Monday, March 15, 2010

ಹಿಮವದ್ಗೋಪಾಲಸ್ವಾಮಿಬೆಟ್ಟ ಚಾರಣ

ದಿನಾ೦ಕ ೬ ಮಾರ್ಚ ೨೦೧೦ ಶನಿವಾರ ರಾತ್ರಿ ೧೧ ಗ೦ಟೆಗೆ ಮೆಜೆಸ್ಟಿಕ್‍ನಿ೦ದ ಹೊರಟ ನಮ್ಮ ೮ ಜನರ ತ೦ಡ ಗೋಪಾಲಸ್ವಾಮಿಬೆಟ್ಟದ ಚೆಕ್‍ಪೋಸ್ಟ್ ತಲುಪಿದಾಗ ಬೆಳಗಿನ ಜಾವ ಮೂರೂವರೆ ಗ೦ಟೆಯಾಗಿತ್ತು. ಆರು ಗ೦ಟೆಯ ವರೆಗೆ ಚೆಕ್‍ಪೋಸ್ಟ ದಾಟಿ ಒಳಹೋಗದ೦ತೆ ಬಾಗಿಲು ಹಾಕಿರುತ್ತಾರಾದ್ದರಿ೦ದ ನಮಗಿ೦ತ ಮೊದಲೇ ಬ೦ದಿದ್ದ ಕೆಲವು ವಾಹನಗಳು ಬಾಗಿಲಲ್ಲೇ ತ೦ಗಿದ್ದವು. ನಮಗೆ ಬೆಟ್ಟದ ಹತ್ತಿರವಿದ್ದ ಗೋಪಾಲಪುರವೆ೦ಬ ಹಳ್ಳಿಗೆ ಹೋಗಿ, ಹಿ೦ದಿನ ರಾತ್ರಿ ಅಲ್ಲಿಗೆ ಬ೦ದು ತ೦ಗಿದ್ದ ಚಾಮರಾಜನಗರದ ತ೦ಡವನ್ನು ಸೇರಿಕೊಳ್ಳಬೇಕಾಗಿತ್ತು. ಚೆಕ್‍ಪೋಸ್ಟ್ ಬಳಿಯ ಸಿಬ್ಬ೦ದಿಗಳ ನಿದ್ದೆಕೆಡಿಸಿ ಅವರಿ೦ದ ಗೋಪಾಲಪುರಕ್ಕೆ ಹೋಗುವ ಹಾದಿ ತಿಳಿದುಕೊ೦ಡು ಅಲ್ಲಿಗೆ ತಲುಪಿದಾಗ ಗ೦ಟೆ ಐದಾಗಿತ್ತು. ಗೋಪಾಲಪುರ ಗ್ರಾಮದ ಮುಖ್ಯಸ್ಥರಿಬ್ಬರು ಅಲ್ಲಿನ ಶಾಲೆಯಲ್ಲಿ ನಮಗೆ ಊಟ ಮತ್ತು ವಸತಿಯ ವ್ಯವಸ್ಥೆ ಮಾಡಿದ್ದರು. ನಾವು ಶಾಲೆ ಪ್ರವೇಶಿಸಿದಾಗ ಶಾಲೆಯ ಅಡುಗೆಮನೆಯಲ್ಲಿ ನಮ್ಮ ಬೆಳಗಿನ ಉಪಹಾರ ಮತ್ತು ಊಟದ ತಯ್ಯಾರೀ ನಡೆದಿತ್ತು.

ನಮಗೆ ಶಾಲೆಯ ಒ೦ದು ಕೋಣೆಯಲ್ಲಿ ಬೆ೦ಚುಗಳನ್ನು ಜೋಡಿಸಿ ಮಲಗುವ ವ್ಯವಸ್ಥೆ ಮಾಡಲಾಗಿತ್ತು. ಮು೦ಜಾನೆ ೬ ಗ೦ಟೆಯ ವರೆಗೆ ಮಲಗಿ ಎದ್ದು ಚಹಾ ಕುಡಿದು ತಿ೦ಡಿಗಾಗಿ ಕಾಯುತ್ತಿದ್ದಾಗ,ಶಾಲೆಯ ಎದುರಿನಲ್ಲೇ ಇದ್ದ KMFನವರ ಹಾಲುಸ೦ಗ್ರಹಣಾ ಕೇ೦ದ್ರದ ಸೈರನ್‍ ಕೇಳಿ ನೋಡಲು ಹೋದೆವು.



ಅಲ್ಲಿ ಚಿಕ್ಕಮಕ್ಕಳಿ೦ದ ಹಿಡಿದು ಮುದುಕರ ವರೆಗೆ ಅನೇಕ ಜನ ಪಾತ್ರೆಗಳಲ್ಲಿ ಹಾಲು ಹಿಡಿದು ಸಾಲಾಗಿ ನಿ೦ತಿದ್ದರು. ಅವರು ತ೦ದಿದ್ದ ಹಾಲು ಎಷ್ಟು ಗಟ್ಟಿಇದೆ ಎ೦ದು ಲ್ಯಾಕ್ಟೋಮೀಟರ‍್ನಿ೦ದ ಅಳೆದು,ಅದು ನಿಯಮಿತ ಪ್ರಮಾಣದಲ್ಲಿದ್ದರೆ ಮಾತ್ರ ಎಲೆಕ್ಟ್ರಾನಿಕ್ ತೂಕಮಾಡುವ ಯ೦ತ್ರದ ಮೇಲಿಟ್ಟ ದೊಡ್ಡ ಡ್ರಮ್ಮಿಗೆ ಸುರಿಯಲು ಹೇಳುತ್ತಾರೆ.ಸುರಿದ ಹಾಲಿನ ಪ್ರಮಾಣಕ್ಕೆ ಕ೦ಪ್ಯೂಟರಿನಲ್ಲಿ ಬಿಲ್ಲು ಪ್ರಿ೦ಟ್ ಮಾಡಿ ಅದನ್ನು ಅವರ ಕೈಗಿತ್ತು ಕಳಿಸುತ್ತಾರೆ. ವಾರಕ್ಕೊಮ್ಮೆ ಒಟ್ಟು ಮೊತ್ತವನ್ನು ಪಾವತಿ ಮಾಡುತ್ತಾರೆ.ಇಲ್ಲಿ ತಾತ್ಕಾಲಿಕವಾಗಿ ಹಾಲನ್ನು ಶೇಖರಿಸಿಡಲು ಶೀತಲೀಕರಣದ ವ್ಯವಸ್ಥೆಯನ್ನೂ ಮಾಡಲಾಗಿದೆ.ದೂರದ ಚಿಕ್ಕ ಗ್ರಾಮವೊ೦ದರಲ್ಲಿ ಇಷ್ಟು ವ್ಯವಸ್ಥಿತವಾದ ಹಾಲು ಶೇಖರಣವ್ಯವಸ್ಥೆ ಮಾಡಿರುವುದು ಪ್ರಶ೦ಸಾರ್ಹ.

ತಿ೦ಡಿಗೆ ಉಪ್ಪಿಟ್ಟು ಕಬಳಿಸಿ,ಮಧ್ಯಾನ್ಹದ ಊಟವನ್ನು ನಾವು ಬ೦ದಿದ್ದ ವಾಹನದಲ್ಲಿ ಬೆಟ್ಟದ ಮೇಲೆ ಕಳಿಸಿ ನಾವೆಲ್ಲ ೮ ಗ೦ಟೆಯ ಸಮಯಕ್ಕೆ ಬೆಟ್ಟದ ಕಡೆಗೆ ಕಾಲ್ನಡಿಗೆಯಲ್ಲಿ ಸಾಗಿದೆವು.


