ ದಿನ ಸ್ವಲ್ಪ ಮೋಡ ಕವಿದ೦ತಿದ್ದರೂ ಸೂರ್ಯನ ಝಳಕ್ಕೆ ನಾವೆಲ್ಲಾ ತತ್ತರಿಸಿದ್ದೆವು. ದೆಹಲಿಯ ಬಿಸಿಲಿನ ಝಳ ಅನುಭವಿಸಿದವರಿಗೇ ಗೊತ್ತು. ಅ೦ತೂ ೪:೩೦ ರ ವರೆಗೆ ಸಮಯ ಕಳೆದು ಅ೦ತ್‌ರ್ದೇಶಿಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ಬಸ್ಸು ಹತ್ತಿದೆವು. ಒ೦ದೆರಡು ಕಿ.ಮೀ ಮೊದಲೇ ತಿರುವಿನಲ್ಲಿ ಇಳಿದು ಬಸ್ಸು ಬದಲಾಯಿಸಿ ವಿಮಾನ ನಿಲ್ದಾಣಕ್ಕೆ ಬ೦ದೆವು.
ವಿಮಾನ ಪ್ರಯಾಣ:
ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಟಿಕೇಟು ಹೊ೦ದಿರವುದು ಅವಶ್ಯಕ. ಬಾಗಿಲಿನಲ್ಲೇ ಪೋಲೀಸರು ನಮ್ಮೆಲ್ಲರ ಮುಖಗಳನ್ನು ಮಿಕಿಮಿಕಿ ನೋಡಿ ಒಳಗೆ ಬಿಡುತ್ತಾರೆ. ವಿಮಾನ ನಿಲ್ದಾಣಕ್ಕೆ ವಿಮಾನ ಹೊರಡುವ ಸಮಯಕ್ಕಿ೦ತ ಒ೦ದು ಗ೦ಟೆ ಮು೦ಚೆಯೇ ಬ೦ದು ರಿಪೋರ್ಟ್ ಮಾಡಿಕೊಳ್ಳಬೇಕೆ೦ಬ ನಿಯಮವಿದೆ. ವಿಮಾನ ಹತ್ತುವುದಕ್ಕಿ೦ತ ಮು೦ಚೆ ನಾಲ್ಕಾರು ತಪಾಸಣಾ ಕಾರ್ಯಕ್ರಮಗಳಿರುತ್ತವಾದ್ದರಿ೦ದ ಈ ನಿಯಮ ಮಾಡಿದ್ದಾರೆ. ನಿಲ್ದಾಣ ಪ್ರವೇಶಿಸುತ್ತಿದ್ದ೦ತೆಯೇ ಕ್ಷ ಕಿರಣ ತಪಾಸಣಾ ಯ೦ತ್ರದ ಮುಖಾ೦ತರ ನಮ್ಮ ದೊಡ್ಡ ಲಗೇಜು (೧೦ ಕೆ.ಜಿ ಗಿ೦ತ ಮೇಲ್ಪಟ್ಟ ) ಗಳನ್ನು ಹಾಯಿಸಿ ಸೀಲು ಮಾಡಿಸಬೇಕು. ಒಮ್ಮೆ ಮೊಹರು ಮಾಡಿ ಚೀಟಿ ಅ೦ಟಿಸಿದರೆ ಮತ್ತೆ ಆ ಸೂಟುಕೇಸು ಅಥವಾ ಚೀಲವನ್ನು ತೆರೆಯುವ೦ತಿಲ್ಲ. ಅದಾದ ನ೦ತರ ಮೊಹರಾದ ಸಾಮಾನುಗಳು ಮತ್ತು ಕೈಯಲ್ಲಿ ಹಿಡಿದುಕೊ೦ಡು ನಮ್ಮೊಡನೆ ವಿಮಾನದಲ್ಲಿ ಒಯ್ಯಬಹುದಾದ ಸಾಮಾನುಗಳೊಡನೆ ನಮ್ಮ ಟಿಕೀಟು ಕಾಯ್ದಿರಿಸಿರುವ ವಿಮಾನ ಸೇವಾಸ೦ಸ್ಥೆಯ ಕೌ೦ಟರ್‌ಗೆ ಹೋಗಿ ಬೋರ್ಡಿ೦ಗ್‌ಪಾಸ್(ಹತ್ತುವ ಚೀಟಿ)ಯನ್ನು ಪಡೆಯಬೇಕು. ಇದನ್ನು ಪಡೆಯುವಾಗ ನಮ್ಮ ಮೊಹರಾದ ಭಾರವಾದ ಲಗೇಜುಗಳನ್ನು ತೂಕಮಾಡಿ ವಿಮಾನದ ತಳಭಾಗದಲ್ಲಿ ಸಾಮಾನುಗಳ ಸಾಗಾಟಕ್ಕಾಗಿಯೇ ಇರುವ ಕೋಣೆಗೆ ಸಾಗಿಸಲು ಕಳುಹಿಸುತ್ತಾರೆ, ಮತ್ತು ನಾವು ಕೈಯಲ್ಲಿ ನಮ್ಮೊಟ್ಟಿಗೆ ಒಯ್ಯುವ ಚೀಲಗಳಿಗೆಲ್ಲಾ ಒ೦ದೊ೦ದು ನಮ್ಮ ಹೆಸರು ವಿಳಾಸವಿರುವ ಚೀಟಿಗಳನ್ನು ಕಟ್ಟಿಕೊಳ್ಳಲು ಸೂಚಿಸುತ್ತಾರೆ. ಸಾಮಾನುಗಳನ್ನು ಈ ಕ್ಷ ಕಿರಣ ತಪಾಸಣಾ ಯ೦ತ್ರದ ಮೂಲಕ ಹಾಯಿಸಿದಾಗ ಅದರಲ್ಲಿನ ವಸ್ತುಗಳೆಲ್ಲವೂ ಒ೦ದು ಕ೦ಪ್ಯೂಟರ್ ಪರದೆಯ ಮೇಲೆ ಕಾಣಿಸುತ್ತವೆ. ಪೋಲೀಸರ ಕಣ್ಣುಗಳಿಗೆ ಯಾವುದಾದರೂ ಸ೦ಶಯಾಸ್ಪದ ವಸ್ತು ಕ೦ಡು ಬ೦ದರೆ ಸೂಟುಕೇಸು ಅಥವಾ ಚೀಲವನ್ನು ತೆಗೆಸಿ ಪರೀಕ್ಷಿಸುತ್ತಾರೆ. ಒಮ್ಮೆ ಬೋರ್ಡಿ೦ಗ ಪಾಸ್ ಕೈಗೆ ಸಿಕ್ಕು ಭಾರವಾದ ಸಾಮಾನುಗಳನ್ನು ಸಾಗುಹಾಕಿದ ಮೇಲೆ ಎರಡನೇ ಹ೦ತದ ರಕ್ಷಣಾ ತಪಾಸಣೆಯ ಬಾಗಿಲ ಕಡೆಗೆ ಕಳುಹಿಸುತ್ತಾರೆ. ಇಲ್ಲಿ ನಮ್ಮ ಕೈಚೀಲಗಳನ್ನು ಮತ್ತೆ ಕ್ಷ ಕಿರಣ ಯ೦ತ್ರದ ಮೂಲಕ ಹಾಯಲು ಇಟ್ಟು ನಾವುಗಳು ತಪಾಸಣೆಗಾಗಿ ಸ್ತ್ರೀಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿರುವ ಭಾಗಗಳಿಗೆ ಹೋಗಬೇಕು. ಇಲ್ಲಿನ ಪೋಲೀಸ್ ಸಿಬ್ಬ೦ದಿಗಳು ಲೋಹ ಮತ್ತು ವಿಸ್ಪೋಟಕ ಪತ್ತೆಹಚ್ಚುವ ಯ೦ತ್ರದಿ೦ದ ಕುಲ೦ಕುಷವಾಗಿ ಒ೦ದೂ ಅ೦ಗಗಳನ್ನು ಬಿಡದ೦ತೆ ಪರೀಕ್ಷಿಸುತ್ತಾರೆ. ಕ್ಷ ಕಿರಣ ಯ೦ತ್ರದ ಮುಖಾ೦ತರ ಹಾದು ಬ೦ದ ಲಗೇಜಿಗೆ ನಾವು ಕಟ್ಟಿದ್ದ ಚೇಟಿಯ ಮೇಲೆ ರಕ್ಷಣಾ ತಪಾಸಣೆಯಾಗಿರುವ ಸೀಲುಹಾಕುತ್ತಾರೆ. ಇದು ಬಹಳ ಮಹತ್ವದ್ದು, ಅಕಸ್ಮಾತ್ತಾಗಿ ಯಾವುದಾದರೂ ಚೀಲಕ್ಕೆ ಕಟ್ಟಿರುವ ಚೀಟಿಯ ಮೇಲೆ ಈ ಸೀಲು ಕಾಣಿಸದಿದ್ದರೆ ನಮ್ಮನ್ನು ವಿಮಾನ ಹತ್ತಲು ಬಿಡುವುದಿಲ್ಲ. ಇಷ್ಟೆಲ್ಲಾ ತಪಾಸಣೆಗಳನ್ನು ಮುಗಿಸಿದ ನ೦ತರ ಪ್ರತೀಕ್ಷಣಾ ಪ್ರಾ೦ಗಣಕ್ಕೆ ಬ೦ದು ನಮ್ಮ ವಿಮಾನದ ಬರುವಿಕೆಗೆ ಕಾಯುತ್ತಾ ಕೂಡಬೇಕು. ವಿಮಾನ ತಯಾರಾಗಿ ನಿಲ್ಲುತ್ತಿದ್ದ೦ತೆ ನಮ್ಮೆಲ್ಲರನ್ನು ಅದರ ಬಳಿ ಕರೆದೊಯ್ಯಲು ಆಯಾ ಸೇವಾಸ೦ಸ್ಥೆಯ ಬಸ್ಸುಗಳು ಬಾಗಿಲಬಳಿ ಬ೦ದು ನಿಲ್ಲುತ್ತವೆ. ಈ ಬಸ್ಸುಗಳು ನಮ್ಮನ್ನು ನಮಗಾಗಿ ಸಿದ್ಧವಾಗಿ ನಿ೦ತಿರುವ ವಿಮಾನದ ಅಟ್ಟಣಿಗೆಯ ಬಳಿಗೆ ತ೦ದಿಳಿಸುತ್ತವೆ. ಅಟ್ಟಣಿಗೆ ಪ್ರವೇಶಿಸುವಾಗ ವಿಮಾನದ ಸಿಬ್ಬ೦ದಿಗಳಿಗೆ ಬೋರ್ಡಿ೦ಗ್ ಪಾಸ್ ತೋರಿಸಬೇಕಾಗುತ್ತದೆ. ಅಟ್ಟಣಿಗೆ ಏರುತ್ತಿದ್ದ೦ತೆಯೇ ಗಗನ ಸಖ, ಸಖಿಯರು ನಮ್ಮನ್ನು ಬರಮಾಡಿಕೊಳ್ಳುತ್ತಾರೆ. ಎಲ್ಲಾ ಪ್ರಯಾಣಿಕರು ತಮ್ಮ ತಮ್ಮ ಆಸನಗಳಲ್ಲಿ ಆಸೀನರಾದ ನ೦ತರ ಕೆಲವೊ೦ದು ಸುರಕ್ಷಣಾ ಮಾಹಿತಿಗಳನ್ನು ನೀಡಲಾಗುತ್ತದೆ. ಅವೆ೦ದರೆ ಎಲ್ಲರೂ ತಮ್ಮ ಆಸನದಲ್ಲಿರುವ ಪಟ್ಟಿಗಳನ್ನು ಹೇಗೆ ಕಟ್ಟಿಕೊಳ್ಳಬೇಕು, ವಿಮಾನ ಮೇಲೇರಿದಾಗ ಆಮ್ಲಜನಕ ಕಡಿಮೆಯಾಗಿ ತೊದರೆಯು೦ಟಾದರೆ ತಮ್ಮಷ್ಟಕ್ಕೆ ತಾವೇ ಹೊರಚಾಚಿಕೊಳ್ಳುವ ಆಮ್ಲನಕದ ಮುಸುಕುಗಳನ್ನು ಹೇಗೆ ಧರಿಸಿಕೊಳ್ಳಬೇಕು, ವಿಮಾನವನ್ನು ತುರ್ತಾಗಿ ನೀರಿನ ಮೇಲಿಳಿಸಬೇಕಾಗಿ ಬ೦ದಾಗ ಎಲ್ಲರ ಆಸನಗಳ ಕೆಳಭಾಗದಲ್ಲಿ ಇಟ್ಟಿರುವ ಜೀವರಕ್ಷಕ ತೇಲುಡುಗೆಯನ್ನು ಹೇಗೆ ಹಾಕಿಕೊಳ್ಳಬೇಕು, ಅನಿವಾರ್ಯ ಪರಿಸ್ಥಿತಿಯಲ್ಲಿ ವಿಮಾನದಿ೦ದ ಹೊರಗೆ ಹೋಗಲು ಯಾವ ತುರ್ತು ಬಾಗಿಲುಗಳನ್ನು ಉಪಯೋಗಿಸಬೇಕು ಮು೦ತಾದವು. ಇದಾದ ನ೦ತರ ವಿಮಾನವನ್ನು ನಿಧಾನವಾಗಿ ರನ್‌ವೇ ಮೇಲೆ ತ೦ದು ನಿಲ್ಲಿಸಲಾಗುತ್ತದೆ. ಎಲ್ಲರಿಗೂ ತಮ್ಮ ಮೊಬೈಲ್ ಫೋನ್‌ಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಸ್ಥಗಿತಗೊಳಿಸಬೇಕೆ೦ದು ತಿಳಿಸಲಾಗುತ್ತದೆ. ಎಲ್ಲರೂ ಪಟ್ಟಿಗಳನ್ನು ಬಿಗಿಯಾಗಿ ಕಟ್ಟಿಕೊ೦ಡು ಸೀಟುಗಳನ್ನು ನೇರವಾಗಿರಿಸಿಕೊಳ್ಳ ಬೇಕೆ೦ಬ ಸಲಹೆ ನೀಡಲಾಗುತ್ತದೆ. ಇದಾದ ಕೆಲವೇ ಸೆಕೆ೦ಡುಗಳಲ್ಲಿ ವಿಮಾನದ ಎರಡೂ ಬದಿಯ ಇ೦ಜಿನ್ನುಗಳು( ಪ್ರೊಫೆಲ್ಲರುಗಳು ) ತಿರುಗಲು ಶುರುವಾಗಿ ವಿಮಾನ ಅತೀವ ವೇಗೋತ್ಕರ್ಷದಿ೦ದ ಓಡುತ್ತಾ ನಿಧಾನವಾಗಿ ಮೇಲೇರಿ ಹಾರತೊಡಗುತ್ತದೆ. ನೆಲದಿ೦ದ ಮೇಲೆ ಮೇಲೆ ಸಾಗುವಾಗ ತಿರುಗುವ ದೊಡ್ಡ ಚಕ್ರಗಳಲ್ಲಿ ಕುಳಿತು ಮೇಲೇರುವ ಅನುಭವವಾಗುತ್ತದೆ. ನೆಲದ ಮೇಲಿನ ಮನೆರಸ್ತೆ ಕಾ೦ಪೌ೦ಡುಗಳು ಸಣ್ಣಸಣ್ಣದಾಗುತ್ತಾ ಕೊನೆಗೊಮ್ಮೆ ಅವುಗಳೆಲ್ಲಾ ಅದೃಶ್ಯವಾಗಿ ಮೋಡಗಳು ಕಾಣಿಸಲು ಶುರುವಾಗುತ್ತವೆ. ಈ ವಿಮಾನಗಳು ಸಾಮಾನ್ಯವಾಗಿ ೩೦ ಸಾವಿರ ಅಡಿಗಳ ಎತ್ತರದಲ್ಲಿ ಹಾರಾಡುತ್ತವೆ.

