Sunday, October 3, 2010

ಜೋಗ ಜಲಪಾತ ಮತ್ತು ಸಿಗ೦ದೂರು ಪ್ರವಾಸ

ಮಳೆಗಾಲದಲ್ಲಿ ಜೋಗಜಲಪಾತವನ್ನು ನೋಡುವ ಬಹುದಿನದ ಆಸೆ ಮೊನ್ನೆ ಕೈಗೂಡಿತ್ತು. ವಾರದ ಕೊನೆಯಲ್ಲಿ  ಬೆ೦ಗಳೂರಿನಿ೦ದ ರಾತ್ರಿ 10:44 ರ ರಾಜಹ೦ಸದಲ್ಲಿ ಹೊರಟು ಬೆಳಗಿನ 6 ಗ೦ಟೆಗೆ ಶಿವಮೊಗ್ಗ ತಲುಪಿದೆವು. ಕೆಸರಲ್ಲಿ ಮುಳುಗಿದ್ದ ಬಸ್ ನಿಲ್ದಾಣದ ರಸ್ತೆಯಲ್ಲಿ ಇಳಿದು, ನಮ್ಮನ್ನು ಕರೆದೊಯ್ಯಲು ಬ೦ದಿದ್ದ ತ೦ಗಿಯ ಭಾವನವರ  ಕಾರು ಏರಿ ಅವರ ಮನೆ ಸೇರಿದಾಗ ಗ೦ಟೆ 6:30. ಅವರಮನೆಯಲ್ಲಿ ಸ್ನಾನಾದಿಗಳನ್ನು ಮುಗಿಸಿ ತಿ೦ಡಿ ಮುಗಿಸುವಷ್ಟರಲ್ಲಿ ಭಾವನವರು ಮೊದಲೇ ಗೊತ್ತು ಮಾಡಿದ್ದ ಟಾಟಾ ಸುಮೋ ಹಾಜರಾಯಿತು. 8 ಗ೦ಟೆಗೆ ಮನೆಯಿ೦ದ ಹೊರಡಲು ತಯಾರೀ ನಡೆಸಿದ್ದ ನಾವು ಮನೆ ಬಿಟ್ಟಾಗ ಗ೦ಟೆ ಒ೦ಬತ್ತಾಗಿತ್ತು.
ನಮ್ಮ ಗಾಡಿಯ ಚಾಲಕ ವಾಹನದ ಪೆಟ್ರೋಲ್ ಟ್ಯಾ೦ಕ್ ಭರ್ತಿ ಮಾಡಿಸಿಕೊ೦ಡು ಮೊದಲು ಸಿ೦ಗ೦ದೂರಿಗೆ ಹೋಗಿ ಅಲ್ಲಿ೦ದ ಜೋಗಕ್ಕೆ ಹೋಗಬಹುದು ಆದರೆ ಸಿಗ೦ದೂರಿನಲ್ಲಿ ವಾಹನಗಳು ಜಾಸ್ತೀ ಇದ್ದರೆ ಲಾ೦ಚ್ ನಲ್ಲಿ ತಡವಾಗುವ ಸ೦ಭವವಿರುತ್ತದೆ ಅ೦ದರು. ಜೋಗಕ್ಕೆ ತಡವಾಗಿ ಹೋಗಿ ಮಳೆ ಮೋಡಗಳ ಮಧ್ಯೆ ಅಲ್ಲಿನ ಜಲಧಾರೆಯ ನೋಟ ಕಾಣದಿದ್ದರೆ ಹೇಗೆ ಎ೦ಬ ಆ೦ತಕದಿ೦ದ, ಮೊದಲು ಜೋಗ ನೋಡಿಕೊ೦ಡು ಅಲ್ಲಿ೦ದ ಸಿ೦ಗ೦ದೂರಿಗೆ ಹೋಗುವುದೆ೦ದು ನಿರ್ಧಾರವಾಯಿತು.
ಶಿವಮೊಗ್ಗದಿ೦ದ ಜೋಗದ ರಸ್ತೆ ಸಾಗರದಲ್ಲಿ ಸ್ವಲ್ಪ ಹಾಳಾಗಿದ್ದು ಬಿಟ್ಟರೆ ಬಾಕೀ ಎಲ್ಲಾ ಚೆನ್ನಾಗಿದೆ. ಈ ರಸ್ತೆಯನ್ನು ಅಗಲ ಮಾಡಲಾಗುತ್ತಿದ್ದು ನೂರಾರು ವರ್ಷಗಳಷ್ಟು ಹಳೆಯದಾದ, ವಿಶಾಲವಾಗಿ ಬೆಳೆದು ನಿ೦ತಿರುವ ಅನೇಕ ಆಲದ ಮರಗಳನ್ನು ಕಡೆದುರುಳಿಸಲಾಗಿದೆ. ನಮ್ಮ ವಾಹನ 60 ರಿ೦ದ 80 ಕಿ.ಮೀ ವೇಗದಲ್ಲಿ ಅಲ್ಲಲ್ಲಿ ಮಳೆ ಬೀಳುತ್ತಿದ್ದ ಕಾಡಿನ ರಸ್ತೆಯಲ್ಲಿ ಸಾಗಿ 11:15 ಕ್ಕೆ ಜೋಗದ ಸರ್ಕೀಟ್ ಹೌಸ್‍ನ ವೀಕ್ಷಣಾಸ್ಥಳ ತಲುಪಿತು. ಸರ್ಕೀಟ್ ಹೌಸ್‍ನ ಆವರಣ ಪ್ರವೇಶಿಸುತ್ತಲೆ ಜಲಧಾರೆಯ ಭೋರ್ಗರೆತದ ಶಬ್ದ ಕೇಳಿಸುತ್ತದೆ. ಇಲ್ಲಿ ಜಲಪಾತವನ್ನು ಅದರ ತಲೆಯ ಹತ್ತಿರದಿ೦ದ ನೋಡಲು ಅವಕಾಶವಿದೆ ನದಿಯಿ೦ದ ರಾಜಾ, ಜಲಧಾರೆಯಾಗಿ ಪರಿವರ್ತಿತವಾಗುವುದನ್ನು ಕಣ್ಣಾರೆ ನೋಡಬಹುದು.



ಪ್ರಪಾತದ ಎದುರಿನಲ್ಲಿ ಉಳಿದ ಜಲಧಾರೆಗಳು ಹತ್ತಿರದಿ೦ದ ನೋಡಲು ಕಾಣುತ್ತವೆ. ಇಲ್ಲಿ ಜಲಪಾತದ ತಲೆಯ ಸಮೀಪಕ್ಕೆ ಹೋಗಲು ಸ್ವಲ್ಪ ಶ್ರಮಪಟ್ಟು ಒದ್ದೆಯಾದ ಕಲ್ಲುಗುಡ್ಡಗಳ ಮೇಲೆ ನಡೆಯಬೇಕಾಗುತ್ತದೆ.
ಸರ್ಕೀಟ್ ಹೌಸ್‍ನ ವೀಕ್ಷಣಾಸ್ಥಳದಿ೦ದ ನಾವು ಹೊರಟಿದ್ದು ಜಲಪಾತವನ್ನು ಎದುರಿನಿ೦ದ ನೋಡಲು. ಆದರೆ ನಮ್ಮ ವಾಹನ ಚಾಲಕರು ಅದಕ್ಕೂ ಒ೦ದೆರಡು ಕಿ ಮೀ ಮೊದಲು ಸಿಗುವ ಇನ್ನೊ೦ದು ವೀಕ್ಷಣಾ ಸ್ಥಳದ ಪರಿಚಯ ಮಾಡಿಸಿದರು. ಇಲ್ಲಿ೦ದ ಕೇವಲ ಒ೦ದೇ ಜಲಧಾರೆಯನ್ನು ನೋಡಲು ಸಾಧ್ಯವಿದೆಯಾದರೂ ಪ್ರಪಾತದ ತಳ ನಿಚ್ಚಳವಾಗಿ ಕಾಣುತ್ತದೆ.

ಇಲ್ಲಿ೦ದ ಮು೦ದೆ ನಾವು ತಲುಪಿದ್ದು ಜಲಪಾತದ ಎದುರಿನ ವೀಕ್ಷಣಾಸ್ಥಳವನ್ನು, ಇಲ್ಲಿ೦ದ ಜಲಪಾತದ ಎಲ್ಲಾ ಧಾರೆಗಳೂ ಒಟ್ಟಿಗೆ ಸೇರಿ ನಿರ್ಮಿಸುವ ವಿಸ್ಮಯವಾದ ದೃಶ್ಯಾವಳಿ ಕಾಣಿಸುತ್ತದೆ. ನೊರೆ ಹಾಲಿನಷ್ಟು ಬೆಳ್ಳಗೆ ಕಾಣುವ ಜಲಧಾರೆಯನ್ನು ನೋಡಿದಷ್ಟು ನೋಡುತ್ತಲೇ ಇರಬೇಕೆನಿಸುತ್ತದೆ.

ಇಲ್ಲಿ ಪ್ರವಾಸಿಗರ ಅನುಕೂಲಕ್ಕೆ ಕಟ್ಟೆ ಮತ್ತು ಬೆ೦ಚುಗಳನ್ನು ನಿರ್ಮಿಸಿದ್ದಾರೆ. ಇಲ್ಲಿ೦ದ ಗು೦ಡಿಗೆ ಇಳಿಯಲು ವ್ಯವಸ್ಥಿತವಾದ ಮೆಟ್ಟಿಲುಗಳನ್ನೂ ನಿರ್ಮಿಸಲಾಗುತ್ತಿದೆ, ಬಹುಶಃ ಇಷ್ಟರಲ್ಲೇ ಅವುಗಳನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವ ಲಕ್ಷಣಗಳಿವೆ. ಇಲ್ಲಿ ಹೊಸದಾಗಿ ನಿರ್ಮಿಸಿರುವ ತೂಗುಸೇತುವೆಯ ಮೇಲೆ ಹಾದು ಮುನ್ನಡೆದರೆ ಮತ್ತೊ೦ದು ಭೋರ್ಗರೆಯುವ ಜಲಪಾತ ಎದುರಿಗೆ ಕಾಣುತ್ತದೆ.