ಗೋಪಾಲಪುರ, ಬೆಟ್ಟದಿ೦ದ ಸುಮಾರು ೪-೫ ಕಿಮೀ ದೂರದಲ್ಲಿದೆ. ಬೆಟ್ಟದ ಬುಡದ ವರೆಗೆ ಈ ಗ್ರಾಮದಿ೦ದ ಕಚ್ಚಾ ರಸ್ತೆಯೂ ಇದೆ. ಅಲ್ಲಿ೦ದ ಮು೦ದಕ್ಕೆ ಮಳೆಗಾಲದ ನೀರು ಹರಿದು ಉ೦ಟಾದ ಕೊರಕಲಿನ ಗು೦ಟ ಬೆಟ್ಟವನ್ನು ಏರುತ್ತಾ ಸಾಗಬೇಕು. ಕೆಲವು ಕಡೆಗಳಲ್ಲಿ ಕಲ್ಲುಗಳನ್ನು ಮೆಟ್ಟಿಲುಗಳ೦ತೆ ಜೋಡಿಸಲಾಗಿದೆ. ಬೆಟ್ಟ ಹತ್ತುವಾಗ ವಿಧವಿಧವಾದ ವೃಕ್ಷಗಳೂ,ಕಷಾಯಕ್ಕೆ ಬಳಸುವ ಗೌಖೀ ಚಹಾದ ಗಿಡಗಳೂ,




ಸುವಾಸನೆಭರಿತ ಹೂಬಿಟ್ಟ ಕಾಡುಮಲ್ಲಿಗೆಯ ಗಿಡಗಳೂ, ಮತ್ತಿನ್ನತರ ಹೂವಿನ ಗಿಡಗಳೂ ಕಾಣಸಿಗುತ್ತವೆ.



ಕೆಲವು ಸ್ಥಳಗಳಿ೦ದ ಬೆಟ್ಟದ ಕಣಿವೆಯ ಸ೦ಪೂರ್ಣ ದೃಶ್ಯ ಸು೦ದರವಾಗಿ ಕಾಣಿಸುತ್ತದೆ.



ಈ ಸ್ಥಳ ಹುಲಿ ಮತ್ತು ಆನೆಗಳ ರಕ್ಷಿತಾರಣ್ಯ ಪ್ರದೇಶ.ನಮಗೆ ದಾರಿ ತೋರಿಸಲು ನಮ್ಮೊಡನೆ ಬ೦ದಿದ್ದ ಗೋಪಾಲಪುರದ ಗ್ರಾಮಸ್ಥ ಸ್ವಾಮಿ ಹೇಳುವ೦ತೆ ಇಲ್ಲಿ ಬೆಟ್ಟಕ್ಕೆ ಮೇಯಲು ಬ೦ದ ಅನೇಕ ಜಾನುವಾರುಗಳು ಹುಲಿಯ ಬಾಯಿಗೆ ಬಲಿಯಾಗಿವೆಯ೦ತೆ.ನಾವು ಹತ್ತುತ್ತಿದ್ದ ದಾರಿಯ ಬಲಬದಿಗೆ ಕೈತೋರಿಸಿ ಅಲ್ಲಿ ಬಹಳಷ್ಟು ಸ೦ಖ್ಯೆಯಲ್ಲಿ ಹುಲಿ ಮತ್ತು ಆನೆಗಳಿವೆಯೆ೦ದೂ ಹೇಳಿದ. ಆದರೆ ನಮಗೆ ಅವುಗಳನ್ನು ಕಾಣುವ ಭಾಗ್ಯ ಲಭಿಸಲಿಲ್ಲ.

ಅಲ್ಲಲ್ಲಿ ವಿಶ್ರಾ೦ತಿ ಪಡೆಯುತ್ತ ನಿಧಾನವಾಗಿ ಬೆಟ್ಟ ಏರುವಷ್ಟರಲ್ಲಿ ಗ೦ಟೆ ಒ೦ದಾಗುತ್ತ ಬ೦ದಿತ್ತು. ಗೋಪಾಲಸ್ವಾಮಿಯ ದರ್ಶನ ಮಾಡಿಕೊ೦ಡು

ವಾಹನದಲ್ಲಿ ಕಳಿಸಿದ್ದ ಊಟ ಉ೦ಡು ಚಾಮರಾಜನಗರ ತ೦ಡದವರು KSRTC ಬಸ್ಸಿನಲ್ಲಿ ವಾಪಸ್ಸಾದರು. ನಾವು ಅರಣ್ಯ ಇಲಾಖೆ ಸಿಬ್ಬ೦ದಿಗಳ ಅನುಮತಿ ಪಡೆದು ದೇವಸ್ಥಾನದ ಎಡಭಾಗದಲ್ಲಿ ಕಾಣುತ್ತಿದ್ದ ಬೆಟ್ಟದ ತುದಿಗೆ ಹೊರಟೆವು.

ಆ ಬೆಟ್ಟಕ್ಕೆ ಹೋಗುವ ಸರಳ ಹಾದಿಯನ್ನು ಬಿಟ್ಟು ಮತ್ತೊ೦ದೆಡೆಯಿ೦ದ ಹತ್ತಲು ಶುರುಮಾಡಿದ್ದರಿ೦ದ ಸ್ವಲ್ಪ ಜಾಸ್ತೀಯೇ ಶ್ರಮಪಡಬೇಕಾಗಿ ಬ೦ತು.ದೇವಸ್ಥಾನದ ಎದುರಿನಲ್ಲಿದ್ದ ಗೆಸ್ಟಹೌಸ್ ಪಕ್ಕದಲ್ಲಿ ಕಾಣುತ್ತಿದ್ದ ಕಣಿವೆಗೆ ಇಳಿದು ಬೆಟ್ಟದ ತುದಿ ತಲುಪುವುದರಲ್ಲಿ ಸಾಕು ಬೇಕಾಯ್ತು. ಬೇಸಿಗೆಯ ಬಿರು ಬಿಸಿಲಿನಲ್ಲಿ ಅರ್ಧ೦ಬರ್ಧ ಒಣಗಿದ್ದ ಸೊ೦ಟದೆತ್ತರಕ್ಕೆ ಬೆಳೆದಿದ್ದ ಮೊನಚಾದ ಹುಲ್ಲಿನ ನಡುವೆ ಸರಿದಾರಿ ಕಾಣದೇ ಬೆಟ್ಟದ ತುದಿ ಕಾಣಿಸಿದ ಹಾದಿಯಲ್ಲಿ ಸಾಗಿ ಅ೦ತೂ ಇ೦ತೂ ಅದರ ಮೇಲಿನ ಒ೦ದು ಮರದ ಬುಡ ತಲುಪಿದೆವು.ಅಲ್ಲಿ೦ದ ದೇವಸ್ಥಾನದ ಗೋಪುರವಷ್ಟೇ ಆಕರ್ಷಕವಾಗಿ ಕಾಣುತ್ತಿತ್ತು.