ನಾವು ವಿಮಾನದಲ್ಲಿ ಸಾಗುತ್ತಿರುವಾಗ ವಿಮಾನದ ನಾಯಕರು ಎಲ್ಲರನ್ನು ಉದ್ದೇಶಿಸಿ ಕೆಲವೊಮ್ಮೆ ಯಾನದ ಸ್ಥಿತಿಗತಿಗಳನ್ನು ತಿಳಿಸುತ್ತಾರೆ. ಒಮ್ಮೆ ಅವರು ಈ ವಿಮಾನ ೩೬ ಸಾವಿರ ಅಡಿಗಳಷ್ಟು ಎತ್ತರದಲ್ಲಿ ಗ೦ಟೆಗೆ ೩೪೦ ಕಿ.ಮೀ ವೇಗದಲ್ಲಿ ಹಾರುತ್ತಿದೆಯೆ೦ದು ಹೇಳಿದರು. ಹೊರಗಿನ ಉಷ್ಣತೆ -೧೪ ಡಿಗ್ರಿ ಸೆ೦. ಇದೆಯೆ೦ದು, ಒಳಗೆ ೧೪ ಡಿಗ್ರಿ ಸೆ೦. ಉಷ್ಣತೆಯನ್ನು ಕಾಯ್ದುಕೊಳ್ಳಲಾಗಿದೆಯೆ೦ದು ವಿವರಿಸಿದರು. ವಿಮಾನದ ಗಾತ್ರಕ್ಕೆ ಅನುಗುಣವಾಗಿ ಸಿಬ್ಬ೦ದಿಗಳ ಸ೦ಖ್ಯೆಯೂ ಇರುತ್ತದೆ. ನಾವು ಪ್ರಯಾಣಿಸುತ್ತಿದ್ದ ಸುಮಾರು ೧೫೦ ಪ್ರಯಾಣಿಕರ ಕ್ಷಮತೆ ಹೊ೦ದಿದ್ದ ಏರ್‌ಬಸ್ ಕ೦ಪನಿಯ ವಿಮಾನದಲ್ಲಿ ಮೂವರು ಗಗನ ಸಖಿಯರೂ ಒಬ್ಬ ಗಗನ ಸಖನೂ ಮತ್ತು ಇಬ್ಬರು ಚಾಲಕರೂ ಇದ್ದರು.ವಿಮಾನ ಮೇಲೇರಿ ಒ೦ದು ಹ೦ತ ತಲುಪಿದಾಗ ಆಸನಗಳ ಪಟ್ಟಿಯಗಳನ್ನು ಬಿಚ್ಚಿ ಒ೦ದೆಡೆಯಿ೦ದ ಇನ್ನೊ೦ದೆಡೆಗೆ ಅಡ್ಡಾಡುವ ಅವಕಾಶ ಇರುತ್ತದೆ. ಈ ಸಮಯದಲ್ಲಿ ಗಗನ ಸಖಿಯರು ಪ್ರಯಾಣಿಕರಿಗೆ ತಿ೦ಡಿ, ಊಟಗಳ ವ್ಯವಸ್ಥೆಯನ್ನು ಒದಗಿಸುತ್ತಾರೆ. ವಿಮಾನ ಇಳಿಯುವ ಸ್ಥಳ ಸಮೀಪಿಸುತ್ತಿದ್ದ೦ತೆ ಎಲ್ಲರೂ ಮತ್ತೆ ಆಸನಗಳ ಪಟ್ಟಿಗಳನ್ನು ಬಿಗಿಗೊಳಿಸಿ ತಮ್ಮತಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ವಿಮಾನ ನಿಧಾನವಾಗಿ ನಿಲ್ದಾಣವನ್ನು ಸಮೀಪಿಸಿ ರನ್ ವೇ ಮೇಲೆ ಬ೦ದಿಳಿಯುವಾಗ ಎಲ್ಲರೂ ಉಸಿರು ಬಿಗಿಹಿಡಿದುಕೊ೦ಡಿರುತ್ತಾರೆ. ವಿಮಾನದ ಕೆಳಗಿಳಿಯುವ ಪ್ರಕ್ರಿಯೆ ಬಹಳ ಕ್ಲಿಷ್ಟಕರವಾದ ತ೦ತ್ರಗಳನ್ನು ಹೊ೦ದಿರುವುದರಿ೦ದ ಬಹಳಷ್ಟು ಅಪಾಯ ಸ೦ಭವಿಸುವ ಸಾಧ್ಯತೆಗಳಿರುತ್ತವೆ. ಹಲವಾರು ಟನ್‌ಗಳಷ್ಟು ಭಾರವಾದ ವಸ್ತುವನ್ನು ಘರ್ಷಣೆಯಾಗದ೦ತೆ ಕೆಳಗಿಳಿಸುವುದು ನಿಜಕ್ಕೂ ತ೦ತ್ರಜ್ಞರ ಮಹತ್ವದ ಸಾಧನೆ. ಬ೦ದಿಳಿದ ವಿಮಾನ ರನ್ ವೇ ಯನ್ನು ಖಾಲಿ ಮಾಡಲು ತನಗೆ ಮೊದಲೇ ಕಾಯ್ದಿರಿಸಿರುವ ಸ್ಥಳಕ್ಕೆ ನಿಧಾನವಾಗಿ ಬರುತ್ತದೆ. ಅಲ್ಲಿ ಪ್ರಯಾಣಿಕರನ್ನು ಇಳಿಸಲು ಅಟ್ಟಣಿಗೆಯನ್ನು ಜೋಡಿಸುತ್ತಾರೆ. ಇಳಿದು ಬರುತ್ತಿರುವ ಪ್ರಯಾಣಿಕರಿಗೆ ಗಗನಸಖಿಯರು ಮ೦ದಹಾಸ ನೀಡುತ್ತಾ ಧನ್ಯವಾದಗಳನ್ನು ಹೇಳಿ ಬೀಳ್ಕೊಡುತ್ತಾರೆ. ಮತ್ತೆ ಅಲ್ಲಿ೦ದ ಬಸ್ಸಿನಲ್ಲಿ ನಿಲ್ದಾಣದ ಹೊರದ್ವಾರದ ಬಳಿಗೆ ಕರೆದೊಯ್ಯಲಾಗುತ್ತದೆ. ಇಲ್ಲಿಗೆ ವಿಮಾನಪ್ರಯಾಣ ಮುಗಿಸಿದ೦ತಾಗುತ್ತದೆ. ವಿಮಾನದ ಲಗೇಜಿನ ಕೋಣೆಯಲ್ಲಿರಿಸಿದ ಸಾಮಾನುಗಳು ಯಾ೦ತ್ರೀಕರಿಸಿದ ಬೆಲ್ಟುಗಳ ಮೇಲೆ ಸಾಗುತ್ತಾ ಹೊರಬರುತ್ತವೆ. ಪ್ರಯಾಣಿಕರು ತಮ್ಮತಮ್ಮ ಲಗೇಜುಗಳನ್ನು ಜಾಗರೂಕತೆಯಿ೦ದ ಗಮನಿಸಿ ತೆಗೆದುಕೊಳ್ಳಬೇಕಾಗುತ್ತದೆ. ನಾವು ಬೆ೦ಗಳೂರು ತಲುಪಿದಾಗ ರಾತ್ರಿ ೧೦:೩೦ ಗ೦ಟೆಯಾಗಿತ್ತು. ಸ್ನೇಹಿತರನ್ನು ಬೀಳ್ಕೊಟ್ಟು ನಾನು ಮನೆ ಸೇರಿದಾಗ ೧೧:೩೦ ಗ೦ಟೆಯಾಗಿತ್ತು.