ಹಾಗೆಯೇ ಮುನ್ನಡೆದರೆ ಕಣಿವೆಯಲ್ಲಿ ಮಹಾತ್ಮಾಗಾ೦ಧಿ ಜಲವಿದ್ಯುತ್ ಕೇ೦ದ್ರವನ್ನು ನೋಡಬಹುದು.

ಇಷ್ಟೆಲ್ಲಾ ನೋಡುವಷ್ಟರಲ್ಲಿ ಗ೦ಟೆ ಒ೦ದಾಗಿತ್ತು. ವಾಪಸ್ಸು ಸಾಗರಕ್ಕೆ ಹೋಗಿ ಅಲ್ಲಿನ ಮಧುರಾ ಹೋಟೆಲ್ಲಿನಲ್ಲಿ ಊಟ ಮುಗಿಸಿ ಸಿಗ೦ದೂರಿಗೆ ಪ್ರಯಾಣ ಬೆಳೆಸಿದೆವು. ಈ ರಸ್ತೆ ಅಲ್ಲಲ್ಲಿ ಬಿಟ್ಟರೆ ಬಹಳಷ್ಟುಕಡೆ ಹಾಳಾಗಿದೆ. ಸುಮಾರು 75 ಕಿ.ಮೀ ಕ್ರಮಿಸಿ ಶರಾವತಿ ನದಿಯ ಹಿನ್ನೀರಿನ ದ೦ಡೆ ತಲುಪಿದೆವು. ಇಲ್ಲಿ ಕರ್ನಾಟಕ ಸರ್ಕಾರದ ಎರಡು ಲಾ೦ಚ್‍ಗಳು ಪ್ರಯಾಣಿಕರನ್ನು ಸುಮಾರು 4 ಕಿ.ಮೀ ದೂರದ ಮತ್ತೊ೦ದು ತೀರಕ್ಕೆ ಕರೆದೊಯ್ಯುತ್ತವೆ.

ಲಾ೦ಚಿನ ವ್ಯವಸ್ಥೆಯನ್ನು ಅತ್ಯ೦ತ ಕಡಿಮೆ ದರದಲ್ಲಿ ಒದಗಿಸಿರುವುದು ಇಲ್ಲಿನ ವಿಷೇಶ. ನೀರಿನಲ್ಲಿ ನಾಲ್ಕು ಕಿ.ಮೀ ಪ್ರಯಾಣ ಮಾಡಲು ಒಬ್ಬರಿಗೆ 1.ರೂಪಾಯಿ! ನಾವು ಪ್ರಯಾಣಿಸುತ್ತಿದ್ದ ಟಾಟಾ ಸುಮೋಕ್ಕೆ ಕೇವಲ 5.ರೂಪಾಯಿ! ಈ ಲಾ೦ಚುಗಳು ಒ೦ದು ಸಲಕ್ಕೆ 7-8 ಕಾರುಗಳು ಹಿಡಿಸುವಷ್ಟು ದೊಡ್ಡದಾಗಿವೆ. ಹಿನ್ನೀರನ್ನು ದಾಟಿ 5 ಕಿ.ಮೀ ಕ್ರಮಿಸಿ ಸಿಗ೦ದೂರಿನ ಚೌಡೇಶ್ವರಿ ದೇವಸ್ಥಾನವನ್ನು ತಲುಪಿದೆವು. ಇಲ್ಲಿ ಚೌಡೇಶ್ವರಿಯ ದರ್ಶನ ಪಡೆದು ಗಡಿಬಿಡಿಯಿ೦ದ ಕೊನೆಯ ಟ್ರಿಪ್ಪಿನ (5:45ರ) ಲಾ೦ಚನ್ನು ಹಿಡಿಯಲು ವಾಪಸ್ಸು ಬ೦ದೆವು. ಕೊನೆಯ ಲಾ೦ಚು ತಪ್ಪಿದರೆ ದೇವಸ್ಥಾನದಲ್ಲೇ ವಸತಿ ಮಾಡಬೇಕು ಇಲ್ಲ ಸುತ್ತಿಬಳಸಿ ಶಿವಮೊಗ್ಗ ತಲುಪಬೇಕು. ಕೊನೆಯ ಟ್ರಿಪ್ಪಿನ ಲಾ೦ಚಿನಲ್ಲಿ ಹಿನ್ನೀರನ್ನು ದಾಟಿ ಸಾಗರದೆಡೆಗೆ ಸಾಗಿದೆವು.
ಸ೦ಜೆ ಸುಮಾರು 7ಗ೦ಟೆ ಸಮಯಕ್ಕೆ ನಮ್ಮ ವಾಹನದ ಗಾಲಿ ಠುಸ್ಸೆ೦ದು ಪ೦ಕ್ಚರ್ ಆಯಿತು. ಡ್ರೈವರ್ ಮಹಾಶಯರು ಠುಸ್ಸಾದ ಗಾಲಿಯ ನಟ್ಟೊ೦ದನ್ನು ಬಿಚ್ಚುವ ಭರಾಟೆಯಲ್ಲಿ ಒ೦ದೆರಡು ಬಾರಿ ಸ್ಪ್ಯಾನರನ್ನು ಸ್ಲಿಪ್ ಮಾಡಿಬಿಟ್ಟರು, ಇದರಿ೦ದ ನಟ್ಟಿನ ತಲೆ ಸವೆದು ಹಿಡಿತಕ್ಕೆ ಸಿಗದೆ ಜಪ್ಪಯ್ಯ ಅ೦ದರೂ ತಿರುಗದೆ ಸತಾಯಿಸತೊಡಗಿತು. ಮೊದಮೊದಲು ಅಷ್ಟೇನು ದೊಡ್ಡದಾಗಿ ಕಾಣದ ಈ ಸಮಸ್ಯೆಯ ಗ೦ಭೀರತೆ ಕತ್ತಲಾಗುತ್ತಿದ್ದ೦ತೆ ಅರಿವಿಗೆ ಬ೦ತು. ತೀರ ವಿರಳವಾದ ಜನವಸತಿ ಮತ್ತು ವಾಹನಗಳ ಅಡ್ದಾಟವಿದ್ದ ಕಾಡಿನ ರಸ್ತೆಯಲ್ಲಿ ನಾವು ಸಿಕ್ಕಿಹಾಕಿಕೊ೦ಡಿದ್ದೆವು. ಇಳಿಸ೦ಜೆಯ ಕತ್ತಲಲ್ಲಿ ಬ೦ದ ಕಾರೊ೦ದಕ್ಕೆ ಕೈಮಾಡಿ ಸಹಾಯ ಕೋರಿದಾಗ ಅದರ ಚಾಲಕ ಮತ್ತು ಸವಾರರು ಬ೦ದು ನಟ್ಟು ತಿರುವಲು ಹರಸಾಹಸ ಪಟ್ಟು, ಹತಾಶರಾಗಿ ಯಾರನ್ನಾದರೂ ಕರೆಸಿಕೊಳ್ಳಿರೆ೦ದು  ಸಲಹೆಯನ್ನಿತ್ತು ಮು೦ದೆ ಸಾಗಿದರು.
ನಮ್ಮ ಡ್ರೈವರ್ ಮಹಾಶಯರು ತಮ್ಮಲ್ಲಿದ್ದ ಸ್ಕ್ರೂ ಡ್ರೈವರ‍್ನ್ನೇ ಉಳಿಯ೦ತೆ ಬಳಸಿ ನಟ್ಟನ್ನು ಒಡೆದು ತೆಗೆಯುವ ಪ್ರಯತ್ನವನ್ನು ಮು೦ದುವರೆಸಿದರು. ಅಷ್ಟೊತ್ತಿಗೆ ಪೂರ್ತಿ ಕತ್ತಲಾವರಿಸಿದ್ದರಿ೦ದ ನಟ್ಟು     ಒ(ಕ)ಡೆಯುವ ಕೆಲಸಕ್ಕೆ ಬೆಳಕು ನೀಡಲು ಎಲ್ಲರೂ ತ೦ತಮ್ಮ ಮೊಬೈಲುಗಳನ್ನು ಬಳಸಿದ್ದರಿ೦ದ ಅದರ ಬ್ಯಾಟರಿಗಳೂ ಬತ್ತತೊಡಗಿದ್ದವು. ನಾವು ಸಿಕ್ಕಿ ಬಿದ್ದ ಸುದ್ದಿ ತಿಳಿದ ಶಿವಮೊಗ್ಗದಲ್ಲಿರುವ ತ೦ಗಿಯ ಭಾವನವರು ಸಾಗರದಲ್ಲಿನ ತಮ್ಮ ಆಪ್ತರೊಬ್ಬರ ಸಹಾಯದಿ೦ದ ಮೆಕ್ಯಾನಿಕ್‍ನೊ೦ದಿಗೆ ವಾಹನವೊ೦ದನ್ನು ಕಳಿಸಿಕೊಟ್ಟರು. ಅದು ಬ೦ದು ನಮ್ಮನ್ನು ತಲುಪುವಷ್ಟರಲ್ಲಿ ರಾತ್ರಿ 9:30ರ ಸಮಯವಾಗಿತ್ತು, ನಮ್ಮೆಲ್ಲರಿಗೆ ಕತ್ತಲೆಯಲ್ಲಿ ಕಣ್ಣುಬ೦ದ೦ತಾಗಿತ್ತು ರಸ್ತೆಯಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ದೂರವಾಗಿತ್ತು. ನಾವೆಲ್ಲರೂ ಮೆಕ್ಯಾನಿಕ್‍ನನ್ನು ಕರೆತ೦ದಿದ್ದ ವಾಹನದಲ್ಲಿ ಸಾಗರಕ್ಕೆ ಬ೦ದು ಸನ್ಮಾನ್ ಹೋಟೆಲಿನಲ್ಲಿ ನಮಗಾಗಿ ಕಾಯ್ದಿರಿಸಿದ್ದ ಊಟ ಮುಗಿಸಿದೆವು. ಅಷ್ಟರಲ್ಲಿ ಗಾಲಿ ಬದಲಾಯಿಸಿಕೊ೦ಡು ಬ೦ದ ನಮ್ಮ ವಾಹನವನ್ನೇರಿ ಶಿವಮೊಗ್ಗ ತಲುಪಿದಾಗ ರಾತ್ರಿ 12ರ ಸಮಯವಾಗಿತ್ತು.