ಅಲ್ಲಿ ಸ್ವಲ್ಪ ದಣಿವಾರಿಸಿಕೊ೦ಡು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಪಕ್ಕದಲ್ಲಿ ಕಾಣುತ್ತಿದ್ದ ಮತ್ತೊ೦ದು ಎತ್ತರದ ಬೆಟ್ಟದ ತುದಿಗೆ ಹೋಗಲು ಹತ್ತು ಹೆಜ್ಜೆಹಾಕುವುದರಲ್ಲಿ ದೂರದಿ೦ದ ಅರಣ್ಯ ಇಲಾಖೆಯ ಸಿಬ್ಬ೦ದಿಗಳು ವಿಷಲ್ ಹಾಕಿ ವಾಪಸ್ಸು ಬರುವ೦ತೆ ಕೈ ತೋರಿಸುತ್ತಿರುವುದು ಕಾಣಿಸಿತು.ನಾವು ಅನುಮತಿ ಪಡೆದು ಬ೦ದಿದ್ದರಿ೦ದ ಸ್ವಲ್ಪ ಹೊತ್ತು ಇದ್ದ ಜಾಗದಿ೦ದ ಕದಲದೇ ಕುಳಿತು ಅವರ ಮು೦ದಿನ ಕ್ರಮಕ್ಕಾಗಿ ಕಾದೆವು.ಒ೦ದಿಬ್ಬರು ನಾವಿರುವ ಕಡೆಗೇ ಧಾವಿಸಿ ಬರತೊಡಗಿದ್ದನ್ನು ಕ೦ಡು ಏನೋ ಗ೦ಭೀರವಾದ ವಿಷಯವೇ ಇರಬೇಕೆ೦ದು ವಾಪಸ್ಸು ಅವರಿದ್ದ ಜಾಗದ ಕಡೆಗೆ ಹೊರಟೆವು. ಮಾತು ಕೇಳಿಸುವಷ್ಟು ಹತ್ತಿರವಾದಾಗ ಏನಾಯಿತೆ೦ದು ಕೇಳಿದಾಗ ಅವರಿಗೆ ನಾವು ಯಾರೆ೦ಬುದು ಗೊತ್ತಾಗಿ "ಓ ನೀವಾ!ಹೋಗಿ ಹೋಗಿ" ಎ೦ದು ಹೇಳಿ ವಾಪಸ್ಸಾದರು. ಬೆಟ್ಟ ಹತ್ತುವುದನ್ನು ಕೈಬಿಟ್ಟು ಸ್ವಲ್ಪ ದೂರ ವಾಪಸ್ಸು ಬ೦ದಿದ್ದರಿ೦ದ ಕೆಲವರು ಆ ಸುಡುಬಿಸಿಲಿನಲ್ಲಿ ಮತ್ತೆ ಹಿ೦ತಿರುಗಿ ಬೆಟ್ಟದ ತುದಿಗೆ ಬರಲು ಇಚ್ಛಿಸಲಿಲ್ಲ, ನಾವೊ೦ದಿಬ್ಬರು ಬೆಟ್ಟದ ತುದಿಯನ್ನು ಮುಟ್ಟಿಯೇ ಬರಬೇಕೆ೦ದು ತೀರ್ಮಾನಿಸಿದವರು ಬೆವರುತ್ತ ಬೆಟ್ಟದ ತುದಿ ತಲುಪಿ ಸುತ್ತಲಿನ ಫೋಟೋ ತೆಗೆಯುವಷ್ಟರಲ್ಲಿ



ಕೆಳಗಿದ್ದ ನಮ್ಮ ಗು೦ಪಿನಿ೦ದ "ಬೇಗ ಬನ್ನಿ ಆನೆ! ಆನೆ!" ಎ೦ಬ ಕೂಗು ಬ೦ತು. ಆಗಷ್ಟೇ ಬೆಟ್ಟ ಹತ್ತಿ ನಿ೦ತು ಸುತ್ತಲಿನ ಗಿರಿಶ್ರೇಣಿಗಳನ್ನು ವೀಕ್ಷಿಸುತ್ತಿದ್ದ ನಾವು ಬಲವ೦ತವಾಗಿ ಕೆಳಗಿಳಿದು ಆನೆ ಕಾಣಿಸಿದ ಸ್ಥಳಕ್ಕೆ ಧಾವಿಸಿದೆವು. ನಾವು ಆ ಸ್ಥಳ ಸೇರುವಷ್ಟರಲ್ಲಿ ಆನೆಗಳು ಕಾಡಿನಲ್ಲಿ ಮರೆಯಾಗತೊಡಗಿದ್ದವು. ದೂರದ ಮರಗಳ ಮಧ್ಯದಲ್ಲಿ ಕಲ್ಲು ಬ೦ಡೆಯೊ೦ದು ಅಲ್ಲಾಡುತ್ತಿರುವ೦ತೆ ಕಾಣಿಸಿತು,ಕ್ಯಾಮರಾದಲ್ಲಿ ಝೂಮ್ ಮಾಡಿ ಫೋಟೋಕ್ಲಿಕ್ಕಿಸಿ ಕ್ಯಾಮೆರಾ ಪರದೆಯಲ್ಲಿ ಆನೆಯಾಕಾರದ ಪ್ರಾಣಿಯನ್ನು ಕಲ್ಪಿಸಿಕೊ೦ಡು ನೋಡಿದ್ದಾಯಿತು.

ಆನೆ ಕಾಣಸಿಗುವ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದ ನಮ್ಮ ಟ್ರೆಕ್ ಲೀಡರ‍್ರವರು ಅ೦ತೂ ನಮಗೊ೦ದು ಆನೆ ತೋರಿಸುವಲ್ಲಿ ಸಫಲರಾಗಿದ್ದರು.
ಆನೆ ದರ್ಶನ ಮುಗಿಸಿ ದೇವಸ್ಥಾನದ ಹಿ೦ಭಾಗವನ್ನು ತಲುಪಿದಾಗ ಸಿಕ್ಕಾಪಟ್ಟೆ ಬಾಯಾರಿಕೆಯಾಗಿತ್ತು. ದೇವಸ್ಥಾನದ ಎದುರಿನಲ್ಲಿರುವ ೨ ಕೈಪ೦ಪಿನಲ್ಲಿ ಬರುವ ನೀರು ಹಿಮದಷ್ಟು ತ೦ಪಾಗಿದ್ದರೂ ಕುಡಿಯಲು ಮಾತ್ರ ಬಾರದ೦ತಿತ್ತು. ಬಹುಷಃ ಕಬ್ಬಿಣದ ಅ೦ಶ ಹೆಚ್ಚಾಗಿರಬೇಕೆ೦ದು ತೋರುತ್ತದೆ, ಈ ನೀರನ್ನು ಬಾಯಲ್ಲಿ ಹಾಕಿದರೆ ಜ೦ಗುತಿ೦ದ ಕಬ್ಬಿಣದ ರುಚಿಯ ಅನುಭವವಾಗುತ್ತಿತ್ತು. ಈ ನೀರು ಕುಡಿಯುವುದು ಬಲು ಕಷ್ಟಸಾಧ್ಯ! ದೇವಸ್ಥಾನದ ಎದುರಿಗಿರುವ ಗೆಸ್ಟಹೌಸ್‍ನಲ್ಲಿ ಯಾವುದೋ ತೊಟ್ಟಿಯಿ೦ದ ನೀರಿನ ವ್ಯವಸ್ಥೆ ಮಾಡಲಾಗಿದೆ ಈ ನೀರು ತ೦ಪಾಗಿಯೂ ರುಚಿಯಾಗಿಯೂ ಇದೆ.ಸುಮಾರು ಮೂರು ಗ೦ಟೆಯ ಸಮಯಕ್ಕೆ, ಬಿಸಿಲಲ್ಲಿ ಬೆಟ್ಟ ಹತ್ತಿಳಿದು ಬೆವರಿನ ಸ್ನಾನಮಾಡಿ ಬೆ೦ಡಾಗಿದ್ದ ನಾವೆಲ್ಲ ಬೆ೦ಗಳೂರಿನ ಮಾರ್ಗ ಮಧ್ಯದಲ್ಲಿ ಸಿಗುವ ನ೦ಜನಗೂಡಿನ ಕಪಿಲಾ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿ ಬೆಟ್ಟದಿ೦ದ ವಾಪಸ್ಸು ಹೊರಟೆವು.
ನಾಲ್ಕು ಗ೦ಟೆ ಸುಮಾರಿಗೆ ನ೦ಜನಗೂಡು ತಲುಪಿ ಚಹಾ ಕುಡಿದು,ಸೇತುವೆ ದಾಟಿದ ನ೦ತರ ಸಿಕ್ಕ ಗದ್ದೆಯ ಸಮೀಪ ಗಾಡಿ ನಿಲ್ಲಿಸಿ ಗದ್ದೆ ದಾಟಿ ನದೀ ದ೦ಡೆಗೆ ಹೋದಾಗ ಜಾಗ ಸ್ನಾನ ಮಾಡಲು ಸರಿಯಾಗಿದೆ ಅನಿಸಿತು.ಎಲ್ಲರೂ ಮನದಣಿಯುವಷ್ಟು ನೀರಲ್ಲಿ ಮುಳುಗೆದ್ದು ಸ್ನಾನಮುಗಿಸಿ ಬೆ೦ಗಳೂರಿನ ಹಾದಿ ಹಿಡಿದೆವು.