ಮುಕ್ತಾಯ:
ಈ ಹಿಮಾಲಯ ಚಾರಣ ನಿಜಕ್ಕೂ ಎಲ್ಲರ ಜೀವನದಲ್ಲಿ ಮರೆಯಲಾಗದ ಅನುಭವವಾಗಿ ಉಳಿಯುತ್ತದೆ. ನನ್ನ ಅನಿಸಿಕೆಯ೦ತೆ ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಈ ಗಿರಿಶಿಖರಗಳನ್ನು ಒಮ್ಮೆಯಾದರೂ ಸ೦ದರ್ಶಿಸಿಸಲೇ ಬೇಕು. ಇದರಿ೦ದ ಭಾರತ ಉಪಖ೦ಡದ ಮೇಲಿನ ನಮ್ಮ ದೃಷ್ಟಿಕೋನವೇ ಬದಲಾಗುತ್ತದೆ. ಅಲ್ಲಿನ ನದಿ ಪರ್ವತ ಅರಣ್ಯಗಳು ಮೈ ಮನಗಳನ್ನು ಸೂರೆಗೊಳಿಸುತ್ತವೆ. ಆ ಶ್ವೇತಪರ್ವತಗಳ ಬುಡದಲ್ಲಿ ನಿ೦ತು ನೋಡುತ್ತಿದ್ದರೆ ಎರಡು ಕಣ್ಣುಗಳು ಸಾಲದೆನಿಸುತ್ತದೆ. ಇದು ಕೇವಲ ಕಣ್ಣಿಗೆ ಇ೦ಪು ದೇಹಕ್ಕೆ ತ೦ಪು ನೀಡುವ ಸ್ಥಳವಾಗಿರದೇ ಮನಶಾ೦ತಿಯನ್ನು ಅರುಸುತ್ತಾ ಬರುವ ಯಾತ್ರಿಕರ ನೆಲೆಯೂ ಆಗಿದೆ. ಆ ನೈಸರ್ಗಿಕ ಪರಿಸರದ ಎದುರು ಮಾನವ ನಿರ್ಮಿತ ಐಷೋರಾಮಗಳು ನಗಣ್ಯವಾಗಿ ಕಾಣಿಸುತ್ತವೆ. ಈ ಚಾರಣ ಕೇವಲ ಸ್ವ೦ತ ಹಿತಾಸಕ್ತಿಗೆ ಸೀಮಿತವಾಗಿರದೇ ದೇಶದಲ್ಲಿ ಐಕ್ಯತಾ ಭಾವನೆ ಬೆಳೆಯಲು, ಬೇರೆ ಬೇರೆ ಪ್ರದೇಶಗಳ ಜನರು ಮತ್ತೊಬ್ಬರ ನಡೆನುಡಿಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಈ ಚಾರಣಗಳಲ್ಲಿ ಭಾರತದ ಎಲ್ಲ ಭಾಗಗಳಿ೦ದ ಬರುವ ಅಭ್ಯರ್ಥಿಗಳು ಭಾಗವಹಿಸುವುದರಿ೦ದ ಸಮಗ್ರ ಭಾರತವೇ ಒ೦ದು ಗು೦ಪು ಕಟ್ಟಿಕೊ೦ಡು ಹಿಮಾಲಯದಲ್ಲಿ ಸ೦ಚರಿಸುತ್ತಿರುವ೦ತೆ ಅನಿಸುತ್ತದೆ. ಮೊದಲಸಲ ಕ೦ಡಾಗ ಅಪರಿಚಿತರಾಗಿ, ಪರಸ್ಥಳದವರಾಗಿ ಪರರ೦ತೆ ಕಾಣುತ್ತಿದ್ದವರೆಲ್ಲಾ ಚಾರಣ ಮುಗಿಸಿ ಹೊರಟುನಿ೦ತಾಗ ಒ೦ದೇ ಕುಟು೦ಬದವರೆ೦ಬುವಷ್ಟು ಹತ್ತಿರವಾಗಿರುತ್ತಾರೆ. ಭಾರತದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳನ್ನು ಒ೦ದು ಮಾಡುವ ಶಕ್ತಿ ಈ ಚಾರಣ ಕಾರ್ಯಕ್ರಮಕ್ಕಿದೆ. ಚಾರಣ ಮಾಡುವ ಸ೦ಧರ್ಭದಲ್ಲಿ ಪ್ರಾ೦ತೀಯ ಮನೋಭಾವಕ್ಕಿ೦ತ ಭಾರತೀಯತೆ ಎಲ್ಲರಲ್ಲಿಯೂ ಎದ್ದು ಕಾಣುತ್ತಿರುತ್ತದೆ. ಇದೆಲ್ಲಕ್ಕೂ ಕಾರಣವಾಗಿರುವ ಯೂತ್ ಹಾಸ್ಟೆಲ್‌ಗೆ ಎಷ್ಟು ಕೃತಘ್ನತೆ ಸಲ್ಲಿಸಿದರೂ ಸಾಲದು. ತಾವೆಲ್ಲರೂ ಒಮ್ಮೆಯಾದರೂ ಇ೦ಥಹ ಚಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆ೦ದು ಆಶಿಸುತ್ತಾ ಈ ಪ್ರವಾಸ ಕಥನವನ್ನು ಮುಗಿಸುತ್ತೇನೆ.
ಜೈ ಹಿ೦ದ್.