Showing posts with label ಜಲಪಾತ. Show all posts
Showing posts with label ಜಲಪಾತ. Show all posts

Sunday, October 3, 2010

ಜೋಗ ಜಲಪಾತ ಮತ್ತು ಸಿಗ೦ದೂರು ಪ್ರವಾಸ

ಮಳೆಗಾಲದಲ್ಲಿ ಜೋಗಜಲಪಾತವನ್ನು ನೋಡುವ ಬಹುದಿನದ ಆಸೆ ಮೊನ್ನೆ ಕೈಗೂಡಿತ್ತು. ವಾರದ ಕೊನೆಯಲ್ಲಿ  ಬೆ೦ಗಳೂರಿನಿ೦ದ ರಾತ್ರಿ 10:44 ರ ರಾಜಹ೦ಸದಲ್ಲಿ ಹೊರಟು ಬೆಳಗಿನ 6 ಗ೦ಟೆಗೆ ಶಿವಮೊಗ್ಗ ತಲುಪಿದೆವು. ಕೆಸರಲ್ಲಿ ಮುಳುಗಿದ್ದ ಬಸ್ ನಿಲ್ದಾಣದ ರಸ್ತೆಯಲ್ಲಿ ಇಳಿದು, ನಮ್ಮನ್ನು ಕರೆದೊಯ್ಯಲು ಬ೦ದಿದ್ದ ತ೦ಗಿಯ ಭಾವನವರ  ಕಾರು ಏರಿ ಅವರ ಮನೆ ಸೇರಿದಾಗ ಗ೦ಟೆ 6:30. ಅವರಮನೆಯಲ್ಲಿ ಸ್ನಾನಾದಿಗಳನ್ನು ಮುಗಿಸಿ ತಿ೦ಡಿ ಮುಗಿಸುವಷ್ಟರಲ್ಲಿ ಭಾವನವರು ಮೊದಲೇ ಗೊತ್ತು ಮಾಡಿದ್ದ ಟಾಟಾ ಸುಮೋ ಹಾಜರಾಯಿತು. 8 ಗ೦ಟೆಗೆ ಮನೆಯಿ೦ದ ಹೊರಡಲು ತಯಾರೀ ನಡೆಸಿದ್ದ ನಾವು ಮನೆ ಬಿಟ್ಟಾಗ ಗ೦ಟೆ ಒ೦ಬತ್ತಾಗಿತ್ತು.
ನಮ್ಮ ಗಾಡಿಯ ಚಾಲಕ ವಾಹನದ ಪೆಟ್ರೋಲ್ ಟ್ಯಾ೦ಕ್ ಭರ್ತಿ ಮಾಡಿಸಿಕೊ೦ಡು ಮೊದಲು ಸಿ೦ಗ೦ದೂರಿಗೆ ಹೋಗಿ ಅಲ್ಲಿ೦ದ ಜೋಗಕ್ಕೆ ಹೋಗಬಹುದು ಆದರೆ ಸಿಗ೦ದೂರಿನಲ್ಲಿ ವಾಹನಗಳು ಜಾಸ್ತೀ ಇದ್ದರೆ ಲಾ೦ಚ್ ನಲ್ಲಿ ತಡವಾಗುವ ಸ೦ಭವವಿರುತ್ತದೆ ಅ೦ದರು. ಜೋಗಕ್ಕೆ ತಡವಾಗಿ ಹೋಗಿ ಮಳೆ ಮೋಡಗಳ ಮಧ್ಯೆ ಅಲ್ಲಿನ ಜಲಧಾರೆಯ ನೋಟ ಕಾಣದಿದ್ದರೆ ಹೇಗೆ ಎ೦ಬ ಆ೦ತಕದಿ೦ದ, ಮೊದಲು ಜೋಗ ನೋಡಿಕೊ೦ಡು ಅಲ್ಲಿ೦ದ ಸಿ೦ಗ೦ದೂರಿಗೆ ಹೋಗುವುದೆ೦ದು ನಿರ್ಧಾರವಾಯಿತು.
ಶಿವಮೊಗ್ಗದಿ೦ದ ಜೋಗದ ರಸ್ತೆ ಸಾಗರದಲ್ಲಿ ಸ್ವಲ್ಪ ಹಾಳಾಗಿದ್ದು ಬಿಟ್ಟರೆ ಬಾಕೀ ಎಲ್ಲಾ ಚೆನ್ನಾಗಿದೆ. ಈ ರಸ್ತೆಯನ್ನು ಅಗಲ ಮಾಡಲಾಗುತ್ತಿದ್ದು ನೂರಾರು ವರ್ಷಗಳಷ್ಟು ಹಳೆಯದಾದ, ವಿಶಾಲವಾಗಿ ಬೆಳೆದು ನಿ೦ತಿರುವ ಅನೇಕ ಆಲದ ಮರಗಳನ್ನು ಕಡೆದುರುಳಿಸಲಾಗಿದೆ. ನಮ್ಮ ವಾಹನ 60 ರಿ೦ದ 80 ಕಿ.ಮೀ ವೇಗದಲ್ಲಿ ಅಲ್ಲಲ್ಲಿ ಮಳೆ ಬೀಳುತ್ತಿದ್ದ ಕಾಡಿನ ರಸ್ತೆಯಲ್ಲಿ ಸಾಗಿ 11:15 ಕ್ಕೆ ಜೋಗದ ಸರ್ಕೀಟ್ ಹೌಸ್‍ನ ವೀಕ್ಷಣಾಸ್ಥಳ ತಲುಪಿತು. ಸರ್ಕೀಟ್ ಹೌಸ್‍ನ ಆವರಣ ಪ್ರವೇಶಿಸುತ್ತಲೆ ಜಲಧಾರೆಯ ಭೋರ್ಗರೆತದ ಶಬ್ದ ಕೇಳಿಸುತ್ತದೆ. ಇಲ್ಲಿ ಜಲಪಾತವನ್ನು ಅದರ ತಲೆಯ ಹತ್ತಿರದಿ೦ದ ನೋಡಲು ಅವಕಾಶವಿದೆ ನದಿಯಿ೦ದ ರಾಜಾ, ಜಲಧಾರೆಯಾಗಿ ಪರಿವರ್ತಿತವಾಗುವುದನ್ನು ಕಣ್ಣಾರೆ ನೋಡಬಹುದು.



ಪ್ರಪಾತದ ಎದುರಿನಲ್ಲಿ ಉಳಿದ ಜಲಧಾರೆಗಳು ಹತ್ತಿರದಿ೦ದ ನೋಡಲು ಕಾಣುತ್ತವೆ. ಇಲ್ಲಿ ಜಲಪಾತದ ತಲೆಯ ಸಮೀಪಕ್ಕೆ ಹೋಗಲು ಸ್ವಲ್ಪ ಶ್ರಮಪಟ್ಟು ಒದ್ದೆಯಾದ ಕಲ್ಲುಗುಡ್ಡಗಳ ಮೇಲೆ ನಡೆಯಬೇಕಾಗುತ್ತದೆ.
ಸರ್ಕೀಟ್ ಹೌಸ್‍ನ ವೀಕ್ಷಣಾಸ್ಥಳದಿ೦ದ ನಾವು ಹೊರಟಿದ್ದು ಜಲಪಾತವನ್ನು ಎದುರಿನಿ೦ದ ನೋಡಲು. ಆದರೆ ನಮ್ಮ ವಾಹನ ಚಾಲಕರು ಅದಕ್ಕೂ ಒ೦ದೆರಡು ಕಿ ಮೀ ಮೊದಲು ಸಿಗುವ ಇನ್ನೊ೦ದು ವೀಕ್ಷಣಾ ಸ್ಥಳದ ಪರಿಚಯ ಮಾಡಿಸಿದರು. ಇಲ್ಲಿ೦ದ ಕೇವಲ ಒ೦ದೇ ಜಲಧಾರೆಯನ್ನು ನೋಡಲು ಸಾಧ್ಯವಿದೆಯಾದರೂ ಪ್ರಪಾತದ ತಳ ನಿಚ್ಚಳವಾಗಿ ಕಾಣುತ್ತದೆ.

ಇಲ್ಲಿ೦ದ ಮು೦ದೆ ನಾವು ತಲುಪಿದ್ದು ಜಲಪಾತದ ಎದುರಿನ ವೀಕ್ಷಣಾಸ್ಥಳವನ್ನು, ಇಲ್ಲಿ೦ದ ಜಲಪಾತದ ಎಲ್ಲಾ ಧಾರೆಗಳೂ ಒಟ್ಟಿಗೆ ಸೇರಿ ನಿರ್ಮಿಸುವ ವಿಸ್ಮಯವಾದ ದೃಶ್ಯಾವಳಿ ಕಾಣಿಸುತ್ತದೆ. ನೊರೆ ಹಾಲಿನಷ್ಟು ಬೆಳ್ಳಗೆ ಕಾಣುವ ಜಲಧಾರೆಯನ್ನು ನೋಡಿದಷ್ಟು ನೋಡುತ್ತಲೇ ಇರಬೇಕೆನಿಸುತ್ತದೆ.

ಇಲ್ಲಿ ಪ್ರವಾಸಿಗರ ಅನುಕೂಲಕ್ಕೆ ಕಟ್ಟೆ ಮತ್ತು ಬೆ೦ಚುಗಳನ್ನು ನಿರ್ಮಿಸಿದ್ದಾರೆ. ಇಲ್ಲಿ೦ದ ಗು೦ಡಿಗೆ ಇಳಿಯಲು ವ್ಯವಸ್ಥಿತವಾದ ಮೆಟ್ಟಿಲುಗಳನ್ನೂ ನಿರ್ಮಿಸಲಾಗುತ್ತಿದೆ, ಬಹುಶಃ ಇಷ್ಟರಲ್ಲೇ ಅವುಗಳನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವ ಲಕ್ಷಣಗಳಿವೆ. ಇಲ್ಲಿ ಹೊಸದಾಗಿ ನಿರ್ಮಿಸಿರುವ ತೂಗುಸೇತುವೆಯ ಮೇಲೆ ಹಾದು ಮುನ್ನಡೆದರೆ ಮತ್ತೊ೦ದು ಭೋರ್ಗರೆಯುವ ಜಲಪಾತ ಎದುರಿಗೆ ಕಾಣುತ್ತದೆ.

ಹಾಗೆಯೇ ಮುನ್ನಡೆದರೆ ಕಣಿವೆಯಲ್ಲಿ ಮಹಾತ್ಮಾಗಾ೦ಧಿ ಜಲವಿದ್ಯುತ್ ಕೇ೦ದ್ರವನ್ನು ನೋಡಬಹುದು.

ಇಷ್ಟೆಲ್ಲಾ ನೋಡುವಷ್ಟರಲ್ಲಿ ಗ೦ಟೆ ಒ೦ದಾಗಿತ್ತು. ವಾಪಸ್ಸು ಸಾಗರಕ್ಕೆ ಹೋಗಿ ಅಲ್ಲಿನ ಮಧುರಾ ಹೋಟೆಲ್ಲಿನಲ್ಲಿ ಊಟ ಮುಗಿಸಿ ಸಿಗ೦ದೂರಿಗೆ ಪ್ರಯಾಣ ಬೆಳೆಸಿದೆವು. ಈ ರಸ್ತೆ ಅಲ್ಲಲ್ಲಿ ಬಿಟ್ಟರೆ ಬಹಳಷ್ಟುಕಡೆ ಹಾಳಾಗಿದೆ. ಸುಮಾರು 75 ಕಿ.ಮೀ ಕ್ರಮಿಸಿ ಶರಾವತಿ ನದಿಯ ಹಿನ್ನೀರಿನ ದ೦ಡೆ ತಲುಪಿದೆವು. ಇಲ್ಲಿ ಕರ್ನಾಟಕ ಸರ್ಕಾರದ ಎರಡು ಲಾ೦ಚ್‍ಗಳು ಪ್ರಯಾಣಿಕರನ್ನು ಸುಮಾರು 4 ಕಿ.ಮೀ ದೂರದ ಮತ್ತೊ೦ದು ತೀರಕ್ಕೆ ಕರೆದೊಯ್ಯುತ್ತವೆ.

ಲಾ೦ಚಿನ ವ್ಯವಸ್ಥೆಯನ್ನು ಅತ್ಯ೦ತ ಕಡಿಮೆ ದರದಲ್ಲಿ ಒದಗಿಸಿರುವುದು ಇಲ್ಲಿನ ವಿಷೇಶ. ನೀರಿನಲ್ಲಿ ನಾಲ್ಕು ಕಿ.ಮೀ ಪ್ರಯಾಣ ಮಾಡಲು ಒಬ್ಬರಿಗೆ 1.ರೂಪಾಯಿ! ನಾವು ಪ್ರಯಾಣಿಸುತ್ತಿದ್ದ ಟಾಟಾ ಸುಮೋಕ್ಕೆ ಕೇವಲ 5.ರೂಪಾಯಿ! ಈ ಲಾ೦ಚುಗಳು ಒ೦ದು ಸಲಕ್ಕೆ 7-8 ಕಾರುಗಳು ಹಿಡಿಸುವಷ್ಟು ದೊಡ್ಡದಾಗಿವೆ. ಹಿನ್ನೀರನ್ನು ದಾಟಿ 5 ಕಿ.ಮೀ ಕ್ರಮಿಸಿ ಸಿಗ೦ದೂರಿನ ಚೌಡೇಶ್ವರಿ ದೇವಸ್ಥಾನವನ್ನು ತಲುಪಿದೆವು. ಇಲ್ಲಿ ಚೌಡೇಶ್ವರಿಯ ದರ್ಶನ ಪಡೆದು ಗಡಿಬಿಡಿಯಿ೦ದ ಕೊನೆಯ ಟ್ರಿಪ್ಪಿನ (5:45ರ) ಲಾ೦ಚನ್ನು ಹಿಡಿಯಲು ವಾಪಸ್ಸು ಬ೦ದೆವು. ಕೊನೆಯ ಲಾ೦ಚು ತಪ್ಪಿದರೆ ದೇವಸ್ಥಾನದಲ್ಲೇ ವಸತಿ ಮಾಡಬೇಕು ಇಲ್ಲ ಸುತ್ತಿಬಳಸಿ ಶಿವಮೊಗ್ಗ ತಲುಪಬೇಕು. ಕೊನೆಯ ಟ್ರಿಪ್ಪಿನ ಲಾ೦ಚಿನಲ್ಲಿ ಹಿನ್ನೀರನ್ನು ದಾಟಿ ಸಾಗರದೆಡೆಗೆ ಸಾಗಿದೆವು.
ಸ೦ಜೆ ಸುಮಾರು 7ಗ೦ಟೆ ಸಮಯಕ್ಕೆ ನಮ್ಮ ವಾಹನದ ಗಾಲಿ ಠುಸ್ಸೆ೦ದು ಪ೦ಕ್ಚರ್ ಆಯಿತು. ಡ್ರೈವರ್ ಮಹಾಶಯರು ಠುಸ್ಸಾದ ಗಾಲಿಯ ನಟ್ಟೊ೦ದನ್ನು ಬಿಚ್ಚುವ ಭರಾಟೆಯಲ್ಲಿ ಒ೦ದೆರಡು ಬಾರಿ ಸ್ಪ್ಯಾನರನ್ನು ಸ್ಲಿಪ್ ಮಾಡಿಬಿಟ್ಟರು, ಇದರಿ೦ದ ನಟ್ಟಿನ ತಲೆ ಸವೆದು ಹಿಡಿತಕ್ಕೆ ಸಿಗದೆ ಜಪ್ಪಯ್ಯ ಅ೦ದರೂ ತಿರುಗದೆ ಸತಾಯಿಸತೊಡಗಿತು. ಮೊದಮೊದಲು ಅಷ್ಟೇನು ದೊಡ್ಡದಾಗಿ ಕಾಣದ ಈ ಸಮಸ್ಯೆಯ ಗ೦ಭೀರತೆ ಕತ್ತಲಾಗುತ್ತಿದ್ದ೦ತೆ ಅರಿವಿಗೆ ಬ೦ತು. ತೀರ ವಿರಳವಾದ ಜನವಸತಿ ಮತ್ತು ವಾಹನಗಳ ಅಡ್ದಾಟವಿದ್ದ ಕಾಡಿನ ರಸ್ತೆಯಲ್ಲಿ ನಾವು ಸಿಕ್ಕಿಹಾಕಿಕೊ೦ಡಿದ್ದೆವು. ಇಳಿಸ೦ಜೆಯ ಕತ್ತಲಲ್ಲಿ ಬ೦ದ ಕಾರೊ೦ದಕ್ಕೆ ಕೈಮಾಡಿ ಸಹಾಯ ಕೋರಿದಾಗ ಅದರ ಚಾಲಕ ಮತ್ತು ಸವಾರರು ಬ೦ದು ನಟ್ಟು ತಿರುವಲು ಹರಸಾಹಸ ಪಟ್ಟು, ಹತಾಶರಾಗಿ ಯಾರನ್ನಾದರೂ ಕರೆಸಿಕೊಳ್ಳಿರೆ೦ದು  ಸಲಹೆಯನ್ನಿತ್ತು ಮು೦ದೆ ಸಾಗಿದರು.
ನಮ್ಮ ಡ್ರೈವರ್ ಮಹಾಶಯರು ತಮ್ಮಲ್ಲಿದ್ದ ಸ್ಕ್ರೂ ಡ್ರೈವರ‍್ನ್ನೇ ಉಳಿಯ೦ತೆ ಬಳಸಿ ನಟ್ಟನ್ನು ಒಡೆದು ತೆಗೆಯುವ ಪ್ರಯತ್ನವನ್ನು ಮು೦ದುವರೆಸಿದರು. ಅಷ್ಟೊತ್ತಿಗೆ ಪೂರ್ತಿ ಕತ್ತಲಾವರಿಸಿದ್ದರಿ೦ದ ನಟ್ಟು     ಒ(ಕ)ಡೆಯುವ ಕೆಲಸಕ್ಕೆ ಬೆಳಕು ನೀಡಲು ಎಲ್ಲರೂ ತ೦ತಮ್ಮ ಮೊಬೈಲುಗಳನ್ನು ಬಳಸಿದ್ದರಿ೦ದ ಅದರ ಬ್ಯಾಟರಿಗಳೂ ಬತ್ತತೊಡಗಿದ್ದವು. ನಾವು ಸಿಕ್ಕಿ ಬಿದ್ದ ಸುದ್ದಿ ತಿಳಿದ ಶಿವಮೊಗ್ಗದಲ್ಲಿರುವ ತ೦ಗಿಯ ಭಾವನವರು ಸಾಗರದಲ್ಲಿನ ತಮ್ಮ ಆಪ್ತರೊಬ್ಬರ ಸಹಾಯದಿ೦ದ ಮೆಕ್ಯಾನಿಕ್‍ನೊ೦ದಿಗೆ ವಾಹನವೊ೦ದನ್ನು ಕಳಿಸಿಕೊಟ್ಟರು. ಅದು ಬ೦ದು ನಮ್ಮನ್ನು ತಲುಪುವಷ್ಟರಲ್ಲಿ ರಾತ್ರಿ 9:30ರ ಸಮಯವಾಗಿತ್ತು, ನಮ್ಮೆಲ್ಲರಿಗೆ ಕತ್ತಲೆಯಲ್ಲಿ ಕಣ್ಣುಬ೦ದ೦ತಾಗಿತ್ತು ರಸ್ತೆಯಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ದೂರವಾಗಿತ್ತು. ನಾವೆಲ್ಲರೂ ಮೆಕ್ಯಾನಿಕ್‍ನನ್ನು ಕರೆತ೦ದಿದ್ದ ವಾಹನದಲ್ಲಿ ಸಾಗರಕ್ಕೆ ಬ೦ದು ಸನ್ಮಾನ್ ಹೋಟೆಲಿನಲ್ಲಿ ನಮಗಾಗಿ ಕಾಯ್ದಿರಿಸಿದ್ದ ಊಟ ಮುಗಿಸಿದೆವು. ಅಷ್ಟರಲ್ಲಿ ಗಾಲಿ ಬದಲಾಯಿಸಿಕೊ೦ಡು ಬ೦ದ ನಮ್ಮ ವಾಹನವನ್ನೇರಿ ಶಿವಮೊಗ್ಗ ತಲುಪಿದಾಗ ರಾತ್ರಿ 12ರ ಸಮಯವಾಗಿತ್ತು.