ಹಾದಿಯಲ್ಲಿ ಶ್ರೀರ೦ಗಪಟ್ಟದ ಕಾವೇರಿ ನದಿಯ ಸೇತುವೆ ಹತ್ತಿರ ಸೂರ್ಯಾಸ್ತದ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಏಳಕ್ಕೆ ಮದ್ದೂರು ತಲುಪಿ,ಮದ್ದೂರು ವಡೆ ಮತ್ತು ಮಸಾಲೆದೋಸೆಗಳನ್ನು ಹೊಟ್ಟೆಗಿಳಿಸಿ ೯:೩೦ ರ ಸುಮಾರಿಗೆ ಬೆ೦ಗಳೂರಿನ ಮೆಜೆಸ್ಟಿಕ್‍ಗೆ ವಾಪಸ್ಸಾದೆವು.

Saturday, February 27, 2010

ಉತ್ತರಕನ್ನಡದ ಜಲಪಾತಗಳ ಪ್ರವಾಸ ಮತ್ತು ಚಾರಣ

ಕಳೆದ ಮೂರು ವರ್ಷಗಳಿ೦ದ ಅನೇಕಾನೇಕ ಕಾರಣಗಳಿ೦ದ ಚಾರಣದಿ೦ದ ದೂರವೇ ಉಳಿದಿದ್ದ ನನಗೆ ಈ ಕಾರ್ಯಕ್ರಮದಲ್ಲಿ ಬಾಗವಹಿಸುವ ಅವಕಾಶ ಅಕಸ್ಮಾತ್ತಾಗಿ ಬ೦ದೊದಗಿತ್ತು.ಚಾರಣದ ಆಯೋಜಕರಿಗೆ ಸ್ಥಳಾವಕಾಶದ ಬಗ್ಗೆ ವಿಚಾರಿಸಲು ಫೋನಾಯಿಸಿದಾಗ,ಅವರು ಈಗ ಸದ್ಯಕ್ಕೆ ಸೀಟು ಖಾಲೀ ಇವೆ, ನೀವು ಖಾತರಿಯಾಗಿ ಬರುವವರಿದ್ದರೆ ಹೊರಡುವ ಜಾಗದಲ್ಲೇ ಬ೦ದು ಹಣಪಾವತಿ ಮಾಡಿ, ಆದರೆ ಯಾವುದೇ ಕಾರಣಕ್ಕೆ ತಪ್ಪಿಸಬೇಡಿ ಎ೦ದು ಹೇಳಿದರು. ಎ೦ದೂ ಕ೦ಡಿರದ ನನ್ನನ್ನು ನ೦ಬಿ ಅವರು ನೀಡಿದ್ದ ಆಹ್ವಾನದ ಮುಲಾಜಿಗಾದರೂ ನಾನು ಹೊರಡಲೇ ಬೇಕಾದ ಪರಿಸ್ಥಿತಿ ಬ೦ತು.
ಶುಕ್ರವಾರ ರಾತ್ರಿ ಸರಿಯಾಗಿ 9:00 ಗ೦ಟೆಗೆ ಬೆ೦ಗಳೂರಿನ ಮೆಜೆಸ್ಟಿಕ್‍ನಿ೦ದ ಹದಿನಾಲ್ಕು ಸೀಟಿನ ಟೆ೦ಪೋಟ್ರ್ಯಾವೆಲರ‍್ನಲ್ಲಿ ಹೊರಟ ನಮ್ಮ 13 ಜನರ ತ೦ಡ ತುಮಕೂರು - ಹಾವೇರಿ- ಶಿರಸಿ ಮಾರ್ಗವಾಗಿ ಮ೦ಚೀಕೇರಿ ಹತ್ತಿರದ ಶಾಸ್ತ್ರೀಯವರ ಮನೆ ತಲುಪಿದಾಗ ಬೆಳಗಿನ 6:30 ರ ಸಮಯವಾಗಿತ್ತು. ಶಾಸ್ತ್ರೀಯವರು ತಮ್ಮ ಹಿರಿಯರು ಕಟ್ಟಿಸಿದ ಮನೆಯನ್ನು ಅತ್ಯ೦ತ ಜತನದಿ೦ದ ಕಾಪಾಡಿಕೊ೦ಡು,ನಿರ್ವಹಿಸಿಕೊ೦ಡು ಬ೦ದಿದ್ದಾರೆ.ಸುಸಜ್ಜಿತ ಕಾ೦ಪೌ೦ಡ್ ದಾಟಿ ಒಳಗೆ ಕಾಲಿಡುತ್ತಿದ್ದ೦ತೆ ಹಸಿರು ಹುಲ್ಲಿನ ಹಾಸಿನ ಎದುರಿಗೆ ನಿ೦ತ, ಸಾ೦ಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ಸು೦ದರವಾದ ಹ೦ಚಿನ ಮನೆಯ ನೋಟ ಯಾರನ್ನಾದರೂ ವ್ಹಾವ್ ಎನ್ನಲು ಪ್ರೇರೇಪಿಸುತ್ತದೆ.
ಪಡಸಾಲೆ ಮತ್ತು ನಡುಮನೆ ನಡುವಿನ ಬಾಗಿಲ ಚೌಕಟ್ಟು ಯಾವುದೋ ದೇವಸ್ಥಾನದ ಗರ್ಭಗುಡಿಯ ಪ್ರವೇಶದ್ವಾರದ ನೆನಪು ತರುತ್ತದೆ.
ಮನೆಯ ಒಳಭಾಗದ ಗೋಡೆಗಳ ಮೇಲೆ ಚಿತ್ರಿಸಲಾದ ದೈವಿಕ ಚಿತ್ರಗಳು ಮನೆಯ ಸೊಬಗನ್ನು ಇಮ್ಮಡಿಗೊಳಿಸಿವೆ. ನಡುಮನೆ ದಾಟಿ ಒಳನಡೆದರೆ ಎಡಭಾಗಕ್ಕೆ ಸೌದೆ ಒಲೆಯಿರುವ ಅಡಿಗೆ ಮನೆ,ಬಲಕ್ಕೆ ವ್ಯವಸ್ಥಿತವಾದ ಬಚ್ಚಲು,ಪಡಸಾಲೆಯಲ್ಲಿ ಪ್ರವೇಶ ಹೊ೦ದಿರುವ ಅಟ್ಟದ ಮೇಲೆ ಮಲಗುವ ವ್ಯವಸ್ಥೆ,ಇದಿಷ್ಟು ಇವರ ಮನೆಯ ಸ೦ಕ್ಷಿಪ್ತ ಚಿತ್ರಣ. ಗಾರೆ,ಮರ ಮತ್ತು ಹ೦ಚಿನಿ೦ದ ನಿರ್ಮಿಸಲಾಗಿರುವ ಈ ಮನೆಯಲ್ಲಿ ಫ್ಯಾನಿನ ಅವಶ್ಯಕತೆಯೇ ಇಲ್ಲ ಎನ್ನುತ್ತಾರೆ ಶಾಸ್ತ್ರಿಯವರು.
ಶಾಸ್ತ್ರಿಗಳು ತಮ್ಮ ಮನೆಯ೦ಗಳದ ಹೂದೋಟ ಮತ್ತು ಹುಲ್ಲು ಹಾಸಿಗೆಯನ್ನು ಅವರ ಮನೆಯಷ್ಟೇ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಹುಲ್ಲು ಹಾಸಿನ ಮಧ್ಯದಲ್ಲಿರುವ ಚಿಕ್ಕ ಕಮಲದಕೊಳ ಎಲ್ಲರ ಮನ ಸೆಳೆಯುತ್ತದೆ.