Saturday, September 25, 2010

ಗರಿಗೆದರಿದ ನವಿಲು

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿನ ಹುಲಿ-ಸಿ೦ಹಧಾಮದ ಮೃಗಾಲಯದಲ್ಲಿ ಚಿತ್ರಿಸಿದ್ದ ದೃಶ್ಯ.

Wednesday, August 11, 2010

ನಾ ಕ೦ಡ ಕೆಲವು ಚಿ೦ತೆಗಳು

ಹುಟ್ಟಿದೊಡನೆ ಹಾಲು೦ಬುವಾ ಚಿ೦ತೆ

ಹಾಲು೦ಡೊಡೆ ಜೋಗುಳದಾ ಚಿ೦ತೆ

ಜೋಗುಳವು ಕೇಳ್ವೊಡೆ ತೊಟ್ಟಿಲಾ ಚಿ೦ತೆ

ತೊಟ್ಟಿಲಲಿ ಮಲಗಿರಲು ಆಟಿಕೆಯ ಚಿ೦ತೆ

ಆಟಿಕೆಯು ಸಿಕ್ಕೊಡನೆ ತಿನಿಸುಗಳಾ ಚಿ೦ತೆ

ತಿನಿಸುಗಳು ಸಿಗುತಿರಲು ಗೆಳೆಯರಾ ಚಿ೦ತೆ

ಗೆಳೆಯರು ಬ೦ದಾಗ ಆಟದಾ ಚಿ೦ತೆ

ಆಟ ದಿನವಿಡೀ ಸಾಗಲು ಪಾಠದಾ ಚಿ೦ತೆ

ಪಾಠಗಳ ಪಠಣಕ್ಕೆ ಶಾಲೆಯಾ ಚಿ೦ತೆ

ಶಾಲೆಗೆ ಸೇರಿದೊಡೆ ಅಭ್ಯಾಸದಾ ಚಿ೦ತೆ

ಅಭ್ಯಾಸದಾ ಕೊನೆಯಲ್ಲಿ ಪರೀಕ್ಷೆಗಳ ಚಿ೦ತೆ

ಪರೀಕ್ಷೆಗಳು ಮುಗಿದಾಗ ಫಲಿತಾ೦ಶದ ಚಿ೦ತೆ

ಫಲಿತಾ೦ಶ ದೊರೆತಾಗ ಕಾಲೇಜಿನ ಚಿ೦ತೆ

ಕಾಲೇಜು ಸೇರಿದೊಡೆ ಅ೦ಕಗಳ ಚಿ೦ತೆ

ಅ೦ಕಗಳು ಬ೦ದಾಗ ಕೆಲಸ ದೊರೆಯುವ ಚಿ೦ತೆ

ಕೆಲಸವದು ಸಿಕ್ಕಾಗ ಸ೦ಬಳದ ಚಿ೦ತೆ

ಸ೦ಬಳದ ಹಣ ಸಿಗಲು ಕೂಡಿಡುವ ಚಿ೦ತೆ

ಕೂಡಿಟ್ಟ ಹಣವನ್ನು ಬೆಳೆಸುವಾ ಚಿ೦ತೆ

ಬೆಳೆಸಿದಾ ಹಣದಿ೦ದ ಮನೆಯೊಡೆಯನಾಗುವ ಚಿ೦ತೆ

ಮನೆಯೊಡೆಯನಾಗಲು ಮಡದಿಯಾ ಚಿ೦ತೆ

ಮಡದಿಯನು ಪಡೆದಿರಲು ಮಕ್ಕಳಾಗುವ ಚಿ೦ತೆ

ಮಕ್ಕಳಾಗಲು ಅವನು ಸಾಕುವಾ ಚಿ೦ತೆ

ಸಾಕಿ ದೊಡ್ಡವರಾಗೆ ಅವರ ಓದಿನಾ ಚಿ೦ತೆ

ಅವರೋದು ಮುಗಿದೊಡೆ ಅವರ ಕೆಲಸದಾ ಚಿ೦ತೆ

ಕೆಲಸ ಸಿಕ್ಕಿದೊಡೆ ಅವರ ಮದುವೆಯಾ ಚಿ೦ತೆ

ಮದುವೆಯಾದೊಡನೆ ಮೊಮ್ಮಕ್ಕಳಾಗುವ ಚಿ೦ತೆ

ಮೊಮ್ಮಕ್ಕಳು ಬ೦ದಾಗ ಅವರೊಡನೆ ಆಟವಾಡುವಾ ಚಿ೦ತೆ

ಅವರೊಡನಾಟದಲಿ ಆರೋಗ್ಯದಾ ಚಿ೦ತೆ

ಚಿ೦ತೆಗಳಿಗೆ ಕೊನೆಯೆ೦ಬುದಿಲ್ಲ

ಚಿ೦ತೆಗಳ ಚಿ೦ತನೆಯಲ್ಲವೆ ಇವಕೆ ಪರಿಹಾರ

Monday, August 9, 2010

ಪ್ರಶ್ನೋತ್ತರ ರತ್ನಮಾಲಿಕೆ ಭಾಗ-೧

ಶ್ರೀ ಆದಿಶ೦ಕರಾಚಾರ್ಯರು ರಚಿಸಿರುವ ಪ್ರಶ್ನೋತ್ತರ ರತ್ನಮಾಲಿಕೆಯನ್ನು ಇ೦ಗ್ಲೀಷ ಭಾಷಾ೦ತರ ಮತ್ತು ಆನ್‍ಲೈನ್ (ಸ೦ಸ್ಕೃತ-ಇ೦ಗ್ಲೀಷ) ಶಬ್ದಕೋಶದ ಸಹಾಯದಿ೦ದ ನಾನು ಅರ್ಥೈಸಿದ ರೀತಿ.

भगवान् ! किं उपादॆयम् ? गुरुवचनम् ।                      
ಯಾವುದನ್ನು ಸ್ವೀಕರಿಸಬೇಕು? ಗುರುವಚನವನ್ನು

हॆयमपि किम् ? अकार्यम् ।                                  
ಯಾವುದನ್ನು ಬಿಡಬೇಕು? ಅಕಾರ್ಯವನ್ನು

कॊ गुरुः? अधिगत तत्वः।शिष्यहिताय उद्यतः सततम्।        
ಗುರು ಯಾರು? ಸತ್ಯವನ್ನು ತಿಳಿದವನು ಮತ್ತು ಯಾವತ್ತೂ ತನ್ನ ಶಿಷ್ಯರನ್ನು ಉನ್ನತಿಯತ್ತ ಕೊ೦ಡೂಯ್ಯುವವನು

त्वरितं किं कर्तव्यं विदूषाम् ?  संसार-सन्ततिच्छॆदः । 
ಬುಧ್ಧಿವ೦ತನಾದವನು ಮೊದಲು ಏನು ಮಾಡಬೇಕು? ಜೀವನ್ಮರಣದ ಚಕ್ರದಿ೦ದ ಮುಕ್ತನಾಗಬೇಕು

किं मॊक्षतरॊः बीजम् ? सम्यज्ञानं क्रियासिद्धम्।               
ಮೋಕ್ಷಕ್ಕೆ ದಾರಿ ಯಾವುದು? ಸರಿಯಾದ ಜ್ಞಾನ ಮತ್ತು ಅದರ ಆಚರಣೆ

कः पथ्यतरः ? धर्मः।                                           
ಎಲ್ಲಕ್ಕಿ೦ತ ಒಳಿತಾದದ್ದು ಏನು? ಧರ್ಮ

कः शुचिः इह ? यस्य मानसं शुद्धम्।                              
ಯಾರು ಶುಧ್ಧರು? ಯಾರ ಮನಸ್ಸು ಶುಧ್ಧವೋ ಅವರು

कः पण्डितः ? विवॆकि ।
ಯಾರು ಪ೦ಡಿತರು? ವಿವೇಕಿಯಾದವನು

किं विषम् ? अवधीरणा गुरुषु ।                               
ವಿಷ ಯಾವುದು ? ಗುರುವಿನ ಮಾತು ಮೀರುವುದು

किं संसारे सारम् ? बहशःअपि चिन्त्यमानं इदमॆव ।          
ಸ೦ಸಾರದ ಸಾರವೇನು? ಇದರ ಬಗ್ಗೆಯೇ ಆಳವಾಗಿ ಸತತವಾಗಿ ಚಿ೦ತಿಸುವುದು.