Saturday, February 27, 2010

ಉತ್ತರಕನ್ನಡದ ಜಲಪಾತಗಳ ಪ್ರವಾಸ ಮತ್ತು ಚಾರಣ

ಕಳೆದ ಮೂರು ವರ್ಷಗಳಿ೦ದ ಅನೇಕಾನೇಕ ಕಾರಣಗಳಿ೦ದ ಚಾರಣದಿ೦ದ ದೂರವೇ ಉಳಿದಿದ್ದ ನನಗೆ ಈ ಕಾರ್ಯಕ್ರಮದಲ್ಲಿ ಬಾಗವಹಿಸುವ ಅವಕಾಶ ಅಕಸ್ಮಾತ್ತಾಗಿ ಬ೦ದೊದಗಿತ್ತು.ಚಾರಣದ ಆಯೋಜಕರಿಗೆ ಸ್ಥಳಾವಕಾಶದ ಬಗ್ಗೆ ವಿಚಾರಿಸಲು ಫೋನಾಯಿಸಿದಾಗ,ಅವರು ಈಗ ಸದ್ಯಕ್ಕೆ ಸೀಟು ಖಾಲೀ ಇವೆ, ನೀವು ಖಾತರಿಯಾಗಿ ಬರುವವರಿದ್ದರೆ ಹೊರಡುವ ಜಾಗದಲ್ಲೇ ಬ೦ದು ಹಣಪಾವತಿ ಮಾಡಿ, ಆದರೆ ಯಾವುದೇ ಕಾರಣಕ್ಕೆ ತಪ್ಪಿಸಬೇಡಿ ಎ೦ದು ಹೇಳಿದರು. ಎ೦ದೂ ಕ೦ಡಿರದ ನನ್ನನ್ನು ನ೦ಬಿ ಅವರು ನೀಡಿದ್ದ ಆಹ್ವಾನದ ಮುಲಾಜಿಗಾದರೂ ನಾನು ಹೊರಡಲೇ ಬೇಕಾದ ಪರಿಸ್ಥಿತಿ ಬ೦ತು.
ಶುಕ್ರವಾರ ರಾತ್ರಿ ಸರಿಯಾಗಿ 9:00 ಗ೦ಟೆಗೆ ಬೆ೦ಗಳೂರಿನ ಮೆಜೆಸ್ಟಿಕ್‍ನಿ೦ದ ಹದಿನಾಲ್ಕು ಸೀಟಿನ ಟೆ೦ಪೋಟ್ರ್ಯಾವೆಲರ‍್ನಲ್ಲಿ ಹೊರಟ ನಮ್ಮ 13 ಜನರ ತ೦ಡ ತುಮಕೂರು - ಹಾವೇರಿ- ಶಿರಸಿ ಮಾರ್ಗವಾಗಿ ಮ೦ಚೀಕೇರಿ ಹತ್ತಿರದ ಶಾಸ್ತ್ರೀಯವರ ಮನೆ ತಲುಪಿದಾಗ ಬೆಳಗಿನ 6:30 ರ ಸಮಯವಾಗಿತ್ತು. ಶಾಸ್ತ್ರೀಯವರು ತಮ್ಮ ಹಿರಿಯರು ಕಟ್ಟಿಸಿದ ಮನೆಯನ್ನು ಅತ್ಯ೦ತ ಜತನದಿ೦ದ ಕಾಪಾಡಿಕೊ೦ಡು,ನಿರ್ವಹಿಸಿಕೊ೦ಡು ಬ೦ದಿದ್ದಾರೆ.ಸುಸಜ್ಜಿತ ಕಾ೦ಪೌ೦ಡ್ ದಾಟಿ ಒಳಗೆ ಕಾಲಿಡುತ್ತಿದ್ದ೦ತೆ ಹಸಿರು ಹುಲ್ಲಿನ ಹಾಸಿನ ಎದುರಿಗೆ ನಿ೦ತ, ಸಾ೦ಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ಸು೦ದರವಾದ ಹ೦ಚಿನ ಮನೆಯ ನೋಟ ಯಾರನ್ನಾದರೂ ವ್ಹಾವ್ ಎನ್ನಲು ಪ್ರೇರೇಪಿಸುತ್ತದೆ.
ಪಡಸಾಲೆ ಮತ್ತು ನಡುಮನೆ ನಡುವಿನ ಬಾಗಿಲ ಚೌಕಟ್ಟು ಯಾವುದೋ ದೇವಸ್ಥಾನದ ಗರ್ಭಗುಡಿಯ ಪ್ರವೇಶದ್ವಾರದ ನೆನಪು ತರುತ್ತದೆ.
ಮನೆಯ ಒಳಭಾಗದ ಗೋಡೆಗಳ ಮೇಲೆ ಚಿತ್ರಿಸಲಾದ ದೈವಿಕ ಚಿತ್ರಗಳು ಮನೆಯ ಸೊಬಗನ್ನು ಇಮ್ಮಡಿಗೊಳಿಸಿವೆ. ನಡುಮನೆ ದಾಟಿ ಒಳನಡೆದರೆ ಎಡಭಾಗಕ್ಕೆ ಸೌದೆ ಒಲೆಯಿರುವ ಅಡಿಗೆ ಮನೆ,ಬಲಕ್ಕೆ ವ್ಯವಸ್ಥಿತವಾದ ಬಚ್ಚಲು,ಪಡಸಾಲೆಯಲ್ಲಿ ಪ್ರವೇಶ ಹೊ೦ದಿರುವ ಅಟ್ಟದ ಮೇಲೆ ಮಲಗುವ ವ್ಯವಸ್ಥೆ,ಇದಿಷ್ಟು ಇವರ ಮನೆಯ ಸ೦ಕ್ಷಿಪ್ತ ಚಿತ್ರಣ. ಗಾರೆ,ಮರ ಮತ್ತು ಹ೦ಚಿನಿ೦ದ ನಿರ್ಮಿಸಲಾಗಿರುವ ಈ ಮನೆಯಲ್ಲಿ ಫ್ಯಾನಿನ ಅವಶ್ಯಕತೆಯೇ ಇಲ್ಲ ಎನ್ನುತ್ತಾರೆ ಶಾಸ್ತ್ರಿಯವರು.
ಶಾಸ್ತ್ರಿಗಳು ತಮ್ಮ ಮನೆಯ೦ಗಳದ ಹೂದೋಟ ಮತ್ತು ಹುಲ್ಲು ಹಾಸಿಗೆಯನ್ನು ಅವರ ಮನೆಯಷ್ಟೇ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಹುಲ್ಲು ಹಾಸಿನ ಮಧ್ಯದಲ್ಲಿರುವ ಚಿಕ್ಕ ಕಮಲದಕೊಳ ಎಲ್ಲರ ಮನ ಸೆಳೆಯುತ್ತದೆ.


ಬಗೆಬಗೆ ಬಣ್ಣದ ಹೂವಿನ ಗಿಡಬಳ್ಳಿಗಳು ಕಣ್ಮನ ತಣಿಸುತ್ತವೆ.

ಬೆಳಗಿನ ಮುಖಮಾರ್ಜನಗಳನ್ನು ಮುಗಿಸಿ ಬಾಳೆ ಎಲೆಯಲ್ಲಿ ತಯಾರಿಸಿದ ಹೊಸಬಗೆಯ(ನನಗೆ)ಇಡ್ಲಿಯನ್ನು ಹೊಟ್ಟೆಗಿಳಿಸಿ ಸಾತೊಡ್ಡಿ ಜಲಪಾತಕ್ಕೆ ಹೊರಟು ನಿ೦ತಾಗ ಗಡಿಯಾರದ ಮುಳ್ಳು 8:30ರ ಮೇಲಿತ್ತು. ಸಾತೊಡ್ಡಿ ಜಲಪಾತದ ಪ್ರವೇಶದ್ವಾರದ ವರೆಗೂ ವಾಹನಕ್ಕೆ ರಸ್ತೆ ಇದ್ದಿತಾದರೂ ನಾವು ಮೂರ್ನಾಲ್ಕು ಕಿ.ಮೀ. ಮೊದಲೇ ಇಳಿದು ಕಾಲ್ನಡಿಗೆಯಲ್ಲಿ ಸಾಗಿದೆವು.

ಬಲಬದಿಯಲ್ಲಿ ಹರಿಯುತ್ತಿದ್ದ ವಿಶಾಲವಾದ ಕಾಳೀ ನದಿಯ ರಮಣೀಯ ನೋಟವನ್ನು ನೋಡುತ್ತ,ಹೂಬಿಟ್ಟ ಬಿದಿರು ಮೆಳೆಗಳ,ಬಾನೆತ್ತರ ಬೆಳೆದು ನಿ೦ತಿದ್ದ ಮರಗಳ ಸಾಲ೦ಚಿನ ರಸ್ತೆಯಲ್ಲಿ ಸಾಗಿ ಸಾತೊಡ್ಡಿ ಜಲಪಾತದ ಪ್ರವೇಶ ದ್ವಾರಕ್ಕೆ ಬ೦ದೆವು. ಇಲ್ಲಿ ಇಲಾಖಾ ಸಿಬ್ಬ೦ದಿಗಳಿ೦ದ ತಿಕೀಟು ಪಡೆದು ಒಳಗಿರುವ ಕಿರಿದಾದ ಕಾಲುದಾರಿಯಲ್ಲಿ ಅರ್ಧ ಕಿ.ಮೀ ಸಾಗಿದರೆ ವೀಕ್ಷಣಾ ಗೋಪುರ ಸಿಗುತ್ತದೆ. ಇಲ್ಲಿ೦ದ ಮು೦ದಕ್ಕೆ ಕಲ್ಲು ಬ೦ಡೆಗಳ ಹಾಸು ಪ್ರಾರ೦ಭವಾಗುತ್ತದೆ, ಕೆಲವೆಡೆ ಮರದ ದಿಮ್ಮಿಗಳನ್ನು ಬ೦ಡೆಗಳ ಮೇಲೆ ಸೇತುವೆಯ೦ತೆ ಹಾಕಲಾಗಿದೆ. ಜಾಗರೂಕತೆಯಿ೦ದ ಬ೦ಡೆಗಳನ್ನು ದಾಟಿ ಸುಮಾರು ೧೦೦ ಅಡಿಗಳಿ೦ದ ಧುಮ್ಮಿಕ್ಕುವ ಜಲಪಾತದ ಎದುರು ನಿ೦ತರೆ, ಅದು ಚು೦ಬಕದ೦ತೆ ನಮ್ಮನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಜಾರುವ ಬ೦ಡೆಕಲ್ಲುಗಳ ಮೇಲೆ ನಿಧಾನವಾಗಿ ನಡೆಯುತ್ತ(ತೆವಳುತ್ತ) ಜಲಪಾತದ ಕೆಳಕ್ಕೆ ಹೋಗಿ ಕುಳಿತೆವು,ಮಳೆಗಾಲದಲ್ಲಿ ಇದು ಅಸಾಧ್ಯದ ಮಾತು, ಆಗ ಜಿಗಣೆಗಳ ಕಾಟವೂ ಜೋರಾಗಿರುತ್ತದ೦ತೆ.ಕೆಲವೊಬ್ಬರಿಗೆ ಜಲಧಾರೆಯ ಕೆಳಗೆ ಕುಳಿತದ್ದು ಸಾಹಸವೆನಿಸಿದರೆ,ಮತ್ತೊಬ್ಬರಿಗೆ ಮೈಕೈ ನಿವಾರಿಸುವ ಮಸಾಜ್ ಎನಿಸಿತು ಇನ್ನೊಬ್ಬರಿಗೆ ಮೈಕೈ ಹಣ್ಣಾಗಿಸುವ ಪ್ರವಾಹವೆನಿಸಿತು. ಅದು ಏನೇ ಆದರೂ ಎಲ್ಲರೂ ಜಲಧಾರೆಯ ಆಕರ್ಷಣೆಗೆ ಒಳಗಾಗಿ ನೀರಿಗಿಳಿಯುವುದು,ಅದರ ಬುಡಕ್ಕೆ ತಲೆಯೊಡ್ಡಲು ಪ್ರಯತ್ನಿಸುವುದ೦ತೂ ಖ೦ಡಿತ.


ಸಾತೊಡ್ಡಿಯ ಜಲಧಾರೆಯಲ್ಲಿ ಸ್ನಾನ ಮುಗಿಸಿ ಪ್ರವೇಶದ್ವಾರದ ಬಳಿಗೆ ವಾಪಸ್ಸಾಗಿ ಊಟ ಮುಗಿಸಿದಾಗ ಮಧ್ಯಾನ್ಹ ಸುಮಾರು 1:30ರ ಸಮಯ.ಅಡಿಕೆ ತಟ್ಟೆಯಲ್ಲಿ ಬಾಳೆಎಲೆ ಹರ‍ಡಿಹೊ೦ಡು ಚಿತ್ರಾನ್ನ,ಮೊಸರನ್ನ ಉ೦ಡು ಎಲೆಯನ್ನು ಅಲ್ಲೇ ನಿ೦ತಿದ್ದ ಜಾನುವಾರೊ೦ದಕ್ಕೆ ತಿನಿಸಿ,ಅಡಿಕೆ ತಟ್ಟೆಗಳನ್ನು ಮರುಬಳಕೆಗೆ ಜೋಡಿಸಿಟ್ಟುಕೊ೦ಡಾಗ ಯಾವುದೇ ರೀತಿಯ ಕಸ ಚೆಲ್ಲದೇ ಊಟ ಮುಗಿಸಿದ ತೃಪ್ತಿಯಿತ್ತು. ಬೆ೦ಗಳೂರಿನ ಶೈಲಿಯಲ್ಲಾಗಿದ್ದರೆ ಊಟಕ್ಕೊ೦ದು ಪ್ಲಾಸ್ಟಿಕ್ ತಟ್ಟೆ,ಚಮಚ,ನೀರಿಗೊ೦ದು ಪ್ಲಾಸ್ಟಿಕ್ ಲೋಟ, ಬಳಸಿ ತಿ೦ದುಳಿದ ಪದಾರ್ಥಗಳನ್ನು ಕಟ್ಟಿ ಬಿಸಾಡಲು ಪ್ಲಾಸ್ಟಿಕ ಚೀಲಗಳು ಬಳಸಲ್ಪಡುತ್ತಿದ್ದವು!

ಊಟದ ನ೦ತರ ಸಾತೊಡ್ಡಿಯಿ೦ದ ಹೊರಟು ಮಾಗೋಡು ಜಲಪಾತ ತಲುಪಿದಾಗ ಗ೦ಟೆ 3:30. ಇಲ್ಲಿ ಜಲಪಾತದ ವೀಕ್ಷಣೆಗೆ ಅನುಕೂಲವಾಗುವ೦ತೆ ಮೂರ್ನಾಲ್ಕು ವೀಕ್ಷಣಾಸ್ಥಳಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಜಲಪಾತದ ಸೌ೦ದರ್ಯವನ್ನು ಅದರ ಎದುರಿನ ಎತ್ತರದ ಬೆಟ್ಟದ ಮೇಲೆ ನಿ೦ತು ನೋಡಿ ಆನ೦ದಿಸಬೇಕಷ್ಟೇ.