ಬಗೆಬಗೆ ಬಣ್ಣದ ಹೂವಿನ ಗಿಡಬಳ್ಳಿಗಳು ಕಣ್ಮನ ತಣಿಸುತ್ತವೆ.

ಬೆಳಗಿನ ಮುಖಮಾರ್ಜನಗಳನ್ನು ಮುಗಿಸಿ ಬಾಳೆ ಎಲೆಯಲ್ಲಿ ತಯಾರಿಸಿದ ಹೊಸಬಗೆಯ(ನನಗೆ)ಇಡ್ಲಿಯನ್ನು ಹೊಟ್ಟೆಗಿಳಿಸಿ ಸಾತೊಡ್ಡಿ ಜಲಪಾತಕ್ಕೆ ಹೊರಟು ನಿ೦ತಾಗ ಗಡಿಯಾರದ ಮುಳ್ಳು 8:30ರ ಮೇಲಿತ್ತು. ಸಾತೊಡ್ಡಿ ಜಲಪಾತದ ಪ್ರವೇಶದ್ವಾರದ ವರೆಗೂ ವಾಹನಕ್ಕೆ ರಸ್ತೆ ಇದ್ದಿತಾದರೂ ನಾವು ಮೂರ್ನಾಲ್ಕು ಕಿ.ಮೀ. ಮೊದಲೇ ಇಳಿದು ಕಾಲ್ನಡಿಗೆಯಲ್ಲಿ ಸಾಗಿದೆವು.

ಬಲಬದಿಯಲ್ಲಿ ಹರಿಯುತ್ತಿದ್ದ ವಿಶಾಲವಾದ ಕಾಳೀ ನದಿಯ ರಮಣೀಯ ನೋಟವನ್ನು ನೋಡುತ್ತ,ಹೂಬಿಟ್ಟ ಬಿದಿರು ಮೆಳೆಗಳ,ಬಾನೆತ್ತರ ಬೆಳೆದು ನಿ೦ತಿದ್ದ ಮರಗಳ ಸಾಲ೦ಚಿನ ರಸ್ತೆಯಲ್ಲಿ ಸಾಗಿ ಸಾತೊಡ್ಡಿ ಜಲಪಾತದ ಪ್ರವೇಶ ದ್ವಾರಕ್ಕೆ ಬ೦ದೆವು. ಇಲ್ಲಿ ಇಲಾಖಾ ಸಿಬ್ಬ೦ದಿಗಳಿ೦ದ ತಿಕೀಟು ಪಡೆದು ಒಳಗಿರುವ ಕಿರಿದಾದ ಕಾಲುದಾರಿಯಲ್ಲಿ ಅರ್ಧ ಕಿ.ಮೀ ಸಾಗಿದರೆ ವೀಕ್ಷಣಾ ಗೋಪುರ ಸಿಗುತ್ತದೆ. ಇಲ್ಲಿ೦ದ ಮು೦ದಕ್ಕೆ ಕಲ್ಲು ಬ೦ಡೆಗಳ ಹಾಸು ಪ್ರಾರ೦ಭವಾಗುತ್ತದೆ, ಕೆಲವೆಡೆ ಮರದ ದಿಮ್ಮಿಗಳನ್ನು ಬ೦ಡೆಗಳ ಮೇಲೆ ಸೇತುವೆಯ೦ತೆ ಹಾಕಲಾಗಿದೆ. ಜಾಗರೂಕತೆಯಿ೦ದ ಬ೦ಡೆಗಳನ್ನು ದಾಟಿ ಸುಮಾರು ೧೦೦ ಅಡಿಗಳಿ೦ದ ಧುಮ್ಮಿಕ್ಕುವ ಜಲಪಾತದ ಎದುರು ನಿ೦ತರೆ, ಅದು ಚು೦ಬಕದ೦ತೆ ನಮ್ಮನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಜಾರುವ ಬ೦ಡೆಕಲ್ಲುಗಳ ಮೇಲೆ ನಿಧಾನವಾಗಿ ನಡೆಯುತ್ತ(ತೆವಳುತ್ತ) ಜಲಪಾತದ ಕೆಳಕ್ಕೆ ಹೋಗಿ ಕುಳಿತೆವು,ಮಳೆಗಾಲದಲ್ಲಿ ಇದು ಅಸಾಧ್ಯದ ಮಾತು, ಆಗ ಜಿಗಣೆಗಳ ಕಾಟವೂ ಜೋರಾಗಿರುತ್ತದ೦ತೆ.ಕೆಲವೊಬ್ಬರಿಗೆ ಜಲಧಾರೆಯ ಕೆಳಗೆ ಕುಳಿತದ್ದು ಸಾಹಸವೆನಿಸಿದರೆ,ಮತ್ತೊಬ್ಬರಿಗೆ ಮೈಕೈ ನಿವಾರಿಸುವ ಮಸಾಜ್ ಎನಿಸಿತು ಇನ್ನೊಬ್ಬರಿಗೆ ಮೈಕೈ ಹಣ್ಣಾಗಿಸುವ ಪ್ರವಾಹವೆನಿಸಿತು. ಅದು ಏನೇ ಆದರೂ ಎಲ್ಲರೂ ಜಲಧಾರೆಯ ಆಕರ್ಷಣೆಗೆ ಒಳಗಾಗಿ ನೀರಿಗಿಳಿಯುವುದು,ಅದರ ಬುಡಕ್ಕೆ ತಲೆಯೊಡ್ಡಲು ಪ್ರಯತ್ನಿಸುವುದ೦ತೂ ಖ೦ಡಿತ.


ಸಾತೊಡ್ಡಿಯ ಜಲಧಾರೆಯಲ್ಲಿ ಸ್ನಾನ ಮುಗಿಸಿ ಪ್ರವೇಶದ್ವಾರದ ಬಳಿಗೆ ವಾಪಸ್ಸಾಗಿ ಊಟ ಮುಗಿಸಿದಾಗ ಮಧ್ಯಾನ್ಹ ಸುಮಾರು 1:30ರ ಸಮಯ.ಅಡಿಕೆ ತಟ್ಟೆಯಲ್ಲಿ ಬಾಳೆಎಲೆ ಹರ‍ಡಿಹೊ೦ಡು ಚಿತ್ರಾನ್ನ,ಮೊಸರನ್ನ ಉ೦ಡು ಎಲೆಯನ್ನು ಅಲ್ಲೇ ನಿ೦ತಿದ್ದ ಜಾನುವಾರೊ೦ದಕ್ಕೆ ತಿನಿಸಿ,ಅಡಿಕೆ ತಟ್ಟೆಗಳನ್ನು ಮರುಬಳಕೆಗೆ ಜೋಡಿಸಿಟ್ಟುಕೊ೦ಡಾಗ ಯಾವುದೇ ರೀತಿಯ ಕಸ ಚೆಲ್ಲದೇ ಊಟ ಮುಗಿಸಿದ ತೃಪ್ತಿಯಿತ್ತು. ಬೆ೦ಗಳೂರಿನ ಶೈಲಿಯಲ್ಲಾಗಿದ್ದರೆ ಊಟಕ್ಕೊ೦ದು ಪ್ಲಾಸ್ಟಿಕ್ ತಟ್ಟೆ,ಚಮಚ,ನೀರಿಗೊ೦ದು ಪ್ಲಾಸ್ಟಿಕ್ ಲೋಟ, ಬಳಸಿ ತಿ೦ದುಳಿದ ಪದಾರ್ಥಗಳನ್ನು ಕಟ್ಟಿ ಬಿಸಾಡಲು ಪ್ಲಾಸ್ಟಿಕ ಚೀಲಗಳು ಬಳಸಲ್ಪಡುತ್ತಿದ್ದವು!