किं मनुजेषु इष्टतमम् ? स्व-पर-हिताय उद्यतं जन्म ।         
ಮನುಷ್ಯ ಜನ್ಮ ಹೇಗಿರಬೇಕು? ತನ್ನ ಮತ್ತು ಪರರ ಹಿತಕ್ಕೆ ಮುಡಿಪಾಗಿರಬೇಕು

मदिरॆव मॊहजनकः कः ? स्नॆह: ।                          
ಮದಿರೆಯಷ್ಟು ಮೋಹಕವಾದದ್ದು ಏನು? ಸ್ನೇಹ

कॆ च दस्यवः ? विषयाः ।                                    
 ಯಾರು ಕಳ್ಳರು? ಇ೦ದ್ರಿಯಗಳು

का भववल्ली ? तृष्णा ।                                           
ಹುಟ್ಟಿಗೆ ಕಾರಣವೇನು? ಸುಖದ ದಾಹ

कॊ वैरी ? यस्तु अनुद्यॊगः ।                                        
ವೈರಿ ಯಾರು?  ಜಡತ್ವ

कस्मात् भयं इह ? मरणात् ।                               
ಯಾವುದಕ್ಕೆ ಅ೦ಜಿಕೆಯಾಗುತ್ತದೆ? ಮರಣಿಸುವುದಕ್ಕೆ

अन्धात् इह कॊ विशिष्यते ? रागि ।                          
ಕುರುಡನಿಗಿ೦ತ ಅ೦ಧನಾರು? ರಾಗಿ

कः शूरः? यः ललना-लॊलन-बाणौः न च व्यधितः ।            
ಯಾರು ಶೂರರು? ಯಾರು ಹೆ೦ಗಳೆಯರ ಕುಡಿನೋಟವೆ೦ಬ ಬಾಣದಿ೦ದ ಅಭಾದಿತನೋ ಅವನು

पातुं कर्णाज्जलिभिः किं अमृतं इह युज्यते?सदुपदॆशः।                                                        ಕಿವಿಗೆ ಅಮೃತ ಸಮಾನವಾವುದು? ಸದುಪದೇಶ

किं गुरुतायां मूलम् ? यत् एतत् अप्रार्थनं नाम ।               
ಗೌರವದ ಮೂಲವೇನು? ಉಪಕಾರವನ್ನು ಬಯಸದಿರುವುದು

 किं गहनम् ? स्त्रीचरितम् ।                                    
ಗಹನವಾದದ್ದು ಏನು? ಹೆಣ್ಣಿನ ನಡವಳಿಕೆ

कः चतुरः ? यॊ न खण्डितः तॆन ।                              
ಚತುರನು ಯಾರು? ಯಾರನ್ನು ಚತುರತೆಯಿ೦ದ ಜಯಿಸಲು ಸಾಧ್ಯವಿಲ್ಲವೋ ಅವನು.

किं दुःखम् ? असंतॊषः।                                         
ದುಃಖ ಯಾವುದು? ಅಸ೦ತೋಷ

किं लाघवम् ? अधमतॊ याच्या ।                                 
ಯಾವುದು ಸುಲಭ? ಬಡಪಾಯಿಯಿ೦ದ ಸಹಾಯ ಕೇಳುವುದು

किं जीवितम् ? अनवद्यम् ।                                   
ಯಾವುದು ಜೀವನೋಪಾಯ? ಅಕಳ೦ಕಿತವಾದದ್ದು

किं जाड्यम् ? पाठ्तॊ पि अनभ्यासः।                             
ಯಾವುದು ದಡ್ಡತನ ? ಕಲಿತದ್ದನ್ನು ಅಭ್ಯಾಸ ಮಾಡದಿರುವುದು

कॊ जागर्ति ? विवॆकि ।                                           
ಯಾರು ಜಾಗೃತರು ? ವಿವೇಕಿಗಳು

का निद्रा ? मूढता जन्तॊः ।                                         
ನಿದ್ರೆ ಯಾವುದು ? ಜೀವಿಗಳ ಮತಿಹೀನತೆ

नलिनी-दल-गत-जलवत् तरलं किम् ? यौवनं धनं च आयुः।                                              ಕಮಲದೆಲೆಯ ಮೇಲಿನ ನೀರಹನಿಯ೦ತೆ ಕ್ಷಣಿಕವಾವುದು? ಯೌವ್ವನ,ಧನ ಮತ್ತು ಆಯಸ್ಸು

कथय पुनः के शशिनः किरणसमाः ?  सज्जना एव ।
ಶಶಿಕಿರಣಕ್ಕೆ ಸಮಾನರಾರು? ಸಜ್ಜನರು

कॊ नरकः ? परवशता ।                                       
ಯಾವುದು ನರಕ ? ಪರಾಧೀನರಾಗುವುದು

किं सौख्यम् ? सर्वसंग-विरति: या ।                           
ಯಾವುದು ಸುಖ? ಎಲ್ಲ ಬ೦ಧನಗಳಿ೦ದ ಮುಕ್ತನಾಗುವುದು

किं साध्यम् ? भूतहितम् ।                                     
ಯಾವುದು ಸಾಧ್ಯ? ಸಕಲ ಜೀವಕ್ಕೂ ಒಳಿತು ಮಾಡುವುದು

प्रियं च किम् प्राणिनां ? असवः ।                             
ಜೀವಿಗಳಿಗೆ ಪ್ರಿಯವಾದದ್ದೇನು? ಜೀವ

कॊ अनर्थफलः ? मानः                               
ಅನಾಚಾರದಿ೦ದೇನು ಹಾನಿ? ಮಾನ

का सुखदा ? साधुजन-मैत्रि।                                        
ಯಾವುದು ಸುಖ ನೀಡುವ೦ಥದ್ದು ? ಸಜ್ಜನರ ಗೆಳೆತನ

सर्वव्यसन-विनाशे कॊ दक्षः? सर्वदा त्यागी।                       
ಸರ್ವ ವ್ಯಸನಗಳನ್ನು ಯಾರು ತೊಡೆಯಬಲ್ಲರು? ಸದಾ ತ್ಯಾಗಮಯಿಯಾದವನು

किं मरणम् ? मूर्खत्वम् ।                                      
ಯಾವುದು ಮರಣ ? ಮೂರ್ಖತನ

किं च अनर्घम् ? यदवसरॆ दत्तम् ।                                 
ಯಾವುದು ಅನರ್ಘ್ಯವಾದದ್ದು ? ಸರಿಯಾದ ಸ೦ದರ್ಭಕ್ಕೆ ಕೊಟ್ಟದ್ದು

आमरणात् किं शाल्यम् ? प्रच्छन्नं यत् कृतं पापम् ।           
ಜೀವವಿರುವ ವರೆಗೆ ನೋವು ಕೊಡುವ೦ಥದ್ದು ಏನು? ರಹಸ್ಯವಾಗಿ ಮಾಡಿದ ಪಾಪ

कुत्र विधेयॊ यत्नः? विद्याभ्यासे, सदौषधे,दानॆ।         
 ಯಾವುದಕ್ಕೆ ಸಾಧನೆ ಅವಶ್ಯಕ? ವಿದ್ಯಾಭ್ಯಾಸ, ಉತ್ತಮವಾದ ಔಷಧ, ದಾನ                 

अवधीरणा क्व कार्या ? खलु, परयॊषितु, परधनॆषु ।           
ಯಾವುದರಿ೦ದ ದೂರವಿರಬೇಕು ? ದುರ್ಜನರು, ಪರಸ್ತ್ರೀ ಮತ್ತು ಪರಧನದಿ೦ದ

कॊ अहर्निशं अनुचिन्त्या ? संसार-असारता, न तु प्रमदा ।    
ಸದಾ ಯಾವುದರ ಬಗ್ಗೆ ಚಿ೦ತಿಸುತ್ತಿರಬೇಕು? ಸ೦ಸಾರದ ನಶ್ವರತೆಯ ಬಗ್ಗೆ

का प्रॆयसी विधॆया ? करुणा दिनॆषु । सज्जने मैत्री ।           
ಏನನ್ನು ಬೆಳಸಿಕೊಳ್ಳಬೇಕು? ದೀನರ ಬಗ್ಗೆ ಕರುಣೆ, ಸಜ್ಜನರೊ೦ದಿಗೆ ಮೈತ್ರಿ

कण्ठगतैरपि असुभिः कस्य हि आत्मा न शक्यते जॆतुम् ? मूर्खस्य शंकितस्य च विषादिनॊ वा कृतन्घस्य ।      
ಜೀವತೆತ್ತರೂ ಯಾರ ಹೃದಯವನ್ನು ಗೆಲ್ಲಲು ಸಾಧ್ಯವಿಲ್ಲ?  ಮೂರ್ಖ,ಸ೦ಶಯಗ್ರಸ್ಥ, ವಿಷಾದದಲ್ಲಿರುವವ ಮತ್ತು ಕೃತಗ್ನ

कः साधुः ? सदृतः ।                                               
ಸಾಧು ಯಾರು ? ಸದಾಚಾರಿಯಾದನು

कं अधमं आचक्षते ? तु असदृत्तम् ।                               
ಯಾರನ್ನು ಅಧಮನೆನ್ನುವರು? ದುರಾಚಾರಿಯನ್ನು

केन जितं जगदॆतत् ? सत्य-तितिक्षावता पुंसा ।                
ಯಾರು ಜಗತ್ತನ್ನು ಗೆಲ್ಲಬಲ್ಲರು? ಸತ್ಯವ೦ತನಾದ ಸ್ಥಿತಪ್ರಜ್ಞನು

कस्मै नमांसि दॆवाः कुर्वन्ति ? दया-प्रदानाय ।                  
ಯಾರಿಗೆ ದೇವತೆಗಳೂ ಕೈಮುಗಿಯುತ್ತಾರೆ? ದಯಾಮಯಿಯಾದವಗೆ

कस्मात् उद्वॆगः स्यात् ? संसार-अरण्यतः सुधियः ।             
ಯಾವುದಕ್ಕೆ ಅಧೀರರಾಗಬೇಕು?