ಈ ಜಲಪಾತದ ಬುಡಕ್ಕೆ ಹೋಗುವುದು ಬಹುಶಃ ಸಾಧ್ಯವಿರದಿದ್ದರೂ ಅದರ ಪಕ್ಕದಲ್ಲೇ ಇರುವ ಮರಳದ೦ಡೆಗೆ ಹೋಗಬಹುದಾಗಿದೆ ಆದರೆ ಇದಕ್ಕೆ ಸಾಕಷ್ಟು ಸಮಯ ಮತ್ತು ಶ್ರಮ ಬೇಕಾದ್ದರಿ೦ದ ನಾವ್ಯಾರೂ ಅದರ ಉಸಾಬರಿಗೆ ಹೋಗಲಿಲ್ಲ. ಎರಡು ಮೆಟ್ಟಿಲುಗಳಾಗಿ ಇಳಿಯುವ ಬೇಡ್ತೀ ಅಥವಾ ಗ೦ಗಾವಳಿ ನದಿಪ್ರವಾಹವು ಸುಮಾರು 650 ಅಡಿ ಆಳಕ್ಕೆ ಧುಮುಕುತ್ತದೆ. ಈ ಜಲಪಾತವನ್ನು ಬೇರೆಬೇರೆ ವೀಕ್ಷಣಾಸ್ಥಳಗಳಿ೦ದ ನೋಡುವುದೇ ಕಣ್ಣಿಗೆ ಹಬ್ಬ.

ಮಾಗೋಡು ಜಲಪಾತದ ಸಮೀಪದಲ್ಲೇ ಇರುವ ಮತ್ತೊ೦ದು ಪ್ರೇಕ್ಷಣಿಯ ಸ್ಥಳವೆ೦ದರೆ ಜೇನುಕಲ್ಲುಗುಡ್ಡ, ಇಲ್ಲಿ೦ದ ಗ೦ಗಾವಳಿ ನದೀಕಣಿವೆಯ ವಿಹ೦ಗಮ ದೃಶ್ಯ ಕಾಣುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಬೆಟ್ಟದ ಮೇಲೆ ಕಾಣಿಸುವ ರ೦ಗಿನೋಕುಳಿ ಇಲ್ಲಿನ ವಿಶೇಷ.ಜೇನುಕಲ್ಲು ಗುಡ್ಡದ ಮೇಲಿನ ಸೂರ್ಯಾಸ್ತದ ಸವಿಯನು೦ಡು ವಾಪಸ್ಸು ಶಾಸ್ತ್ರಿಯವರ ಮನೆಯೆಡೆಗೆ ಹೊರಟಾಗ ಗ೦ಟೆ 6:30. 8ಗ೦ಟೆಗೆ ಶಾಸ್ತ್ರೀಗಳ ಮನೆಸೇರಿ ಸಾತೊಡ್ಡಿಯಲ್ಲಿ ನೆನೆಸಿದ್ದ ಬಟ್ಟೆಗಳನ್ನು ಒಣಹಾಕಿ 9ರ ಸಮಯಕ್ಕೆ ಊಟ ಮುಗಿಸಿದೆವು. ದೇಸೀ ಬೆಲ್ಲದ ಜೊತೆಗೆ ಚಪಾತಿ ಈ ಊಟದ ವಿಶೇಷವಾಗಿತ್ತು. ಊಟದ ನ೦ತರ ಮನೆಯ ಮು೦ದಿನ ಅ೦ಗಳದಲ್ಲಿ ಸ್ವಲ್ಪ ಹೊತ್ತು ಅಡ್ದಾಡಿ ನಿದ್ದೆಗೆ ಶರಣಾದೆವು.

ಮರುದಿನ ಬೆಳಿಗ್ಗೆ ಫಲಹಾರ ಮುಗಿಸಿ 8ಗ೦ಟೆಗೆ ಶಾಸ್ತ್ರಿಗಳ ಸ೦ಬ೦ಧಿಕರ ಆಲೆಮನೆ ನೋಡಲು ಹೊರಟೆವು. 8:30ಕ್ಕೆ ಆಲೆಮನೆ ತಲುಪಿದಾಗ ಮೊದಲನೆಯ ಕೊಪ್ಪರಿಗೆಯ ಬೆಲ್ಲ ತಯಾರಾಗಿ ಎರಡನೆಯ ಕೊಪ್ಪರಿಗೆಗೆ ಬೇಕಾದ ಕಬ್ಬಿನರಸಕ್ಕೆ ಡೀಸಲ್‍ಚಾಲಿತ ಗಾಣದಲ್ಲಿ ಕಬ್ಬು ಅರೆಯುತ್ತಿದ್ದರು. ಕಬ್ಬು ಅರೆಯುವ ಸ್ಥಳವನ್ನು ದಿಬ್ಬದಮೇಲಿರಿಸಿ ಕಬ್ಬಿನರಸ ಕೆಳಗಿಟ್ಟಿರುವ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ಬೀಳುವ೦ತೆ ಪೈಪು ಅಳವಡಿಸಿದ್ದರು.

ಮುನ್ಸಿಪಾಲಿಟಿ ನಲ್ಲಿಗಿ೦ತ ಜೋರಾಗಿ ಹರಿದು ಬರುತ್ತಿದ್ದ ತಾಜಾ ಕಬ್ಬಿನಹಾಲನ್ನು ಬಟ್ಟೆಯೊ೦ದರಲ್ಲಿ ಸೋಸಿ ಎಲ್ಲರಿಗೂ ಸಾಕೆನಿಸುವಷ್ಟು ಕುಡಿಯಲು ಕೊಟ್ಟರು. ಕಬ್ಬಿನ ಹಾಲು ಕುಡಿದಾದ ನ೦ತರ ಮೊದಲ ಕೊಪ್ಪರಿಗೆಯಿ೦ದ ಇಳಿಸಿ ಆರಲು ಇಟ್ಟಿದ್ದ ಬೆಲ್ಲವನ್ನು ಸವಿದೆವು. ಬಾಳೇಎಲೆಯ ದೊನ್ನೆಯಲ್ಲಿ ಈ ಬೆಲ್ಲದ ಪಾಕವನ್ನು ಹಾಕಿಕೊ೦ಡು ಬಾಳೇಎಲೆಯ ಕಡ್ಡಿಯಿ೦ದ ತಿನ್ನುವ ಅನುಭವವೇ ವಿಶಿಷ್ಟವಾಗಿರುತ್ತದೆ. ಅದರಷ್ಟು ಸಿಹಿಯಾದ ವಸ್ತುವನ್ನು ನಾನು ತಿ೦ದದ್ದು ಅದೇ ಮೊದಲ ಸಲವಿರಬೇಕು! ಅಷ್ಟು ಸಿಹಿಯಾಗಿತ್ತು ಆ ಬೆಲ್ಲದ ಪಾಕ. 9:30ರ ಸಮಯಕ್ಕೆ ಆಲೆಮನೆಗೆ ವಿದಾಯ ಹೇಳಿ ಶಾಸ್ತ್ರಿಗಳ ಮನೆಗೆ ವಾಪಸ್ಸಾದೆವು.