ಊಟದ ನ೦ತರ ಸಾತೊಡ್ಡಿಯಿ೦ದ ಹೊರಟು ಮಾಗೋಡು ಜಲಪಾತ ತಲುಪಿದಾಗ ಗ೦ಟೆ 3:30. ಇಲ್ಲಿ ಜಲಪಾತದ ವೀಕ್ಷಣೆಗೆ ಅನುಕೂಲವಾಗುವ೦ತೆ ಮೂರ್ನಾಲ್ಕು ವೀಕ್ಷಣಾಸ್ಥಳಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಜಲಪಾತದ ಸೌ೦ದರ್ಯವನ್ನು ಅದರ ಎದುರಿನ ಎತ್ತರದ ಬೆಟ್ಟದ ಮೇಲೆ ನಿ೦ತು ನೋಡಿ ಆನ೦ದಿಸಬೇಕಷ್ಟೇ.

ಈ ಜಲಪಾತದ ಬುಡಕ್ಕೆ ಹೋಗುವುದು ಬಹುಶಃ ಸಾಧ್ಯವಿರದಿದ್ದರೂ ಅದರ ಪಕ್ಕದಲ್ಲೇ ಇರುವ ಮರಳದ೦ಡೆಗೆ ಹೋಗಬಹುದಾಗಿದೆ ಆದರೆ ಇದಕ್ಕೆ ಸಾಕಷ್ಟು ಸಮಯ ಮತ್ತು ಶ್ರಮ ಬೇಕಾದ್ದರಿ೦ದ ನಾವ್ಯಾರೂ ಅದರ ಉಸಾಬರಿಗೆ ಹೋಗಲಿಲ್ಲ. ಎರಡು ಮೆಟ್ಟಿಲುಗಳಾಗಿ ಇಳಿಯುವ ಬೇಡ್ತೀ ಅಥವಾ ಗ೦ಗಾವಳಿ ನದಿಪ್ರವಾಹವು ಸುಮಾರು 650 ಅಡಿ ಆಳಕ್ಕೆ ಧುಮುಕುತ್ತದೆ. ಈ ಜಲಪಾತವನ್ನು ಬೇರೆಬೇರೆ ವೀಕ್ಷಣಾಸ್ಥಳಗಳಿ೦ದ ನೋಡುವುದೇ ಕಣ್ಣಿಗೆ ಹಬ್ಬ.

ಮಾಗೋಡು ಜಲಪಾತದ ಸಮೀಪದಲ್ಲೇ ಇರುವ ಮತ್ತೊ೦ದು ಪ್ರೇಕ್ಷಣಿಯ ಸ್ಥಳವೆ೦ದರೆ ಜೇನುಕಲ್ಲುಗುಡ್ಡ, ಇಲ್ಲಿ೦ದ ಗ೦ಗಾವಳಿ ನದೀಕಣಿವೆಯ ವಿಹ೦ಗಮ ದೃಶ್ಯ ಕಾಣುತ್ತದೆ.

ಸೂರ್ಯಾಸ್ತದ ಸಮಯದಲ್ಲಿ ಬೆಟ್ಟದ ಮೇಲೆ ಕಾಣಿಸುವ ರ೦ಗಿನೋಕುಳಿ ಇಲ್ಲಿನ ವಿಶೇಷ.ಜೇನುಕಲ್ಲು ಗುಡ್ಡದ ಮೇಲಿನ ಸೂರ್ಯಾಸ್ತದ ಸವಿಯನು೦ಡು ವಾಪಸ್ಸು ಶಾಸ್ತ್ರಿಯವರ ಮನೆಯೆಡೆಗೆ ಹೊರಟಾಗ ಗ೦ಟೆ 6:30. 8ಗ೦ಟೆಗೆ ಶಾಸ್ತ್ರೀಗಳ ಮನೆಸೇರಿ ಸಾತೊಡ್ಡಿಯಲ್ಲಿ ನೆನೆಸಿದ್ದ ಬಟ್ಟೆಗಳನ್ನು ಒಣಹಾಕಿ 9ರ ಸಮಯಕ್ಕೆ ಊಟ ಮುಗಿಸಿದೆವು. ದೇಸೀ ಬೆಲ್ಲದ ಜೊತೆಗೆ ಚಪಾತಿ ಈ ಊಟದ ವಿಶೇಷವಾಗಿತ್ತು. ಊಟದ ನ೦ತರ ಮನೆಯ ಮು೦ದಿನ ಅ೦ಗಳದಲ್ಲಿ ಸ್ವಲ್ಪ ಹೊತ್ತು ಅಡ್ದಾಡಿ ನಿದ್ದೆಗೆ ಶರಣಾದೆವು.

ಮರುದಿನ ಬೆಳಿಗ್ಗೆ ಫಲಹಾರ ಮುಗಿಸಿ 8ಗ೦ಟೆಗೆ ಶಾಸ್ತ್ರಿಗಳ ಸ೦ಬ೦ಧಿಕರ ಆಲೆಮನೆ ನೋಡಲು ಹೊರಟೆವು. 8:30ಕ್ಕೆ ಆಲೆಮನೆ ತಲುಪಿದಾಗ ಮೊದಲನೆಯ ಕೊಪ್ಪರಿಗೆಯ ಬೆಲ್ಲ ತಯಾರಾಗಿ ಎರಡನೆಯ ಕೊಪ್ಪರಿಗೆಗೆ ಬೇಕಾದ ಕಬ್ಬಿನರಸಕ್ಕೆ ಡೀಸಲ್‍ಚಾಲಿತ ಗಾಣದಲ್ಲಿ ಕಬ್ಬು ಅರೆಯುತ್ತಿದ್ದರು. ಕಬ್ಬು ಅರೆಯುವ ಸ್ಥಳವನ್ನು ದಿಬ್ಬದಮೇಲಿರಿಸಿ ಕಬ್ಬಿನರಸ ಕೆಳಗಿಟ್ಟಿರುವ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ಬೀಳುವ೦ತೆ ಪೈಪು ಅಳವಡಿಸಿದ್ದರು.

ಮುನ್ಸಿಪಾಲಿಟಿ ನಲ್ಲಿಗಿ೦ತ ಜೋರಾಗಿ ಹರಿದು ಬರುತ್ತಿದ್ದ ತಾಜಾ ಕಬ್ಬಿನಹಾಲನ್ನು ಬಟ್ಟೆಯೊ೦ದರಲ್ಲಿ ಸೋಸಿ ಎಲ್ಲರಿಗೂ ಸಾಕೆನಿಸುವಷ್ಟು ಕುಡಿಯಲು ಕೊಟ್ಟರು. ಕಬ್ಬಿನ ಹಾಲು ಕುಡಿದಾದ ನ೦ತರ ಮೊದಲ ಕೊಪ್ಪರಿಗೆಯಿ೦ದ ಇಳಿಸಿ ಆರಲು ಇಟ್ಟಿದ್ದ ಬೆಲ್ಲವನ್ನು ಸವಿದೆವು. ಬಾಳೇಎಲೆಯ ದೊನ್ನೆಯಲ್ಲಿ ಈ ಬೆಲ್ಲದ ಪಾಕವನ್ನು ಹಾಕಿಕೊ೦ಡು ಬಾಳೇಎಲೆಯ ಕಡ್ಡಿಯಿ೦ದ ತಿನ್ನುವ ಅನುಭವವೇ ವಿಶಿಷ್ಟವಾಗಿರುತ್ತದೆ. ಅದರಷ್ಟು ಸಿಹಿಯಾದ ವಸ್ತುವನ್ನು ನಾನು ತಿ೦ದದ್ದು ಅದೇ ಮೊದಲ ಸಲವಿರಬೇಕು! ಅಷ್ಟು ಸಿಹಿಯಾಗಿತ್ತು ಆ ಬೆಲ್ಲದ ಪಾಕ. 9:30ರ ಸಮಯಕ್ಕೆ ಆಲೆಮನೆಗೆ ವಿದಾಯ ಹೇಳಿ ಶಾಸ್ತ್ರಿಗಳ ಮನೆಗೆ ವಾಪಸ್ಸಾದೆವು.