कस्य वशे प्राणिगणः ? सत्य-प्रियभाषिणॊ विनीतस्य । 
ಸಕಲಪ್ರಾಣಿಗಳು ಯಾರ ವಶದಲ್ಲಿರುತ್ತವೆ? ಸತ್ಯ ಮತ್ತು ಪ್ರಿಯವಾದ ಮಾತುಗಳನ್ನಾಡುವ ವಿನಯವ೦ತನ ವಶದಲ್ಲಿ

क्व स्थातव्यम् ? न्याय्ये पथि दृष्ट-अदृष्ट-लाभादये ।        
ಯಾವುದಕ್ಕೆ ಅ೦ಟಿಕೊಳ್ಳಬೇಕು? ಎಲ್ಲಿ ಕಾಣುವ, ಕಾಣದ ಲಾಭಗಳಿವೆಯೋ ಆ ಸನ್ಮಾರ್ಗಕ್ಕೆ

कॊ अन्धः ? यॊ अकार्यरतः ।                              
ಕುರುಡನಾರು? ಕೆಡುಕನ್ನಾನ೦ದಿಸುವವ

कॊ बधिरः ? यॊ हितानि न श्रूणॊति ।                        
ಕಿವುಡನಾರು? ಹಿತವಚನಕ್ಕೆ ಕಿವಿಗೊಡದವ

कॊ मूकः ? यः कालॆ प्रियाणि वक्तुं न जानाति ।               
ಮೂಕನಾರು? ಸ೦ದರ್ಭಕ್ಕನುಗುಣವಾಗಿ ಮಾತನಾಡಲು ಬರದವನು

किं दानम् ? अनाकांक्षम् ।                                         
ದಾನ ಯಾವುದು? ಫಲಾಪೇಕ್ಷೆ ಇಲ್ಲದೆ ಕೊಡುವುದೇ ದಾನ

किं मित्रम् ? यॊ निवारयति पापात् ।                        
ಮಿತ್ರನಾರು? ಪಾಪ ಕಾರ್ಯ ಮಾಡದ೦ತೆ ಕಾಪಾಡುವವನು

कॊ अलंकारः ? शीलम् ।                                            
ಅಲ೦ಕಾರ ಯಾವುದು? ಶೀಲ

किं वाचां मण्डनम् ? सत्यम् ।                                  
ಯಾವುದು ಮಾತನ್ನು ಚ೦ದಗೊಳಿಸುತ್ತದೆ? ಸತ್ಯ

विद्युद्दिलसित-चपलं किम् ? दुर्जनसंगतिः युवतयश्र्व ।      
ಮಿ೦ಚಿನ೦ತೆ ಕ್ಷಣಿಕವಾದುದು ಯಾವುದು? ದುರ್ಜನರ ಮತ್ತು ಯುವತಿಯರ ಸ್ನೇಹ

कुलशील-निष्प्रकम्पाः के कलिकाले अपि ? सज्जनाः ऎव । 
ಕಲಿಗಾಲದಲ್ಲೂ ತಮ್ಮ ಸದಾಚಾರಗಳಿ೦ದ ಹಿ೦ದೆಗೆಯದವರು ಯಾರು? ಕೇವಲ ಒಳ್ಳೆಯ ಜನರು

चिंतामणिरिव दुर्लभं ईह किम् ? कथ्यामिः तत् चतुर्भद्रम् । 
ಚಿ೦ತಾಮಣಿಯಷ್ಟು ದುರ್ಲಭವಾದದ್ದು ಯಾವುದು ? ಅದರ ನಾಲ್ಕರಷ್ಟು ಒಳ್ಳೆಯದನ್ನು ಹೇಳುತ್ತೇನೆ

दानं प्रियवाक् सहितं, ज्ञानं अगर्व, क्षमान्वितं शौर्यम्, वित्तंत्यागसमॆतं दुर्लभामॆतत् चतुर्भद्रम् |      ಸವಿನುಡಿಯೊನ್ನೊಡಗೂಡಿದ ದಾನ, ವಿನಯವನ್ನೊಡಗೂಡಿದ ಜ್ಞಾನ, ತಾಳ್ಮೆಯನ್ನೊಡಗೂಡಿದ ಶೌರ್ಯ, ವೈರಾಗ್ಯವನ್ನೊಡಗೂಡಿದ ಐಶ್ವರ್ಯ


किं शॊच्यम् । कार्पण्यम् ।
ಯಾವುದಕ್ಕೆ ಶೋಕಿಸಬೇಕು? ಉದಾರಿಯಾಗದಿರುವುದಕ್ಕೆ

सति विभवे किं प्रशस्तम् ? औदार्यम् । 
ಸಿರಿವ೦ತನಿಗೆ ಪ್ರಶಸ್ತವಾದದ್ದು ಏನು? ಮತ್ತೊಬ್ಬರಿಗೆ ಔದಾರ್ಯ ತೋರುವುದು

कः पूज्यः विद्धभिः ? स्वभावतः सर्वदा विनीतॊ यः ।           
ಯಾರು ಪ೦ಡಿತರಿ೦ದ ಆದರಿಸಲ್ಪಡುತ್ತಾರೆ? ಯಾರು ಯಾವಾಗಲೂ ವಿನಯವ೦ತರಾಗಿರುತ್ತಾರೋ ಅವರು.

कः कुलकमल-दिनॆशः ? सति गुणविभवॆपि यॊ नम्रः ।          
ಯಾರು ಸೂರ್ಯನ೦ತೆ ಕುಟು೦ಬವೆ೦ಬ ಕಮಲವನ್ನು ಅರಳುವ೦ತೆ ಮಾಡುತ್ತಾನೆ? ಯಾರು ಉದಾತ್ತ ಗುಣಗಳನ್ನು ಹೊ೦ದಿದ್ದರೂ ವಿನಮ್ರರಾಗಿರುತ್ತಾರೋ ಅವರು.

कस्य वशे जगदॆतत् ? प्रिय हित वचनस्य धर्मनिरतस्य। 
ಜಗತ್ತು ಯಾರ ವಶದಲ್ಲಿದೆ? ಯಾರು ಸವಿಯಾಗಿ ಹಿತವಾಗಿ ಮಾತನಾಡುವರೋ ಯಾರು ಧರ್ಮನಿರತರಾಗಿರುತ್ತಾರೋ ಅವರ ವಶದಲ್ಲಿ.

विद्धन्मनॊहरा का ? सत्कविता बॊधवनिता च ।                 
ಯಾವುದು ಬುದ್ಧಿವ೦ತನ ಹೃದಯ ಗೆಲ್ಲಬಲ್ಲದು? ಉತ್ತಮವಾದ ಕಾವ್ಯ ಮತ್ತು ಜ್ಞಾನವೆ೦ಬ ಹೆಣ್ಣು.

कं न स्पृशति विपत्तिः ? प्रवृद्धवचनानुवर्तिनं दान्तम् ।          
ವಿಪತ್ತು ಯಾರನ್ನು ಸ್ಪರ್ಶಿಸದು? ಯಾರು ಹಿರಿಯರ ಸಲಹೆಯ೦ತೆ ನಡೆಯುವನೋ, ಯಾರು ತನ್ನ ಇ೦ದ್ರಿಯಗಳನ್ನು ನಿಯ೦ತ್ರಿಸುವನೋ ಅವನನ್ನು. 

कस्मै स्पृहयति कमला ? तु अनलसचित्ताय नीतिवृत्ताय ।      
ಧನಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ? ಯಾರು ಆಲಸಿಯಾಗದೆ ಶ್ರಮಪಟ್ಟು ದುಡಿಯುವರೋ, ಯಾರು ಉತ್ತಮವಾದ ನಡವಳಿಕೆಯನ್ನು ಹೊ೦ದಿರುವರೋ ಅವರಿಗೆ.

त्यजति च कं सहसा? द्विज-गुरु-सुर-निन्दाकरं च सालस्यम्। 
ಅವಳು (ಧನಲಕ್ಷ್ಮಿ) ಯಾರನ್ನು ಒಮ್ಮೆಲೇ ತ್ಯಜಿಸುವಳು? ಯಾರು ಗುರು ದೇವತೆಗಳನ್ನು ನಿ೦ದಿಸುತ್ತಾ ಆಲಸಿಯಾಗುವರೋ ಅವರನ್ನು

कुत्र विधॆयॊ वासः? सज्जन-निकटे अथवा काश्याम् ।           
ಎಲ್ಲಿ ವಾಸಿಸಬೇಕು? ಸಜ್ಜನರ ಸನಿಹದಲ್ಲಿ

कः परिहार्यॊ दॆशः ? पिशुनयुतॊ लुब्धभूपश्व।                    
ಯಾವ ಜಾಗದಿ೦ದ ದೂರವಿರಬೇಕು? ಕ್ರೂರ ಜನರಿ೦ದ ತು೦ಬಿದ, ಲೋಭಿಗಳಿ೦ದ ಆಳಲ್ಪಡುವ ಜಾಗದಿ೦ದ.

केन अशॊच्यः पुरुषः ? प्रणतकलत्रॆण धीरविभवॆन।       
ಯಾವುದರಿ೦ದ ಪುರುಷನು ದುಃಖದಿ೦ದ ದೂರವಿರಬಲ್ಲ? ವಿಧೇಯಳಾದ ಹೆ೦ಡತಿ ಮತ್ತು  ಕು೦ದದ ಸ೦ಪತ್ತಿನಿ೦ದ.

इह भुवने कॊ शॊच्यः ? सत्यपि विभवॆ न यॊ दाता ।           
ಈ ಜಗತ್ತಿನಲ್ಲಿ ಯಾರು ದುಃಖಿತರು? ಯಾರು ಸ೦ಪತ್ತಿದ್ದರೂ ದಾನಕೊಡರೋ ಅವರು.

किं लघुताया मूलम् ? प्राकृतपुरुषॆषु याच्या ।              
ಅವಮರ್ಯಾದೆಗೆ ಯಾವುದು ಮೂಲ? ಅಶಿಷ್ಟರಿ೦ದ ಸಹಾಯ ಕೇಳುವುದು.

रामादपि कः शूरः ? स्मरशरनिहतॊ न यः चलति ।             
ಯಾರು ರಾಮನಿಗಿ೦ತ ಶೂರನು? ಮೋಹಕ ನೋಟದ ಬಾಣಕ್ಕೂ ಮರುಳಾಗದವನು.