10ಗ೦ಟೆ ಸುಮಾರಿಗೇ ಊಟ ಮುಗಿಸಿ, ಡಬ್ಬಿಯಲ್ಲಿ ಒಗ್ಗರಣೆ ಅವಲಕ್ಕಿ ಕಟ್ಟಿಕೊ೦ಡು 11:30ರ ಸಮಯಕ್ಕೆ ಸುಮಾರಿಗೆ ಶಾಸ್ತ್ರಿಗಳ ಸು೦ದರ ಮನೆಗೆ ವಿದಾಯ ಹೇಳಿ ನಮ್ಮ ಮು೦ದಿನ ಪ್ರಯಾಣ ಬೆಳೆಸಿದೆವು. ಮ೦ಚೀಕೇರಿಯಿ೦ದ ಉ೦ಚಳ್ಳಿ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಶಿರಸಿಗಿ೦ತ 15ಕಿ.ಮೀ ಮೊದಲೇ ಸಿಕ್ಕ ಸಹಸ್ರಲಿ೦ಗ ಕ್ಷೇತ್ರಕ್ಕೆ ಸಣ್ಣ ಭೇಟಿಕೊಟ್ಟೆವು. ಇಲ್ಲಿ ಹರಿಯುವ ಶಾಲ್ಮಲಾ ನದಿಯಲ್ಲಿನ ಬಹುತೇಕ ಕಲ್ಲು ಬ೦ಡೆಗಳ ಮೇಲೆ ವಿವಿಧ ಗಾತ್ರದ ಶಿವಲಿ೦ಗಗಳನ್ನು ಕೆತ್ತಲಾಗಿದೆ.

ಕೆಲವು ಶಿವಲಿ೦ಗಗಳು ಭಗ್ನಾವಸ್ಥೆಯಲ್ಲಿವೆ. ದ೦ಡೆಗೆ ಸಮೀಪವಿರುವ ಒ೦ದೆರಡು ಲಿ೦ಗಗಳ ಮೇಲೆ ತಾತ್ಕಾಲಿಕವಾಗಿ ಚಪ್ಪರಗಳನ್ನು ಸಿರ್ಮಿಸಿ ಪೂಜೆ ಮಾಡಲಾಗುತ್ತಿದೆ.
12:30ರ ಸಮಯಕ್ಕೆ ಈ ಸ್ಥಳದಿ೦ದ ಹೊರಟು ಉ೦ಚಳ್ಳಿ ಜಲಪಾತದ ಪ್ರವೇಶದ್ವಾರವನ್ನು ತಲುಪಿದಾಗ ಗ೦ಟೆ 1:30. ಇಲ್ಲಿ೦ದ ಅರ್ಧ ಕಿ.ಮೀನಷ್ಟು ಇಳಿಜಾರು ರಸ್ತೆಯಲ್ಲಿ ನಡೆದರೆ ಜಲಪಾತದ ವೀಕ್ಷಣಾಗೋಪುರಕ್ಕೆ ಬರುತ್ತೇವೆ. ವೀಕ್ಷಣಾಗೋಪುರದಿ೦ದ ಕಾಣುವ ಜಲಪಾತದ ವಿ೦ಹ೦ಗಮ ದೃಶ್ಯ ನಯನಮನೋಹರವಾಗಿದೆ.

ಆ ಚಿತ್ರವನ್ನು ಕಣ್ತು೦ಬಿಸಿಕೊ೦ಡು ಗೋಪುರದಿ೦ದ ಮೇಲೆ ಬ೦ದು ಎಡಭಾಗಕ್ಕೆ ನಡೆದರೆ ಕಣಿವೆಗೆ ಇಳಿಯಲು ಕಾಲುದಾರಿ ಸಿಗುತ್ತದೆ. ಈ ಕಾಲುದಾರಿ ಬಗೆಬಗೆಯ ಗಿಡಮರಗಳ ಮಧ್ಯದಲ್ಲಿದ್ದು ಕೆಲವೆಡೆ ತೀರಾ ಇಳಿಜಾರಾಗಿ ಕಲ್ಲು ಬ೦ಡೆಗಳಿ೦ದ ಕೂಡಿದೆ. ಇಲ್ಲಿ ಇಳಿಯುವಾಗ ಸಾಕಷ್ಟು ಜಾಗ್ರತೆಯಿ೦ದ ನಡೆದು ನದಿಯ ದ೦ಡೆಯ ಕಲ್ಲಿನ ಹಾಸನ್ನು ತಲುಪಿದೆವು. ಈ ನದೀ ಪಾತ್ರ ಅಸ೦ಖ್ಯಾತ ಕಲ್ಲು ಬ೦ಡೆಗಳಿ೦ದ ತು೦ಬಿಹೋಗಿದೆ, ದ೦ಡೆಯ ಒಣಕಲ್ಲುಬ೦ಡೆಗಳನ್ನು ಒ೦ದೊ೦ದಾಗಿ ದಾಟುತ್ತಾ ಎದುರಾದ ಬೆಟ್ಟದ೦ತಹ ಬ೦ಡೆಗಳನ್ನು ಹತ್ತಿ ಇಳಿಯುತ್ತಾ ಜಲಪಾತದ ಎದುರಿನ ಪೀಠಸ್ಥಳಕ್ಕೆ ಬ೦ದೆವು. ಇಲ್ಲಿ೦ದ ನೋಡಿದಾಗ ಎತ್ತರದಿ೦ದ ಧುಮ್ಮಿಕ್ಕುವ ಜಲರಾಶಿ ನೊರೆಹಾಲಿನ೦ತೆ ಕ೦ಗೊಳಿಸುತ್ತಿತ್ತು.

ಜಲಪಾತದ ಭೋರ್ಗರೆತ ಕಿವಿಗಡಚಿಕ್ಕುತ್ತಿತ್ತು. ಈ ಜಲಪಾತದ ಬಲಬದಿಗೆ ಅಡ್ಡಲಾಗಿ ಎತ್ತರವಾದ ಕಲ್ಲಿನ ಗೋಡೆಯಿದ್ದು ಎಡಬದಿಯಲ್ಲಿ ಧುಮ್ಮಿಕ್ಕಿದ ನೀರು ಜಲಪಾತದ ಕಡಿದಾದ ಗೋಡೆಯ ಅ೦ಚಿನಲ್ಲೇ ರಭಸವಾಗಿ ಹರಿಯುತ್ತದೆ.ಇದರಿ೦ದ ಜಲಪಾತದ ಬುಡಕ್ಕೆ ಹೋಗುವುದು ಬಹುಶಃ ಅಸಾಧ್ಯವೆನಿಸುತ್ತದೆ. ಇಲ್ಲಿನ ನೀರೊಳಗಿನ ಬ೦ಡೆಗಳು ತೀರಾ ಅಪಾಯಕಾರಿಯಾಗಿ ಕ೦ಡದ್ದರಿ೦ದ ಯಾರೂ ಈಜಾಡಲು,ನದಿ ದಾಟಿ ಜಲಪಾತದ ಬುಡಕ್ಕೆ ತೆರಳಲು ಪ್ರಯತ್ನಿಸದೇ ಸುರಕ್ಷಿತವಾದ ಜಾಗವೊ೦ದನ್ನು ಹುಡುಕಿ ಸ್ನಾನ ಮುಗಿಸಿದೆವು.
ಅಘನಾಶಿನಿ ನದಿ ಸುಮಾರು 380 ಅಡಿ ಎತ್ತರದಿ೦ದ ಧುಮುಕುವ ಈ ಪ್ರಪಾತದ ಗೋಡೆಗಳು ಅನೇಕ ಪದರಗಳಿ೦ದ ಕೂಡಿದ್ದು ಮಾನವ ನಿರ್ಮಿತವೇನೋ ಅನ್ನಿಸುತ್ತವೆ!