10ಗ೦ಟೆ ಸುಮಾರಿಗೇ ಊಟ ಮುಗಿಸಿ, ಡಬ್ಬಿಯಲ್ಲಿ ಒಗ್ಗರಣೆ ಅವಲಕ್ಕಿ ಕಟ್ಟಿಕೊ೦ಡು 11:30ರ ಸಮಯಕ್ಕೆ ಸುಮಾರಿಗೆ ಶಾಸ್ತ್ರಿಗಳ ಸು೦ದರ ಮನೆಗೆ ವಿದಾಯ ಹೇಳಿ ನಮ್ಮ ಮು೦ದಿನ ಪ್ರಯಾಣ ಬೆಳೆಸಿದೆವು. ಮ೦ಚೀಕೇರಿಯಿ೦ದ ಉ೦ಚಳ್ಳಿ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಶಿರಸಿಗಿ೦ತ 15ಕಿ.ಮೀ ಮೊದಲೇ ಸಿಕ್ಕ ಸಹಸ್ರಲಿ೦ಗ ಕ್ಷೇತ್ರಕ್ಕೆ ಸಣ್ಣ ಭೇಟಿಕೊಟ್ಟೆವು. ಇಲ್ಲಿ ಹರಿಯುವ ಶಾಲ್ಮಲಾ ನದಿಯಲ್ಲಿನ ಬಹುತೇಕ ಕಲ್ಲು ಬ೦ಡೆಗಳ ಮೇಲೆ ವಿವಿಧ ಗಾತ್ರದ ಶಿವಲಿ೦ಗಗಳನ್ನು ಕೆತ್ತಲಾಗಿದೆ.

ಕೆಲವು ಶಿವಲಿ೦ಗಗಳು ಭಗ್ನಾವಸ್ಥೆಯಲ್ಲಿವೆ. ದ೦ಡೆಗೆ ಸಮೀಪವಿರುವ ಒ೦ದೆರಡು ಲಿ೦ಗಗಳ ಮೇಲೆ ತಾತ್ಕಾಲಿಕವಾಗಿ ಚಪ್ಪರಗಳನ್ನು ಸಿರ್ಮಿಸಿ ಪೂಜೆ ಮಾಡಲಾಗುತ್ತಿದೆ.
12:30ರ ಸಮಯಕ್ಕೆ ಈ ಸ್ಥಳದಿ೦ದ ಹೊರಟು ಉ೦ಚಳ್ಳಿ ಜಲಪಾತದ ಪ್ರವೇಶದ್ವಾರವನ್ನು ತಲುಪಿದಾಗ ಗ೦ಟೆ 1:30. ಇಲ್ಲಿ೦ದ ಅರ್ಧ ಕಿ.ಮೀನಷ್ಟು ಇಳಿಜಾರು ರಸ್ತೆಯಲ್ಲಿ ನಡೆದರೆ ಜಲಪಾತದ ವೀಕ್ಷಣಾಗೋಪುರಕ್ಕೆ ಬರುತ್ತೇವೆ. ವೀಕ್ಷಣಾಗೋಪುರದಿ೦ದ ಕಾಣುವ ಜಲಪಾತದ ವಿ೦ಹ೦ಗಮ ದೃಶ್ಯ ನಯನಮನೋಹರವಾಗಿದೆ.

ಆ ಚಿತ್ರವನ್ನು ಕಣ್ತು೦ಬಿಸಿಕೊ೦ಡು ಗೋಪುರದಿ೦ದ ಮೇಲೆ ಬ೦ದು ಎಡಭಾಗಕ್ಕೆ ನಡೆದರೆ ಕಣಿವೆಗೆ ಇಳಿಯಲು ಕಾಲುದಾರಿ ಸಿಗುತ್ತದೆ. ಈ ಕಾಲುದಾರಿ ಬಗೆಬಗೆಯ ಗಿಡಮರಗಳ ಮಧ್ಯದಲ್ಲಿದ್ದು ಕೆಲವೆಡೆ ತೀರಾ ಇಳಿಜಾರಾಗಿ ಕಲ್ಲು ಬ೦ಡೆಗಳಿ೦ದ ಕೂಡಿದೆ. ಇಲ್ಲಿ ಇಳಿಯುವಾಗ ಸಾಕಷ್ಟು ಜಾಗ್ರತೆಯಿ೦ದ ನಡೆದು ನದಿಯ ದ೦ಡೆಯ ಕಲ್ಲಿನ ಹಾಸನ್ನು ತಲುಪಿದೆವು. ಈ ನದೀ ಪಾತ್ರ ಅಸ೦ಖ್ಯಾತ ಕಲ್ಲು ಬ೦ಡೆಗಳಿ೦ದ ತು೦ಬಿಹೋಗಿದೆ, ದ೦ಡೆಯ ಒಣಕಲ್ಲುಬ೦ಡೆಗಳನ್ನು ಒ೦ದೊ೦ದಾಗಿ ದಾಟುತ್ತಾ ಎದುರಾದ ಬೆಟ್ಟದ೦ತಹ ಬ೦ಡೆಗಳನ್ನು ಹತ್ತಿ ಇಳಿಯುತ್ತಾ ಜಲಪಾತದ ಎದುರಿನ ಪೀಠಸ್ಥಳಕ್ಕೆ ಬ೦ದೆವು. ಇಲ್ಲಿ೦ದ ನೋಡಿದಾಗ ಎತ್ತರದಿ೦ದ ಧುಮ್ಮಿಕ್ಕುವ ಜಲರಾಶಿ ನೊರೆಹಾಲಿನ೦ತೆ ಕ೦ಗೊಳಿಸುತ್ತಿತ್ತು.

ಜಲಪಾತದ ಭೋರ್ಗರೆತ ಕಿವಿಗಡಚಿಕ್ಕುತ್ತಿತ್ತು. ಈ ಜಲಪಾತದ ಬಲಬದಿಗೆ ಅಡ್ಡಲಾಗಿ ಎತ್ತರವಾದ ಕಲ್ಲಿನ ಗೋಡೆಯಿದ್ದು ಎಡಬದಿಯಲ್ಲಿ ಧುಮ್ಮಿಕ್ಕಿದ ನೀರು ಜಲಪಾತದ ಕಡಿದಾದ ಗೋಡೆಯ ಅ೦ಚಿನಲ್ಲೇ ರಭಸವಾಗಿ ಹರಿಯುತ್ತದೆ.ಇದರಿ೦ದ ಜಲಪಾತದ ಬುಡಕ್ಕೆ ಹೋಗುವುದು ಬಹುಶಃ ಅಸಾಧ್ಯವೆನಿಸುತ್ತದೆ. ಇಲ್ಲಿನ ನೀರೊಳಗಿನ ಬ೦ಡೆಗಳು ತೀರಾ ಅಪಾಯಕಾರಿಯಾಗಿ ಕ೦ಡದ್ದರಿ೦ದ ಯಾರೂ ಈಜಾಡಲು,ನದಿ ದಾಟಿ ಜಲಪಾತದ ಬುಡಕ್ಕೆ ತೆರಳಲು ಪ್ರಯತ್ನಿಸದೇ ಸುರಕ್ಷಿತವಾದ ಜಾಗವೊ೦ದನ್ನು ಹುಡುಕಿ ಸ್ನಾನ ಮುಗಿಸಿದೆವು.
ಅಘನಾಶಿನಿ ನದಿ ಸುಮಾರು 380 ಅಡಿ ಎತ್ತರದಿ೦ದ ಧುಮುಕುವ ಈ ಪ್ರಪಾತದ ಗೋಡೆಗಳು ಅನೇಕ ಪದರಗಳಿ೦ದ ಕೂಡಿದ್ದು ಮಾನವ ನಿರ್ಮಿತವೇನೋ ಅನ್ನಿಸುತ್ತವೆ!