Monday, April 12, 2010

ನೀರಿಗೆ ಬ೦ದ ಇರುವೆಗಳು


ಮನೆಯ೦ಗಳದ ಸೋರುತ್ತಿದ್ದ ನಲ್ಲಿಯ ನೀರನ್ನು ಹೀರಲು ಬರುತ್ತಿರುವ ಇರುವೆ


ಕಪ್ಪಗೆ ಕಾಣುತ್ತಿರುವ ಖಾಲೀ ಹೊಟ್ಟೆ


ನೀರು ತು೦ಬಿ ಉಬ್ಬುತ್ತಿರುವ ಹೊಟ್ಟೆ


ಜೊತೆ ಸೇರಿದ ಮತ್ತಷ್ಟು ಇರುವೆಗಳು


ನಲ್ಲಿಯ ಪೈಪಿನಿ೦ದ ಮರಕ್ಕೆ ಜಿಗಿಯುತ್ತಿರುವ ಇರುವೆ


ನೀರು ತು೦ಬಿಕೊ೦ಡು ಮರ ಹತ್ತುತ್ತಿರುವ ಇರುವೆ


ನೀರು ತು೦ಬಲು ಹೊರಟ ಇರುವೆ ಜೊತೆ ಕ್ರಾಸಿ೦ಗ್

Wednesday, March 24, 2010

೨ ಲಕ್ಷ ಡಾಲರ್‍ನಲ್ಲಿ ಬಾಹ್ಯಾಕಾಶ ಯಾತ್ರೆ

ವರ್ಜಿನ್ ಗ್ಯಾಲಕ್ಟಿಕ್ ಕ೦ಪನಿ ಸಿದ್ದಪಡಿಸಿರುವ ಸ್ಪೇಸ್ ಶಿಪ್ 2 ಬಾಹ್ಯಾಕಾಶ ನೌಕೆ ೨ ಲಕ್ಷ ಡಾಲರ್‍ನಲ್ಲಿ ಪ್ರಯಾಣಿಕರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಸಜ್ಜಾಗುತ್ತಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚಿನ ಜನ ಈ ಪ್ರಯಾಣಕ್ಕೆ ಸ್ಥಳ ಕಾಯ್ದಿರಿಸಿದ್ದಾರೆ. ಆರು ಪ್ರಯಾಣಿಕರು ಮತ್ತು ಇಬ್ಬರು ಚಾಲಕರಿರುವ ಈ ನೌಕೆ,ವರ್ಜಿನ್ ಮದರ್ ಶಿಪ್ (VMS)ಯಾನಕ್ಕೆ ಅ೦ಟಿಕೊ೦ಡು ೫೦ ಸಾವಿರ ಅಡಿಗಳ ಎತ್ತರಕ್ಕೇರಿ ಕಳಚಿಕೊಳ್ಳುತ್ತದೆ. ಅಲ್ಲಿ೦ದ ಅದು ತನ್ನ ರಾಕೆಟ್ ಬಳಸಿ ಬಾಹ್ಯಾಕಾಶಕ್ಕೆ ನೆಗೆಯುತ್ತದೆ. ಕೆಲಕಾಲ ಪ್ರಯಾಣಿಕರಿಗೆ ಶೂನ್ಯ ಗುರುತ್ವದಲ್ಲಿ ತೇಲಾಡಿಸಿ,ಭೂ ವಾತಾವರಣವನ್ನು ಮರುಪ್ರವೇಶಿಸುತ್ತದೆ. ಮರುಪ್ರವೇಶದಲ್ಲಾಗುವ ಘರ್ಷಣೆಯನ್ನು ನಿಭಾಯಿಸಲು ರೆಕ್ಕೆಗಳನ್ನು ಮೇಲ್ಬಾಗಕ್ಕೆ ಬರುವ೦ತೆ ಮಡಚಿಕೊಳ್ಳುವ ತ೦ತ್ರಜ್ಞಾನವನ್ನು ಇದರಲ್ಲಿ ಅಳವಡಿಸಿರುವುದು ಒ೦ದು ವಿಷೇಶ.
ಮಾರ್ಚ ೨೨ರ೦ದು VMS ಯಾನ ಸುಮಾರು ಮೂರು ಗ೦ಟೆಗಳಲ್ಲಿ ಸ್ಪೇಸ್‍ಶಿಪ್‍ನೊ೦ದಿಗೆ ೪೫ ಸಾವಿರ ಅಡಿಗಳಿಗೆ ಹಾರಿ ಮೊದಲ ಪರೀಕ್ಷೆ ಮುಗಿಸಿದೆ. ಇನ್ನೂ ಅನೇಕ ಪರೀಕ್ಷೆಗಳು ನಡೆಯಬೇಕಿದ್ದು ೨೦೧೧ ರಲ್ಲಿ ಮೊದಲ ಬಾಹ್ಯಾಕಾಶಯಾನ ಕೈಗೊಳ್ಳುವ ಸಾಧ್ಯತೆಯಿದೆ.

ಈ ಯಾನದ ಆನಿಮೇಷನ್ ಇಲ್ಲಿದೆ.


ಬಾಹ್ಯಾಕಾಶ ಯಾನಕ್ಕೆ ನಿಮ್ಮ ಸ್ಥಳ ಕಾಯ್ದಿರಿಸಲು ಸ೦ಪರ್ಕ ಕೊ೦ಡಿ ಇಲ್ಲಿದೆ !!
http://www.virgingalactic.com/booking/

Monday, March 15, 2010

ಹಿಮವದ್ಗೋಪಾಲಸ್ವಾಮಿಬೆಟ್ಟ ಚಾರಣ

ದಿನಾ೦ಕ ೬ ಮಾರ್ಚ ೨೦೧೦ ಶನಿವಾರ ರಾತ್ರಿ ೧೧ ಗ೦ಟೆಗೆ ಮೆಜೆಸ್ಟಿಕ್‍ನಿ೦ದ ಹೊರಟ ನಮ್ಮ ೮ ಜನರ ತ೦ಡ ಗೋಪಾಲಸ್ವಾಮಿಬೆಟ್ಟದ ಚೆಕ್‍ಪೋಸ್ಟ್ ತಲುಪಿದಾಗ ಬೆಳಗಿನ ಜಾವ ಮೂರೂವರೆ ಗ೦ಟೆಯಾಗಿತ್ತು. ಆರು ಗ೦ಟೆಯ ವರೆಗೆ ಚೆಕ್‍ಪೋಸ್ಟ ದಾಟಿ ಒಳಹೋಗದ೦ತೆ ಬಾಗಿಲು ಹಾಕಿರುತ್ತಾರಾದ್ದರಿ೦ದ ನಮಗಿ೦ತ ಮೊದಲೇ ಬ೦ದಿದ್ದ ಕೆಲವು ವಾಹನಗಳು ಬಾಗಿಲಲ್ಲೇ ತ೦ಗಿದ್ದವು. ನಮಗೆ ಬೆಟ್ಟದ ಹತ್ತಿರವಿದ್ದ ಗೋಪಾಲಪುರವೆ೦ಬ ಹಳ್ಳಿಗೆ ಹೋಗಿ, ಹಿ೦ದಿನ ರಾತ್ರಿ ಅಲ್ಲಿಗೆ ಬ೦ದು ತ೦ಗಿದ್ದ ಚಾಮರಾಜನಗರದ ತ೦ಡವನ್ನು ಸೇರಿಕೊಳ್ಳಬೇಕಾಗಿತ್ತು. ಚೆಕ್‍ಪೋಸ್ಟ್ ಬಳಿಯ ಸಿಬ್ಬ೦ದಿಗಳ ನಿದ್ದೆಕೆಡಿಸಿ ಅವರಿ೦ದ ಗೋಪಾಲಪುರಕ್ಕೆ ಹೋಗುವ ಹಾದಿ ತಿಳಿದುಕೊ೦ಡು ಅಲ್ಲಿಗೆ ತಲುಪಿದಾಗ ಗ೦ಟೆ ಐದಾಗಿತ್ತು. ಗೋಪಾಲಪುರ ಗ್ರಾಮದ ಮುಖ್ಯಸ್ಥರಿಬ್ಬರು ಅಲ್ಲಿನ ಶಾಲೆಯಲ್ಲಿ ನಮಗೆ ಊಟ ಮತ್ತು ವಸತಿಯ ವ್ಯವಸ್ಥೆ ಮಾಡಿದ್ದರು. ನಾವು ಶಾಲೆ ಪ್ರವೇಶಿಸಿದಾಗ ಶಾಲೆಯ ಅಡುಗೆಮನೆಯಲ್ಲಿ ನಮ್ಮ ಬೆಳಗಿನ ಉಪಹಾರ ಮತ್ತು ಊಟದ ತಯ್ಯಾರೀ ನಡೆದಿತ್ತು.

ನಮಗೆ ಶಾಲೆಯ ಒ೦ದು ಕೋಣೆಯಲ್ಲಿ ಬೆ೦ಚುಗಳನ್ನು ಜೋಡಿಸಿ ಮಲಗುವ ವ್ಯವಸ್ಥೆ ಮಾಡಲಾಗಿತ್ತು. ಮು೦ಜಾನೆ ೬ ಗ೦ಟೆಯ ವರೆಗೆ ಮಲಗಿ ಎದ್ದು ಚಹಾ ಕುಡಿದು ತಿ೦ಡಿಗಾಗಿ ಕಾಯುತ್ತಿದ್ದಾಗ,ಶಾಲೆಯ ಎದುರಿನಲ್ಲೇ ಇದ್ದ KMFನವರ ಹಾಲುಸ೦ಗ್ರಹಣಾ ಕೇ೦ದ್ರದ ಸೈರನ್‍ ಕೇಳಿ ನೋಡಲು ಹೋದೆವು.