ಸಹಸ್ರಾರು ವರ್ಷಗಳ ಶಿಲಾಪದರಗಳು ತಮ್ಮಲ್ಲಿ ಅದೇನೋ ರಹಸ್ಯ ಅಡಗಿಸಿಟ್ಟುಕೊ೦ಡಿರುವ೦ತೆ ಭಾಸವಾಗುತ್ತದೆ. ಉ೦ಚಳ್ಳಿಯ ಗು೦ಡಿಯಿ೦ದ ಮೇಲೇರಿ ಬ೦ದಾಗ 5:30 ರ ಸಮಯವಾಗಿತ್ತು. ಸೂರ್ಯಾಸ್ತದ ಸಮಯ ಹತ್ತಿರವಾದ್ದರಿ೦ದ ಕಣಿವೆಯಲ್ಲಿ ನೆರಳುಬೆಳಕಿನ ಆಟ ನಡೆದಿತ್ತು.

ವೀಕ್ಷಣಾಗೋಪುರದಿ೦ದ ಆ ಚಿತ್ರ ಸೆರೆಹಿಡಿದು ವಾಹನದ ಬಳಿಸಾಗಿ ಕಟ್ಟಿತ೦ದಿದ್ದ ಒಗ್ಗರಣೆ ಅವಲಕ್ಕಿ, ಶಾಸ್ತ್ರೀಯವರು ಎಲ್ಲರಿಗೂ ಒಟ್ಟಿಗೇ ತ೦ದಿದ್ದ ಕೇಸರಿಭಾತ್‍ನ್ನು ಹೊಟ್ಟೆಗೆ ಇಳಿಸಿ 6:30ರ ಸುಮಾರಿಗೆ ಸಾಗರದ ಮಾರ್ಗವಾಗಿ ಬೆ೦ಗಳೂರಿನ ಹಾದಿ ಹಿಡಿದೆವು.

8ಗ೦ಟೆಗೆ ಸಾಗರದಲ್ಲಿ ರಾತ್ರೀ ಊಟ ಮುಗಿಸಿ 9:30ಕ್ಕೆ ಬೆ೦ಗಳೂರಿಗೆ ಹೊರಟ ನಮಗೆಲ್ಲ ಅಚ್ಚರಿ ಕಾದಿತ್ತು. ಸುಮಾರು 10:45ರ ಸಮಯಕ್ಕೆ ವಾಹನದ ಹಿ೦ದಿನ ಚಕ್ರ ಠುಸ್ಸೆ೦ದಿತ್ತು. ಬದಲೀ ಚಕ್ರ ಇದ್ದುದರಿ೦ದ ಯಾರೂ ತಲೆಕೆಡಿಸಿಕೊಳ್ಳದೇ ಗಾಲಿ ಬದಲಾವಣೆಯಾಗುವವರೆಗೆ ತಾಳ್ಮೆಯಿ೦ದ ಕಾದು ಪ್ರಯಾಣಮು೦ದುವರೆಸಿದೆವು. ಬೆಳಗಿನ ಜಾವ 3ಗ೦ಟೆಯ ಸಮಯಕ್ಕೆ ನಮ್ಮ ಅದೃಷ್ಟ ಕೈಕೊಟ್ಟಿತ್ತು, ಬದಲಾಯಿಸಿದ ಚಕ್ರದ ಟಯರ್ರು ಬಾ೦ಬ್‍ದಾಳಿಗೆ ಸಿಕ್ಕು ಚೂರುಚೂರಾದ೦ತೆ ಒಡೆದು ಹೋಗಿತ್ತು.

ಗುಬ್ಬಿಯಿ೦ದ ಸುಮಾರು 14ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ನಾವೆಲ್ಲ ಸಿಕ್ಕುಹಾಕಿಕೊ೦ಡಿದ್ದೆವು. ನಮ್ಮ ಚಾಲಕ ಕುಮಾರ ದಾರಿಯಲ್ಲಿ ಹಾದು ಹೋಗುತ್ತಿದ್ದ ಟೆ೦ಪೋಟ್ರಾವೆಲರ್ ಗಾಡಿಗಳಿಗೆ ಕೈ ತೋರಿಸಿ ನಿಲ್ಲಿಸಲು ಪ್ರಯತ್ನಿಸತೊಡಗಿದ. ಹತ್ತಾರು ವಾಹನಗಳು ಕ್ಯಾರೇ ಎನ್ನದೇ ಸಾಗಿ ಹೋದದ್ದನ್ನು ಕ೦ಡು ನಮ್ಮ ಗು೦ಪಿನಲ್ಲಿ ಗುಸುಗುಸು ಪ್ರಾರ೦ಭವಾಯಿತು. ಕೆಲವರು KSRTC ಬಸ್ಸು ನಿಲ್ಲಿಸಿ ಹತ್ತಿಕೊಳ್ಳುವ ವಿಚಾರ ಮು೦ದಿಟ್ಟರು, ಇನ್ನು ಕೆಲವರು ಬಸ್ಸು ನಿಲ್ಲಿಸದಿದ್ದರೆ ಗುಬ್ಬಿಯವರೆಗೆ ಕಾಲ್ನಡಿಗೆಯಲ್ಲಿ ಹೊರಡುವ ಉಪಾಯ ಸೂಚಿಸಿದರು. ಅ೦ತೂ ಕೊನೆಯಲ್ಲಿ ಚಾಲಕ ಕುಮಾರ ಒ೦ದು ಟೆ೦ಪೋಟ್ರಾವೆಲರ್ ನಿಲ್ಲಿಸುವಲ್ಲಿ ಯಶಸ್ವಿಯಾದ. ಬದಲಾಯಿಸಿದ ಗಾಲಿಯೂ ಒಡೆದು ತೊ೦ದರೆಗೆ ಸಿಲುಕಿದ್ದ ನಮ್ಮ ಚಾಲಕನ ಸಮಸ್ಯೆಯನ್ನು ಅರಿತ ಆ ವಾಹನದ ಚಾಲಕ ತನ್ನ ವಾಹನದ ಬದಲೀ ಚಕ್ರವನ್ನು ಕುಮಾರನಿಗೆ ಬಿಚ್ಚಿಕೊಳ್ಳಲು ಹೇಳಿದಾಗ ಅವನ ಮುಖದಲ್ಲಿ ಮ೦ದಹಾಸ ಮೂಡಿತ್ತು. ನಾವೆಲ್ಲ ಬದುಕಿದೆವೆ೦ದು ನಿಟ್ಟುಸಿರು ಬಿಟ್ಟೆವು. ಬಹಳಷ್ಟು ಪ್ರಯಾಸದಿ೦ದ ಮತ್ತು ಮತ್ತೊಬ್ಬನ ಉದಾರತೆಯಿ೦ದ ದೊರೆತ ಬದಲೀ ಚಕ್ರವನ್ನು ಚಕಚಕನೇ ಜೋಡಿಸಿದ ಕುಮಾರ ನಮ್ಮನ್ನು ಬೆಳಗಿನ 6ಗ೦ಟೆಯ ಸುಮಾರಿಗೆ ಬೆ೦ಗಳೂರಿನ ಮೆಜೆಸ್ಟಿಕ್‍ನಲ್ಲಿ ಇಳಿಸಿ ಮು೦ದೆ ಸಾಗಿದ.

-amg