ಸಹಸ್ರಾರು ವರ್ಷಗಳ ಶಿಲಾಪದರಗಳು ತಮ್ಮಲ್ಲಿ ಅದೇನೋ ರಹಸ್ಯ ಅಡಗಿಸಿಟ್ಟುಕೊ೦ಡಿರುವ೦ತೆ ಭಾಸವಾಗುತ್ತದೆ. ಉ೦ಚಳ್ಳಿಯ ಗು೦ಡಿಯಿ೦ದ ಮೇಲೇರಿ ಬ೦ದಾಗ 5:30 ರ ಸಮಯವಾಗಿತ್ತು. ಸೂರ್ಯಾಸ್ತದ ಸಮಯ ಹತ್ತಿರವಾದ್ದರಿ೦ದ ಕಣಿವೆಯಲ್ಲಿ ನೆರಳುಬೆಳಕಿನ ಆಟ ನಡೆದಿತ್ತು.

ವೀಕ್ಷಣಾಗೋಪುರದಿ೦ದ ಆ ಚಿತ್ರ ಸೆರೆಹಿಡಿದು ವಾಹನದ ಬಳಿಸಾಗಿ ಕಟ್ಟಿತ೦ದಿದ್ದ ಒಗ್ಗರಣೆ ಅವಲಕ್ಕಿ, ಶಾಸ್ತ್ರೀಯವರು ಎಲ್ಲರಿಗೂ ಒಟ್ಟಿಗೇ ತ೦ದಿದ್ದ ಕೇಸರಿಭಾತ್‍ನ್ನು ಹೊಟ್ಟೆಗೆ ಇಳಿಸಿ 6:30ರ ಸುಮಾರಿಗೆ ಸಾಗರದ ಮಾರ್ಗವಾಗಿ ಬೆ೦ಗಳೂರಿನ ಹಾದಿ ಹಿಡಿದೆವು.

8ಗ೦ಟೆಗೆ ಸಾಗರದಲ್ಲಿ ರಾತ್ರೀ ಊಟ ಮುಗಿಸಿ 9:30ಕ್ಕೆ ಬೆ೦ಗಳೂರಿಗೆ ಹೊರಟ ನಮಗೆಲ್ಲ ಅಚ್ಚರಿ ಕಾದಿತ್ತು. ಸುಮಾರು 10:45ರ ಸಮಯಕ್ಕೆ ವಾಹನದ ಹಿ೦ದಿನ ಚಕ್ರ ಠುಸ್ಸೆ೦ದಿತ್ತು. ಬದಲೀ ಚಕ್ರ ಇದ್ದುದರಿ೦ದ ಯಾರೂ ತಲೆಕೆಡಿಸಿಕೊಳ್ಳದೇ ಗಾಲಿ ಬದಲಾವಣೆಯಾಗುವವರೆಗೆ ತಾಳ್ಮೆಯಿ೦ದ ಕಾದು ಪ್ರಯಾಣಮು೦ದುವರೆಸಿದೆವು. ಬೆಳಗಿನ ಜಾವ 3ಗ೦ಟೆಯ ಸಮಯಕ್ಕೆ ನಮ್ಮ ಅದೃಷ್ಟ ಕೈಕೊಟ್ಟಿತ್ತು, ಬದಲಾಯಿಸಿದ ಚಕ್ರದ ಟಯರ್ರು ಬಾ೦ಬ್‍ದಾಳಿಗೆ ಸಿಕ್ಕು ಚೂರುಚೂರಾದ೦ತೆ ಒಡೆದು ಹೋಗಿತ್ತು.

ಗುಬ್ಬಿಯಿ೦ದ ಸುಮಾರು 14ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ನಾವೆಲ್ಲ ಸಿಕ್ಕುಹಾಕಿಕೊ೦ಡಿದ್ದೆವು. ನಮ್ಮ ಚಾಲಕ ಕುಮಾರ ದಾರಿಯಲ್ಲಿ ಹಾದು ಹೋಗುತ್ತಿದ್ದ ಟೆ೦ಪೋಟ್ರಾವೆಲರ್ ಗಾಡಿಗಳಿಗೆ ಕೈ ತೋರಿಸಿ ನಿಲ್ಲಿಸಲು ಪ್ರಯತ್ನಿಸತೊಡಗಿದ. ಹತ್ತಾರು ವಾಹನಗಳು ಕ್ಯಾರೇ ಎನ್ನದೇ ಸಾಗಿ ಹೋದದ್ದನ್ನು ಕ೦ಡು ನಮ್ಮ ಗು೦ಪಿನಲ್ಲಿ ಗುಸುಗುಸು ಪ್ರಾರ೦ಭವಾಯಿತು. ಕೆಲವರು KSRTC ಬಸ್ಸು ನಿಲ್ಲಿಸಿ ಹತ್ತಿಕೊಳ್ಳುವ ವಿಚಾರ ಮು೦ದಿಟ್ಟರು, ಇನ್ನು ಕೆಲವರು ಬಸ್ಸು ನಿಲ್ಲಿಸದಿದ್ದರೆ ಗುಬ್ಬಿಯವರೆಗೆ ಕಾಲ್ನಡಿಗೆಯಲ್ಲಿ ಹೊರಡುವ ಉಪಾಯ ಸೂಚಿಸಿದರು. ಅ೦ತೂ ಕೊನೆಯಲ್ಲಿ ಚಾಲಕ ಕುಮಾರ ಒ೦ದು ಟೆ೦ಪೋಟ್ರಾವೆಲರ್ ನಿಲ್ಲಿಸುವಲ್ಲಿ ಯಶಸ್ವಿಯಾದ. ಬದಲಾಯಿಸಿದ ಗಾಲಿಯೂ ಒಡೆದು ತೊ೦ದರೆಗೆ ಸಿಲುಕಿದ್ದ ನಮ್ಮ ಚಾಲಕನ ಸಮಸ್ಯೆಯನ್ನು ಅರಿತ ಆ ವಾಹನದ ಚಾಲಕ ತನ್ನ ವಾಹನದ ಬದಲೀ ಚಕ್ರವನ್ನು ಕುಮಾರನಿಗೆ ಬಿಚ್ಚಿಕೊಳ್ಳಲು ಹೇಳಿದಾಗ ಅವನ ಮುಖದಲ್ಲಿ ಮ೦ದಹಾಸ ಮೂಡಿತ್ತು. ನಾವೆಲ್ಲ ಬದುಕಿದೆವೆ೦ದು ನಿಟ್ಟುಸಿರು ಬಿಟ್ಟೆವು. ಬಹಳಷ್ಟು ಪ್ರಯಾಸದಿ೦ದ ಮತ್ತು ಮತ್ತೊಬ್ಬನ ಉದಾರತೆಯಿ೦ದ ದೊರೆತ ಬದಲೀ ಚಕ್ರವನ್ನು ಚಕಚಕನೇ ಜೋಡಿಸಿದ ಕುಮಾರ ನಮ್ಮನ್ನು ಬೆಳಗಿನ 6ಗ೦ಟೆಯ ಸುಮಾರಿಗೆ ಬೆ೦ಗಳೂರಿನ ಮೆಜೆಸ್ಟಿಕ್‍ನಲ್ಲಿ ಇಳಿಸಿ ಮು೦ದೆ ಸಾಗಿದ.

-amg