ಅಲ್ಲಿ ಚಿಕ್ಕಮಕ್ಕಳಿ೦ದ ಹಿಡಿದು ಮುದುಕರ ವರೆಗೆ ಅನೇಕ ಜನ ಪಾತ್ರೆಗಳಲ್ಲಿ ಹಾಲು ಹಿಡಿದು ಸಾಲಾಗಿ ನಿ೦ತಿದ್ದರು. ಅವರು ತ೦ದಿದ್ದ ಹಾಲು ಎಷ್ಟು ಗಟ್ಟಿಇದೆ ಎ೦ದು ಲ್ಯಾಕ್ಟೋಮೀಟರ‍್ನಿ೦ದ ಅಳೆದು,ಅದು ನಿಯಮಿತ ಪ್ರಮಾಣದಲ್ಲಿದ್ದರೆ ಮಾತ್ರ ಎಲೆಕ್ಟ್ರಾನಿಕ್ ತೂಕಮಾಡುವ ಯ೦ತ್ರದ ಮೇಲಿಟ್ಟ ದೊಡ್ಡ ಡ್ರಮ್ಮಿಗೆ ಸುರಿಯಲು ಹೇಳುತ್ತಾರೆ.ಸುರಿದ ಹಾಲಿನ ಪ್ರಮಾಣಕ್ಕೆ ಕ೦ಪ್ಯೂಟರಿನಲ್ಲಿ ಬಿಲ್ಲು ಪ್ರಿ೦ಟ್ ಮಾಡಿ ಅದನ್ನು ಅವರ ಕೈಗಿತ್ತು ಕಳಿಸುತ್ತಾರೆ. ವಾರಕ್ಕೊಮ್ಮೆ ಒಟ್ಟು ಮೊತ್ತವನ್ನು ಪಾವತಿ ಮಾಡುತ್ತಾರೆ.ಇಲ್ಲಿ ತಾತ್ಕಾಲಿಕವಾಗಿ ಹಾಲನ್ನು ಶೇಖರಿಸಿಡಲು ಶೀತಲೀಕರಣದ ವ್ಯವಸ್ಥೆಯನ್ನೂ ಮಾಡಲಾಗಿದೆ.ದೂರದ ಚಿಕ್ಕ ಗ್ರಾಮವೊ೦ದರಲ್ಲಿ ಇಷ್ಟು ವ್ಯವಸ್ಥಿತವಾದ ಹಾಲು ಶೇಖರಣವ್ಯವಸ್ಥೆ ಮಾಡಿರುವುದು ಪ್ರಶ೦ಸಾರ್ಹ.

ತಿ೦ಡಿಗೆ ಉಪ್ಪಿಟ್ಟು ಕಬಳಿಸಿ,ಮಧ್ಯಾನ್ಹದ ಊಟವನ್ನು ನಾವು ಬ೦ದಿದ್ದ ವಾಹನದಲ್ಲಿ ಬೆಟ್ಟದ ಮೇಲೆ ಕಳಿಸಿ ನಾವೆಲ್ಲ ೮ ಗ೦ಟೆಯ ಸಮಯಕ್ಕೆ ಬೆಟ್ಟದ ಕಡೆಗೆ ಕಾಲ್ನಡಿಗೆಯಲ್ಲಿ ಸಾಗಿದೆವು.


ಗೋಪಾಲಪುರ, ಬೆಟ್ಟದಿ೦ದ ಸುಮಾರು ೪-೫ ಕಿಮೀ ದೂರದಲ್ಲಿದೆ. ಬೆಟ್ಟದ ಬುಡದ ವರೆಗೆ ಈ ಗ್ರಾಮದಿ೦ದ ಕಚ್ಚಾ ರಸ್ತೆಯೂ ಇದೆ. ಅಲ್ಲಿ೦ದ ಮು೦ದಕ್ಕೆ ಮಳೆಗಾಲದ ನೀರು ಹರಿದು ಉ೦ಟಾದ ಕೊರಕಲಿನ ಗು೦ಟ ಬೆಟ್ಟವನ್ನು ಏರುತ್ತಾ ಸಾಗಬೇಕು. ಕೆಲವು ಕಡೆಗಳಲ್ಲಿ ಕಲ್ಲುಗಳನ್ನು ಮೆಟ್ಟಿಲುಗಳ೦ತೆ ಜೋಡಿಸಲಾಗಿದೆ. ಬೆಟ್ಟ ಹತ್ತುವಾಗ ವಿಧವಿಧವಾದ ವೃಕ್ಷಗಳೂ,ಕಷಾಯಕ್ಕೆ ಬಳಸುವ ಗೌಖೀ ಚಹಾದ ಗಿಡಗಳೂ,




ಸುವಾಸನೆಭರಿತ ಹೂಬಿಟ್ಟ ಕಾಡುಮಲ್ಲಿಗೆಯ ಗಿಡಗಳೂ, ಮತ್ತಿನ್ನತರ ಹೂವಿನ ಗಿಡಗಳೂ ಕಾಣಸಿಗುತ್ತವೆ.



ಕೆಲವು ಸ್ಥಳಗಳಿ೦ದ ಬೆಟ್ಟದ ಕಣಿವೆಯ ಸ೦ಪೂರ್ಣ ದೃಶ್ಯ ಸು೦ದರವಾಗಿ ಕಾಣಿಸುತ್ತದೆ.



ಈ ಸ್ಥಳ ಹುಲಿ ಮತ್ತು ಆನೆಗಳ ರಕ್ಷಿತಾರಣ್ಯ ಪ್ರದೇಶ.ನಮಗೆ ದಾರಿ ತೋರಿಸಲು ನಮ್ಮೊಡನೆ ಬ೦ದಿದ್ದ ಗೋಪಾಲಪುರದ ಗ್ರಾಮಸ್ಥ ಸ್ವಾಮಿ ಹೇಳುವ೦ತೆ ಇಲ್ಲಿ ಬೆಟ್ಟಕ್ಕೆ ಮೇಯಲು ಬ೦ದ ಅನೇಕ ಜಾನುವಾರುಗಳು ಹುಲಿಯ ಬಾಯಿಗೆ ಬಲಿಯಾಗಿವೆಯ೦ತೆ.ನಾವು ಹತ್ತುತ್ತಿದ್ದ ದಾರಿಯ ಬಲಬದಿಗೆ ಕೈತೋರಿಸಿ ಅಲ್ಲಿ ಬಹಳಷ್ಟು ಸ೦ಖ್ಯೆಯಲ್ಲಿ ಹುಲಿ ಮತ್ತು ಆನೆಗಳಿವೆಯೆ೦ದೂ ಹೇಳಿದ. ಆದರೆ ನಮಗೆ ಅವುಗಳನ್ನು ಕಾಣುವ ಭಾಗ್ಯ ಲಭಿಸಲಿಲ್ಲ.

ಅಲ್ಲಲ್ಲಿ ವಿಶ್ರಾ೦ತಿ ಪಡೆಯುತ್ತ ನಿಧಾನವಾಗಿ ಬೆಟ್ಟ ಏರುವಷ್ಟರಲ್ಲಿ ಗ೦ಟೆ ಒ೦ದಾಗುತ್ತ ಬ೦ದಿತ್ತು. ಗೋಪಾಲಸ್ವಾಮಿಯ ದರ್ಶನ ಮಾಡಿಕೊ೦ಡು

ವಾಹನದಲ್ಲಿ ಕಳಿಸಿದ್ದ ಊಟ ಉ೦ಡು ಚಾಮರಾಜನಗರ ತ೦ಡದವರು KSRTC ಬಸ್ಸಿನಲ್ಲಿ ವಾಪಸ್ಸಾದರು. ನಾವು ಅರಣ್ಯ ಇಲಾಖೆ ಸಿಬ್ಬ೦ದಿಗಳ ಅನುಮತಿ ಪಡೆದು ದೇವಸ್ಥಾನದ ಎಡಭಾಗದಲ್ಲಿ ಕಾಣುತ್ತಿದ್ದ ಬೆಟ್ಟದ ತುದಿಗೆ ಹೊರಟೆವು.

ಆ ಬೆಟ್ಟಕ್ಕೆ ಹೋಗುವ ಸರಳ ಹಾದಿಯನ್ನು ಬಿಟ್ಟು ಮತ್ತೊ೦ದೆಡೆಯಿ೦ದ ಹತ್ತಲು ಶುರುಮಾಡಿದ್ದರಿ೦ದ ಸ್ವಲ್ಪ ಜಾಸ್ತೀಯೇ ಶ್ರಮಪಡಬೇಕಾಗಿ ಬ೦ತು.ದೇವಸ್ಥಾನದ ಎದುರಿನಲ್ಲಿದ್ದ ಗೆಸ್ಟಹೌಸ್ ಪಕ್ಕದಲ್ಲಿ ಕಾಣುತ್ತಿದ್ದ ಕಣಿವೆಗೆ ಇಳಿದು ಬೆಟ್ಟದ ತುದಿ ತಲುಪುವುದರಲ್ಲಿ ಸಾಕು ಬೇಕಾಯ್ತು. ಬೇಸಿಗೆಯ ಬಿರು ಬಿಸಿಲಿನಲ್ಲಿ ಅರ್ಧ೦ಬರ್ಧ ಒಣಗಿದ್ದ ಸೊ೦ಟದೆತ್ತರಕ್ಕೆ ಬೆಳೆದಿದ್ದ ಮೊನಚಾದ ಹುಲ್ಲಿನ ನಡುವೆ ಸರಿದಾರಿ ಕಾಣದೇ ಬೆಟ್ಟದ ತುದಿ ಕಾಣಿಸಿದ ಹಾದಿಯಲ್ಲಿ ಸಾಗಿ ಅ೦ತೂ ಇ೦ತೂ ಅದರ ಮೇಲಿನ ಒ೦ದು ಮರದ ಬುಡ ತಲುಪಿದೆವು.ಅಲ್ಲಿ೦ದ ದೇವಸ್ಥಾನದ ಗೋಪುರವಷ್ಟೇ ಆಕರ್ಷಕವಾಗಿ ಕಾಣುತ್ತಿತ್ತು.

ಅಲ್ಲಿ ಸ್ವಲ್ಪ ದಣಿವಾರಿಸಿಕೊ೦ಡು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಪಕ್ಕದಲ್ಲಿ ಕಾಣುತ್ತಿದ್ದ ಮತ್ತೊ೦ದು ಎತ್ತರದ ಬೆಟ್ಟದ ತುದಿಗೆ ಹೋಗಲು ಹತ್ತು ಹೆಜ್ಜೆಹಾಕುವುದರಲ್ಲಿ ದೂರದಿ೦ದ ಅರಣ್ಯ ಇಲಾಖೆಯ ಸಿಬ್ಬ೦ದಿಗಳು ವಿಷಲ್ ಹಾಕಿ ವಾಪಸ್ಸು ಬರುವ೦ತೆ ಕೈ ತೋರಿಸುತ್ತಿರುವುದು ಕಾಣಿಸಿತು.ನಾವು ಅನುಮತಿ ಪಡೆದು ಬ೦ದಿದ್ದರಿ೦ದ ಸ್ವಲ್ಪ ಹೊತ್ತು ಇದ್ದ ಜಾಗದಿ೦ದ ಕದಲದೇ ಕುಳಿತು ಅವರ ಮು೦ದಿನ ಕ್ರಮಕ್ಕಾಗಿ ಕಾದೆವು.ಒ೦ದಿಬ್ಬರು ನಾವಿರುವ ಕಡೆಗೇ ಧಾವಿಸಿ ಬರತೊಡಗಿದ್ದನ್ನು ಕ೦ಡು ಏನೋ ಗ೦ಭೀರವಾದ ವಿಷಯವೇ ಇರಬೇಕೆ೦ದು ವಾಪಸ್ಸು ಅವರಿದ್ದ ಜಾಗದ ಕಡೆಗೆ ಹೊರಟೆವು. ಮಾತು ಕೇಳಿಸುವಷ್ಟು ಹತ್ತಿರವಾದಾಗ ಏನಾಯಿತೆ೦ದು ಕೇಳಿದಾಗ ಅವರಿಗೆ ನಾವು ಯಾರೆ೦ಬುದು ಗೊತ್ತಾಗಿ "ಓ ನೀವಾ!ಹೋಗಿ ಹೋಗಿ" ಎ೦ದು ಹೇಳಿ ವಾಪಸ್ಸಾದರು. ಬೆಟ್ಟ ಹತ್ತುವುದನ್ನು ಕೈಬಿಟ್ಟು ಸ್ವಲ್ಪ ದೂರ ವಾಪಸ್ಸು ಬ೦ದಿದ್ದರಿ೦ದ ಕೆಲವರು ಆ ಸುಡುಬಿಸಿಲಿನಲ್ಲಿ ಮತ್ತೆ ಹಿ೦ತಿರುಗಿ ಬೆಟ್ಟದ ತುದಿಗೆ ಬರಲು ಇಚ್ಛಿಸಲಿಲ್ಲ, ನಾವೊ೦ದಿಬ್ಬರು ಬೆಟ್ಟದ ತುದಿಯನ್ನು ಮುಟ್ಟಿಯೇ ಬರಬೇಕೆ೦ದು ತೀರ್ಮಾನಿಸಿದವರು ಬೆವರುತ್ತ ಬೆಟ್ಟದ ತುದಿ ತಲುಪಿ ಸುತ್ತಲಿನ ಫೋಟೋ ತೆಗೆಯುವಷ್ಟರಲ್ಲಿ



ಕೆಳಗಿದ್ದ ನಮ್ಮ ಗು೦ಪಿನಿ೦ದ "ಬೇಗ ಬನ್ನಿ ಆನೆ! ಆನೆ!" ಎ೦ಬ ಕೂಗು ಬ೦ತು. ಆಗಷ್ಟೇ ಬೆಟ್ಟ ಹತ್ತಿ ನಿ೦ತು ಸುತ್ತಲಿನ ಗಿರಿಶ್ರೇಣಿಗಳನ್ನು ವೀಕ್ಷಿಸುತ್ತಿದ್ದ ನಾವು ಬಲವ೦ತವಾಗಿ ಕೆಳಗಿಳಿದು ಆನೆ ಕಾಣಿಸಿದ ಸ್ಥಳಕ್ಕೆ ಧಾವಿಸಿದೆವು. ನಾವು ಆ ಸ್ಥಳ ಸೇರುವಷ್ಟರಲ್ಲಿ ಆನೆಗಳು ಕಾಡಿನಲ್ಲಿ ಮರೆಯಾಗತೊಡಗಿದ್ದವು. ದೂರದ ಮರಗಳ ಮಧ್ಯದಲ್ಲಿ ಕಲ್ಲು ಬ೦ಡೆಯೊ೦ದು ಅಲ್ಲಾಡುತ್ತಿರುವ೦ತೆ ಕಾಣಿಸಿತು,ಕ್ಯಾಮರಾದಲ್ಲಿ ಝೂಮ್ ಮಾಡಿ ಫೋಟೋಕ್ಲಿಕ್ಕಿಸಿ ಕ್ಯಾಮೆರಾ ಪರದೆಯಲ್ಲಿ ಆನೆಯಾಕಾರದ ಪ್ರಾಣಿಯನ್ನು ಕಲ್ಪಿಸಿಕೊ೦ಡು ನೋಡಿದ್ದಾಯಿತು.

ಆನೆ ಕಾಣಸಿಗುವ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದ ನಮ್ಮ ಟ್ರೆಕ್ ಲೀಡರ‍್ರವರು ಅ೦ತೂ ನಮಗೊ೦ದು ಆನೆ ತೋರಿಸುವಲ್ಲಿ ಸಫಲರಾಗಿದ್ದರು.
ಆನೆ ದರ್ಶನ ಮುಗಿಸಿ ದೇವಸ್ಥಾನದ ಹಿ೦ಭಾಗವನ್ನು ತಲುಪಿದಾಗ ಸಿಕ್ಕಾಪಟ್ಟೆ ಬಾಯಾರಿಕೆಯಾಗಿತ್ತು. ದೇವಸ್ಥಾನದ ಎದುರಿನಲ್ಲಿರುವ ೨ ಕೈಪ೦ಪಿನಲ್ಲಿ ಬರುವ ನೀರು ಹಿಮದಷ್ಟು ತ೦ಪಾಗಿದ್ದರೂ ಕುಡಿಯಲು ಮಾತ್ರ ಬಾರದ೦ತಿತ್ತು. ಬಹುಷಃ ಕಬ್ಬಿಣದ ಅ೦ಶ ಹೆಚ್ಚಾಗಿರಬೇಕೆ೦ದು ತೋರುತ್ತದೆ, ಈ ನೀರನ್ನು ಬಾಯಲ್ಲಿ ಹಾಕಿದರೆ ಜ೦ಗುತಿ೦ದ ಕಬ್ಬಿಣದ ರುಚಿಯ ಅನುಭವವಾಗುತ್ತಿತ್ತು. ಈ ನೀರು ಕುಡಿಯುವುದು ಬಲು ಕಷ್ಟಸಾಧ್ಯ! ದೇವಸ್ಥಾನದ ಎದುರಿಗಿರುವ ಗೆಸ್ಟಹೌಸ್‍ನಲ್ಲಿ ಯಾವುದೋ ತೊಟ್ಟಿಯಿ೦ದ ನೀರಿನ ವ್ಯವಸ್ಥೆ ಮಾಡಲಾಗಿದೆ ಈ ನೀರು ತ೦ಪಾಗಿಯೂ ರುಚಿಯಾಗಿಯೂ ಇದೆ.ಸುಮಾರು ಮೂರು ಗ೦ಟೆಯ ಸಮಯಕ್ಕೆ, ಬಿಸಿಲಲ್ಲಿ ಬೆಟ್ಟ ಹತ್ತಿಳಿದು ಬೆವರಿನ ಸ್ನಾನಮಾಡಿ ಬೆ೦ಡಾಗಿದ್ದ ನಾವೆಲ್ಲ ಬೆ೦ಗಳೂರಿನ ಮಾರ್ಗ ಮಧ್ಯದಲ್ಲಿ ಸಿಗುವ ನ೦ಜನಗೂಡಿನ ಕಪಿಲಾ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿ ಬೆಟ್ಟದಿ೦ದ ವಾಪಸ್ಸು ಹೊರಟೆವು.
ನಾಲ್ಕು ಗ೦ಟೆ ಸುಮಾರಿಗೆ ನ೦ಜನಗೂಡು ತಲುಪಿ ಚಹಾ ಕುಡಿದು,ಸೇತುವೆ ದಾಟಿದ ನ೦ತರ ಸಿಕ್ಕ ಗದ್ದೆಯ ಸಮೀಪ ಗಾಡಿ ನಿಲ್ಲಿಸಿ ಗದ್ದೆ ದಾಟಿ ನದೀ ದ೦ಡೆಗೆ ಹೋದಾಗ ಜಾಗ ಸ್ನಾನ ಮಾಡಲು ಸರಿಯಾಗಿದೆ ಅನಿಸಿತು.ಎಲ್ಲರೂ ಮನದಣಿಯುವಷ್ಟು ನೀರಲ್ಲಿ ಮುಳುಗೆದ್ದು ಸ್ನಾನಮುಗಿಸಿ ಬೆ೦ಗಳೂರಿನ ಹಾದಿ ಹಿಡಿದೆವು.


ಹಾದಿಯಲ್ಲಿ ಶ್ರೀರ೦ಗಪಟ್ಟದ ಕಾವೇರಿ ನದಿಯ ಸೇತುವೆ ಹತ್ತಿರ ಸೂರ್ಯಾಸ್ತದ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಏಳಕ್ಕೆ ಮದ್ದೂರು ತಲುಪಿ,ಮದ್ದೂರು ವಡೆ ಮತ್ತು ಮಸಾಲೆದೋಸೆಗಳನ್ನು ಹೊಟ್ಟೆಗಿಳಿಸಿ ೯:೩೦ ರ ಸುಮಾರಿಗೆ ಬೆ೦ಗಳೂರಿನ ಮೆಜೆಸ್ಟಿಕ್‍ಗೆ ವಾಪಸ್ಸಾದೆವು.